ಮುಂಬೈ: ದುಬೈನಲ್ಲಿ ಅಕಾಲಿಕ ಮರಣವನ್ನಪ್ಪಿರುವ ಸೂಪರ್ ಸ್ಟಾರ್ ಶ್ರೀದೇವಿ ಯಶಸ್ಸಿನ ಉತ್ತುಂಗದಲ್ಲಿದ್ದಾಗ ಆ ಕಾಲಕ್ಕೇ ಹಾಲಿವುಡ್ ಚಿತ್ರ ಜಗತ್ತಿನ ದಂತಕಥೆಯಾಗಿದ್ದ ನಿರ್ದೇಶಕ ಸ್ಟೀವನ್ ಸ್ಪೀಲ್ ಬರ್ಗ್ ಅವರ ಆಪರ್ ಅನ್ನೇ ಶ್ರೀದೇವಿ ನಿರಾಕರಿಸಿದ್ದರಂತೆ.
ಸ್ಟೀವನ್ ಸ್ಪೀಲ್ ಬರ್ಗ್ ಅವರ ನಿರ್ದೇಶನದ ಹಾಲಿವುಡ್ ಬಾಕ್ಸ್ ಆಫೀಸ್ ದಾಖಲೆಗಳನ್ನು ಧೂಳಿಪಟ ಮಾಡಿದ್ದ ಜುರಾಸ್ಸಿಕ್ ಪಾರ್ಕ್ ಚಿತ್ರದ ಪಾತ್ರಕ್ಕೆ ನಟಿ ಶ್ರೀದೇವಿ ಅವರನ್ನು ಸಂಪರ್ಕಿಸಲಾಗಿತ್ತಂತೆ. ಆದರೆ ಚಿತ್ರದಲ್ಲಿ ತಮ್ಮ ಪಾತ್ರ ಸಣ್ಣದು ಎಂದು ನಟಿ ಶ್ರೀದೇವಿ ಆ ಪಾತ್ರವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರಂತೆ.
ತಮ್ಮ ವೃತ್ತಿ ಜೀವನದ ತುತ್ತ ತುದಿಯಲ್ಲಿದ್ದ ಶ್ರೀದೇವಿ ಹಾಲಿವುಡ್ ಸಿನಿಮಾದ ಆಫರ್ನ್ನು ಸರಸಗಟಾಗಿ ನಿರಾಕರಿಸಲು ಕಾರಣ ಚಿತ್ರದಲ್ಲಿನ ಸಣ್ಣ ಪಾತ್ರವೆಂದು ನಟಿ ಶ್ರೀದೇವಿ ಹೇಳಿಕೊಂಡಿದ್ದರಂತೆ. ಈ ಚಿತ್ರದಲ್ಲಿ ಶ್ರೀದೇವಿಯರವರಿಗೆ ನಿರ್ದೇಶಕರು ಸಣ್ಣ ಪಾತ್ರ ನೀಡಿದ್ದರಂತೆ. ಈ ಪಾತ್ರಕ್ಕೆ ನಮ್ಮ ಸ್ಟಾರ್ ಡಂ ಸೂಟ್ ಆಗಲ್ಲ ಎಂದು ಶ್ರೀದೇವಿ ಭಾವಿಸಿ ನಟಿಸಲು ಸಾಧ್ಯವಿಲ್ಲ ಎಂದಿದ್ದರು. ಆದರೆ ಜ್ಯುರಾಸಿಕ್ ಪಾರ್ಕ್ ಸೂಪರ್ ಡ್ಯೂಪರ್ ಹಿಟ್ ಆಗಿತ್ತು.
ಅಂತೆಯೇ ಅದರ ಮುಂದುವರೆದ ಭಾಗದ ಆವೃತ್ತಿಯಲ್ಲಿ ನಟ ಇರ್ಫಾನ್ ಖಾನ್ ನಟಿಸಿದ್ದರು. ನಟಿ ಶ್ರೀದೇವಿ ಇಷ್ಟೇ ಅಲ್ಲ ಈ ಹಿಂದೆ ಸಾಕಷ್ಟು ಪಾತ್ರಗಳನ್ನು ನಿರಾಕರಿಸಿದ್ದಾರೆ. ಆದರೆ ಇವರು ನಿರಾಕರಿಸಿದ ಪಾತ್ರಗಳು ಬೇರೇ ನಟಿಯರಿಗೆ ಅದೃಷ್ಟದೊಂದಿಗೆ ಸ್ಟಾರ್ ಗಿರಿಯನ್ನೂ ತಂದುಕೊಟ್ಟಿವೆ.
ಮಾಧುರಿ ದೀಕ್ಷಿತ್ಗೆ ಹೆಸರು ತಂದು ಕೊಟ್ಟ ಬೇಟಾ ಸಿನಿಮಾದಲ್ಲೂ ಅವರಿಗೆ ಆಫರ್ ಬಂದಿತ್ತು. ಆದರೆ ಅದನ್ನು ಅವರು ನಿರಾಕರಿಸಿದ್ದರು. ಅನಿಲ್ ಕಪೂರ್ ಜೊತೆಗೆ ಸಾಕಷ್ಟು ಸಿನಿಮಾ ಮಾಡಿದ ಹಿನ್ನೆಲೆಯಲ್ಲಿ ಇನ್ನಷ್ಟು ಬೇಡ ಎಂದು ಅವರು ಈ ಆಫರ್ ತಿರಸ್ಕರಿಸಿದ್ದರಂತೆ. ಇನ್ನು ಡರ್ ಸಿನಿಮಾದಲ್ಲೂ ಇದೇ ಕಥೆ ಮುಂದುವರಿದಿತ್ತು. ಶಾರೂಕ್ ಖಾನ್ ಪಾತ್ರವಾದರೆ ಮಾಡುತ್ತಿದ್ದೆ. ಆದರೆ ಜೂಹಿ ಚಾವ್ಲ ರೋಲ್ ಮಾಡಲು ಸಾಧ್ಯವಿಲ್ಲ ಎಂದವರು ಹೇಳಿದ್ದರು. ಇನ್ನು ಬಾಜಿಗರ್ನಲ್ಲಿ ಕೂಡ ಶಿಲ್ಪಾ ಶೆಟ್ಟಿ ಪಾತ್ರವನ್ನು ಅವರು ಮಾಡಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಅವರು ಆಫರ್ ರಿಜೆಕ್ಟ್ ಮಾಡಿದ್ದರು.
ಇನ್ನು ಇತ್ತೀಚೆಗೆ ತೆರೆಕಂಡು ಭಾರತೀಯ ಚಿತ್ರರಂಗದ ಎಲ್ಲ ಬಾಕ್ಸ್ ಆಫೀಸ್ ಗಳಿಕೆ ದಾಖಲೆಯನ್ನು ಧೂಳಿಪಟ ಮಾಡಿದ್ದ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದ ಶಿವಗಾಮಿ ಪಾತ್ರಕ್ಕೂ ಮೊದಲಿಗೆ ನಿರ್ದೇಶಕರು ಶ್ರೀದೇವಿ ಅವರನ್ನು ಸಂಪರ್ಕಿಸಿದ್ದರಂತೆ. ಪಾತ್ರವನ್ನು ಒಪ್ಪಿದ್ದ ಶ್ರೀದೇವಿ ಈ ಚಿತ್ರಕ್ಕಾಗಿ ದುಬಾರಿ ಸಂಭಾವನೆ ಕೇಳಿದರು ಎಂಬ ಕಾರಣಕ್ಕೆ ನಿರ್ದೇಶಕರು ಆ ಪಾತ್ರಕ್ಕೆ ನಟಿ ರಮ್ಯಾ ಕೃಷ್ಣ ಅವರನ್ನು ಆಯ್ಕೆ ಮಾಡಿದ್ದರು. ಚಿತ್ರ ತೆರೆಕಂಡು ನಟಿ ರಮ್ಯಾ ಕೃಷ್ಣ ಅವರಿಗೆ ಆಪಾರ ಕೀರ್ತಿ ತಂದು ಕೊಟ್ಟಿತ್ತು. ಚಿತ್ರ ಅಭೂತಪೂರ್ವ ಯಶಸ್ಸು ಗಳಿಸಿದ ಹಿನ್ನಲೆಯಲ್ಲಿ ಈ ಪಾತ್ರಕ್ಕಾಗಿ ನಟಿ ರಮ್ಯಾ ಕೃಷ್ಣ ಕೇಳಿದ ಸಂಭಾವನೆಗಿಂತಲೂ ಮೂರುಪಟ್ಟು ಸಂಭಾವನೆಯನ್ನು ನಿರ್ಮಾಪಕರು ನೀಡಿದ್ದರು ಎಂಬ ಮಾತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos