ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧರಿತ ಚಿತ್ರದ ಚಿತ್ರೀಕರಣದ ವೇಳೆ ರೈಲಿನ ಬೋಗಿಗೆ ಬೆಂಕಿ ಹಚ್ಚಿ ಗೋಧ್ರಾ ಹತ್ಯಾಕಾಂಡದ ದೃಶ್ಯ ಚಿತ್ರೀಕರಿಸಿದ ಘಟನೆ ಭಾನುವಾರ ಗುಜರಾತ್ನ ವಡೋದರದಲ್ಲಿ ನಡೆದಿದೆ.
2002 ಫೆಬ್ರವರಿ 27ರಂದು ಗೋಧ್ರಾದಲ್ಲಿ ಸಬರಮತಿ ಎಕ್ಸ್ ಪ್ರೆಸ್ ರೈಲಿಗೆ ಬೆಂಕಿ ಬಿದ್ದು 59 ಕರ ಸೇವಕರು ಸಜೀವ ದಹನವಾಗಿದ್ದರು. ಈ ಘಟನೆಯನ್ನು ಚಿತ್ರೀಕರಿಸುವುದಕ್ಕಾಗಿ ಚಿತ್ರ ತಂಡ ನಿಜವಾದ ರೈಲಿನ ಬೋಗಿಗೆ ಬೆಂಕಿ ಹಚ್ಚಿದೆ. ಭಾರಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಪಕ್ಕದ ಗ್ರಾಮಸ್ಥರು ಆತಂಕದಿಂದ ಮನೆಯಿಂದ ಓಡಿ ಬಂದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪಶ್ವಿಮ ರೈಲ್ವೆ ಪಿಆರ್ಒ ಖೇಮರಾಜ್ ಮೀನಾ ಅವರು, ರೈಲಿಗೆ ಬೆಂಕಿ ಹಚ್ಚಿದ ಸಂದರ್ಭದಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ವಡೋದರ ಅಗ್ನಿಶಾಮಕ ದಳದ ಅಧಿಕಾರಿಗಳು ಕೂಡ ಸ್ಥಳದಲ್ಲಿ ಇದ್ದರು. ಚಿತ್ರೀಕರಣಕ್ಕೆ ಅನುಮತಿ ಪಡೆಯಲಾಗಿದೆ. ಚಿತ್ರೀಕರಣದಿಂದಾಗಿ ಬೇರೆ ರೈಲುಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಮೋಕ್ ಡ್ರಿಲ್ ಬೋಗಿಯನ್ನು ಚಿತ್ರೀಕರಣಕ್ಕೆ ನೀಡಲಾಗಿತ್ತು. ಅದನ್ನು ಬಳಸುವುದಿಲ್ಲ ಎಂದು ಹೇಳಿದ್ದಾರೆ.
ಬೋಗಿಗೆ ಬೆಂಕಿಗೆ ಬಿದ್ದಿರುವ ಹೊರಗಿನ ಭಾಗದ ದೃಶ್ಯಗಳನ್ನು ಮಾತ್ರ ಇಲ್ಲಿ ಚಿತ್ರೀಕರಿಸಲಾಗಿದೆ. ಬೋಗಿಯ ಒಳಗಿನ ದೃಶ್ಯಗಳನ್ನು ಸಿನಿಮಾ ಸೆಟ್ ರೂಪಿಸಿ ಮುಂಬೈನಲ್ಲಿ ಶೂಟ್ ಮಾಡಲಾಗುವುದು ಎಂದು ಶೂಟಿಂಗ್ ಜವಾಬ್ದಾರಿ ನಿರ್ವಹಿಸಿದ್ದ ಜಯರಾಜ್ ಗಾದ್ವಿ ತಿಳಿಸಿದ್ದಾರೆ.
ಮೋದಿ ಚಿತ್ರದ ಚಿತ್ರೀಕರಣಕ್ಕಾಗಿ ನಿಜವಾದ ರೈಲು ಬೋಗಿಗೆ ಬೆಂಕಿ ಹಚ್ಚೋ ಅಗತ್ಯ ಇತ್ತಾ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವು ಜನ ಪ್ರಶ್ನಿಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos