ಬಾಲಿವುಡ್

ಹಿರಿಯ ಹಾಸ್ಯನಟ ರಾಜು ಶ್ರೀವಾಸ್ತವ ನಿಧನ

Sumana Upadhyaya

ನವದೆಹಲಿ: ಬಾಲಿವುಡ್ ನ ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರಿಗೆ 58 ವರ್ಷ ವಯಸ್ಸಾಗಿತ್ತು. 

ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದ ನಂತರ ಅವರನ್ನು ಆಗಸ್ಟ್ 10 ರಂದು ದೆಹಲಿಯ ಏಮ್ಸ್‌ಗೆ ದಾಖಲಿಸಲಾಯಿತು. ಅಂದಿನಿಂದ ಅವರು ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಅವರ ಮೆದುಳು ನಿಷ್ಕ್ರಿಯವಾಗಿತ್ತು. 

'ಹಾಸ್ಯದ ರಾಜ' ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ರಾಜು ಶ್ರೀವಾಸ್ತವ ಅವರನ್ನು ಆಗಸ್ಟ್ 10 ರಂದು ಹೃದಯಾಘಾತದಿಂದ ದೆಹಲಿಯ ಏಮ್ಸ್‌ಗೆ ದಾಖಲಿಸಿದ ದಿನವೇ ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದರು, ನಂತರ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ನಂತರ ಅವರ ದೇಹಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. 

ಬಾಲಿವುಡ್ ನಲ್ಲಿ ಜನಪ್ರಿಯ: 1980 ರ ದಶಕದ ಉತ್ತರಾರ್ಧದಿಂದ ಹಿಂದಿ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ರಾಜು ಶ್ರೀವಾಸ್ತವ ಸಕ್ರಿಯರಾಗಿದ್ದರು. 2005 ರಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿ ಶೋ ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್‌ನ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ ನಂತರ ಮತ್ತಷ್ಟು ಮನ್ನಣೆಯನ್ನು ಪಡೆದರು.

ಅವರು ಮೈನೆ ಪ್ಯಾರ್ ಕಿಯಾ, ಬಾಜಿಗರ್, ಬಾಂಬೆ ಟು ಮುಂತಾದ ಜನಪ್ರಿಯ ಹಿಂದಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೋವಾ (ರೀಮೇಕ್) ಮತ್ತು ಆಮ್ದಾನಿ ಅಥಾನಿ ಖರ್ಚಾ ರುಪಯ್ಯ, ಬಿಗ್ ಬಾಸ್ ಸೀಸನ್ 3 ರ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಹಾಸ್ಯ ಮತ್ತು ಸಿನಿಮಾದ ಹೊರತಾಗಿ, ಶ್ರೀವಾಸ್ತವ್ ರಾಜಕೀಯದಲ್ಲಿಯೂ ಪ್ರಯತ್ನ ಮಾಡಿದ್ದರು. 

ಶ್ರೀವಾಸ್ತವ ಅವರು ಪತ್ನಿ ಶಿಖಾ ಮತ್ತು ಇಬ್ಬರು ಮಕ್ಕಳಾದ ಆಯುಷ್ಮಾನ್ ಮತ್ತು ಅಂತ್ರಾ ಶ್ರೀವಾಸ್ತವ್ ಅವರನ್ನು ಅಗಲಿದ್ದಾರೆ.

SCROLL FOR NEXT