ಬಾಲಿವುಡ್

ಚಿತ್ರವಾಗಿ ತೆರೆ ಮೇಲೆ ಬರಲಿದೆಯಂತೆ ಕಂಗನಾ ಜೀವನ ಕಥೆ

Sumana Upadhyaya

ಬಾಲಿವುಡ್ ನಟಿ ಕಂಗನಾ ರಾನಾವತ್ ಸದ್ಯದಲ್ಲಿಯೇ ತಮ್ಮ ಜೀವನದ ಸಂಗತಿಗಳನ್ನು ಬೆಳ್ಳಿತೆರೆ ಮೇಲೆ ತರಲು ಸಜ್ಜಾಗಿದ್ದು ಅದರ ನಿರ್ದೇಶನದ ಜವಾಬ್ದಾರಿಯನ್ನು ಅವರೇ ಹೊರಲಿದ್ದಾರೆ.

ಬಾಹುಬಲಿ ಚಿತ್ರಕ್ಕೆ ಕಥೆ ಬರೆದ ಎಸ್ ಎಸ್ ರಾಜಮೌಳಿಯವರ ತಂದೆ ಕೆ ವಿ ವಿಜಯೇಂದ್ರ ಈ ಚಿತ್ರಕ್ಕೆ ಕಥೆ ಬರೆಯಲಿದ್ದಾರೆ. ಕಂಗನಾ ಅವರ ಮಣಿಕರ್ಣಿಕಾ ಚಿತ್ರಕ್ಕೆ ಕೂಡ ಕಥೆ ಬರೆದಿದ್ದು ಇವರೇ. ಅಕ್ಟೋಬರ್-ನವೆಂಬರ್ ಹೊತ್ತಿಗೆ ಚಿತ್ರದ ಶೂಟಿಂಗ್ ಆರಂಭವಾಗಲಿದೆ.

'''ನನ್ನ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ನನ್ನ ಜೀವನದ ಕಥೆಯನ್ನೇ ಆಧಾರವಾಗಿಟ್ಟುಕೊಳ್ಳುತ್ತೇನೆ. ಇದುವರೆಗೆ ನನ್ನ ಜೀವನದ ಪಯಣಗಳನ್ನು ತೆರೆಮೇಲೆ ತರಲಿದ್ದೇನೆ. ಹಾಗೆಂದು ಇದು ಪ್ರಚಾರಕ್ಕಾಗಿ ಮಾಡುವ ಸಿನಿಮಾ ಅಲ್ಲ'' ಎಂದರು.

ಚಿತ್ರದಲ್ಲಿ ಹಲವು ಹಾಸ್ಯದ ಸನ್ನಿವೇಶಗಳು ಕೂಡ ಇರುತ್ತದೆ. ನನ್ನ ಜೀವನದಲ್ಲಿ ಸಾಕಷ್ಟು ಮಂದಿ ನನಗೆ ಪ್ರೀತಿ ತೋರಿಸಿದ್ದಾರೆ. ಅವರು ನಾನು ಹೇಗೆ ಇರುತ್ತೇನೆ ಅದೇ ರೀತಿ ಒಪ್ಪಿಕೊಂಡಿದ್ದಾರೆ. ಅದನ್ನು ಚಿತ್ರದಲ್ಲಿ ತೋರಿಸುತ್ತೇನೆ, ಹಾಗೆಂದು ನನ್ನ ಜೀವನದಲ್ಲಿ ವಿವಾದಕ್ಕೀಡಾದ, ಭಿನ್ನಾಭಿಪ್ರಾಯ ತಲೆದೋರಿದ ವ್ಯಕ್ತಿಗಳ ಪಾತ್ರಗಳನ್ನು ತೋರಿಸುವುದಿಲ್ಲ, ಒಟ್ಟಿನಲ್ಲಿ ಜೀವನದ ವಿವಿಧ ಆಯಾಮಗಳಿವೆ ಎಂದು ಹೇಳಿ ಕುತೂಹಲ ಸೃಷ್ಟಿಸಿದ್ದಾರೆ.

ನನ್ನ ಜೀವನದಲ್ಲಿ ಬಂದ ಜನರ ಪಾತ್ರಗಳಿಲ್ಲದೆ ನನ್ನ ಜೀವನದ ಪಯಣವನ್ನು ಹೇಗೆ ತೋರಿಸಲು ಸಾಧ್ಯ, ಇಲ್ಲಿ ನಾನು ಒಂಟಿಯಲ್ಲ, ಆದರೆ ಯಾವುದೇ ಹೆಸರುಗಳನ್ನು ತೆಗೆದುಕೊಳ್ಳುವುದಿಲ್ಲ. ನನ್ನನ್ನು ಕಾಪಾಡಿಕೊಂಡು ನನ್ನ ಜೀವನದ ಬಗ್ಗೆ, ಏಳು  ಬೀಳುಗಳ ಬಗ್ಗೆ ತೋರಿಸುತ್ತೇನೆ. ಕೊನೆಗೂ ಒಬ್ಬ ಸಾಹಸಿ, ಯಶಸ್ವಿ ಹುಡುಗಿಯ ಕಥೆ ತೋರಿಸುವ ಚಿತ್ರವಿದು. ಪರ್ವತ ಪ್ರದೇಶದಿಂದ ಬಂದು ಬಾಲಿವುಡ್ ನಲ್ಲಿ ಯಾವ ಗಾಡ್ ಫಾದರ್ ಗಳ ರಕ್ಷೆಯಿಲ್ಲದೆ ಬೆಳೆದು ಗುರುತಿಸಿಕೊಂಡವಳ ಕಥೆ ಎಂದು ಹೇಳಿದರು ಕಂಗನಾ.

SCROLL FOR NEXT