ಬಾಲಿವುಡ್

ತುಮಕೂರು: ರೈತರ ವಿರುದ್ಧ ಟ್ವೀಟ್ ಮಾಡಿದ್ದ ಕಂಗನಾ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ

Vishwanath S

ತುಮಕೂರು: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದ ರೈತರನ್ನು ಗುರಿಯಾಗಿಸಿ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರಾಣಾವತ್ ವಿರುದ್ಧ ಪ್ರಕರಣ ದಾಖಲಿಸುವಂತೆ ಕರ್ನಾಟಕದ ತುಮಕೂರು ಸ್ಥಳೀಯ ನ್ಯಾಯಾಲಯವೊಂದು ಶುಕ್ರವಾರ ಪೊಲೀಸರಿಗೆ ನಿರ್ದೇಶನ ನೀಡಿದೆ.

ನ್ಯಾಯವಾದಿ ಎಲ್ ರಮೇಶ್ ನಾಯಕ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ರಾಣಾವತ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ(ಜೆಎಂಎಫ್‌ಸಿ) ನ್ಯಾಯಾಲಯ ಕ್ಯಾತಸಂದ್ರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್‌ ಅವರಿಗೆ ನಿರ್ದೇಶನ ನೀಡಿದೆ.

ಕಳೆದ ಸೆಪ್ಟೆಂಬರ್ 21ರಂದು ಕಂಗನಾ ರಣಾವತ್ ತನ್ನ ಟ್ವೀಟರ್ ಖಾತೆಯಲ್ಲಿ ಕಂಗನಾಟೀಮ್ ನಿಂದ ರೈತರ ವಿರುದ್ಧ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಕ್ರಿಮಿನಲ್ ಪ್ರೊಸೀಜರ್ ಸೆಕ್ಷನ್ 156(3)ರ ಅಡಿಯಲ್ಲಿ ವಕೀಲ ರಮೇಶ್ ನಾಯಕ್ ಅವರು ದೂರು ದಾಖಲಿಸಿದ್ದರು. 

ದೆಹಲಿ ಗಲಭೆಗೆ ಕಾರಣವಾದ ಸಿಎಎ ಬಗ್ಗೆ ತಪ್ಪು ಮಾಹಿತಿ ಮತ್ತು ವದಂತಿಗಳನ್ನು ಹರಡಿದ ಜನರು ಈಗ ರೈತರ ಮಸೂದೆಯ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಇದರ ಜೊತೆಗೆ ದೇಶದಲ್ಲಿ ಭಯೋತ್ಪಾದನೆಯನ್ನು ಉಂಟು ಮಾಡುತ್ತಿದ್ದಾರೆ. ಅವರು ಭಯೋತ್ಪಾದಕರು ನಾನು ಹೇಳಿದ್ದು ನಿಮಗೆ ಚೆನ್ನಾಗಿ ತಿಳಿದಿದೆ. ಆದರೂ ತಪ್ಪು ಮಾಹಿತಿಯನ್ನು ಹರಡಲು ಇಷ್ಟಪಡುತ್ತೀರಿ ಎಂದು ಟ್ವೀಟ್ ಮಾಡಲಾಗಿತ್ತು. 

SCROLL FOR NEXT