ಇಂದೋರ್: ಇತ್ತೀಚಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಟೀಕಿಸುವವರನ್ನು ದೇಶ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಎಂದು ಖ್ಯಾತ ಬಾಲಿವುಡ್ ನಟಿ ಶಬಾನಾ ಆಜ್ಮಿ ಹೇಳಿದ್ದಾರೆ.
ದೇಶದಲ್ಲಿರುವ ನ್ಯೂನತೆ, ಇತಿಮಿತಿಗಳ ಬಗ್ಗೆ ಮಾತನಾಡುವುದರಲ್ಲಿ ಯಾವ ತಪ್ಪು ಕೂಡ ಇಲ್ಲ, ಅದರಿಂದ ಪ್ರಗತಿಗೆ ಸಹಾಯವಾಗುತ್ತದ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇಂದೋರ್ ನಲ್ಲಿ ಆನಂದ್ ಮೋಹನ್ ಮಥುರ್ ಚಾರಿಟೇಬಲ್ ಟ್ರಸ್ಟ್ ಶಬಾನಾ ಆಜ್ಮಿಯವರು ಮಹಿಳೆಯರ ಪರ ಮಾಡಿರುವ ಕೆಲಸಕ್ಕೆ ಕುಂತಿ ಮಥುರ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅದನ್ನು ಸ್ವೀಕರಿಸಿ ಮಾತನಾಡಿದ ಶಬಾನಾ ಆಜ್ಮಿ, ದೇಶದ ಹಿತಾಸಕ್ತಿಗಾಗಿ ಇಲ್ಲಿನ ಇತಿಮಿತಿಗಳ ಬಗ್ಗೆ ಮಾತನಾಡಬೇಕು. ನಮ್ಮ ಇತಿಮಿತಿ, ಕೊರತೆಗಳ ಬಗ್ಗೆ ಮಾತನಾಡದಿದ್ದರೆ ಪರಿಸ್ಥಿತಿ ಹೇಗೆ ಸುಧಾರಣೆಯಾಗುತ್ತದೆ ಎಂದು ಶಬಾನಾ ಪ್ರಶ್ನಿಸಿದರು.
ಆದರೆ ಇಂದು ಎಂತಹ ವಾತಾವರಣ ದೇಶದಲ್ಲಿದೆ ಎಂದರೆ ನೀವು ಟೀಕೆ ಮಾಡಿದರೆ ಅದರಲ್ಲೂ ಸರ್ಕಾರದ ವಿರುದ್ಧ ಮಾತನಾಡಿದರೆ ನಿಮ್ಮನ್ನು ದೇಶ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಆದರೆ ನಾವು ಇದಕ್ಕೆ ಹೆದರಬಾರದು. ನಮಗೆ ಇಲ್ಲಿ ಯಾರಿಂದಲೂ ಸರ್ಟಿಫಿಕೇಟ್ ಸಿಗಬೇಕಾಗಿಲ್ಲ ಎಂದು ಶಬಾನಾ ಆಜ್ಮಿ ಯಾವುದೇ ರಾಜಕೀಯ ಪಕ್ಷಗಳ ಹೆಸರು ಹೇಳದೆ ಮಾತನಾಡಿದರು.
ನಾವಿಲ್ಲಿ ಗಂಗಾ ಜಮ್ನಿ(ಸಂಯೋಜಿತ) ಸಂಸ್ಕೃತಿಯಲ್ಲಿದ್ದೇವೆ. ಆದರೆ ನಾವು ಯಾರ ಮುಂದೆಯೂ ಮಂಡಿಯೂರಿ ಕುಳಿತುಕೊಳ್ಳಬೇಕಾಗಿಲ್ಲ. ಭಾರತ ಒಂದು ಸುಂದರ ದೇಶ, ಜನರನ್ನು ಇಬ್ಭಾಗ ಮಾಡುವ ಯಾವುದೇ ಪ್ರಯತ್ನ ದೇಶಕ್ಕೆ ಒಳ್ಳೆಯದಲ್ಲ ಎಂದರು.