ಬಾಲಿವುಡ್

ಕಲಾ ನಿರ್ದೇಶಕ ನಿತಿನ್ ದೇಸಾಯಿ ಆತ್ಮಹತ್ಯೆ: ಸಾಯುವ ಮುನ್ನ 11 ಆಡಿಯೋ ಸಂದೇಶ?

Shilpa D

ಬಾಲಿವುಡ್ ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ  ಆತ್ಮಹತ್ಯೆಗೂ  ಮುನ್ನ ಹಲವರಿಗೆ ಆಡಿಯೋ ವಾಯ್ಸ್ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಆಡಿಯೋವನ್ನು ತಮಗೆ ಕಿರುಕುಳ ಕೊಟ್ಟವರಿಗೆ ಕಳುಹಿಸಿದ್ದಾರೆ ಎಂದು ಸುದ್ದಿಯಾಗಿದೆ.

ಒಟ್ಟು ಹನ್ನೊಂದು ಆಡಿಯೋ ತುಣುಕುಗಳು ಇವೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಪೊಲೀಸರು ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲವೆಂದು ಮಾಧ್ಯಮಗಳು ವರದಿ ಮಾಡಿವೆ.

ಮುಂಬೈ ಸಮೀಪದ ಕರ್ಜತ್ ಸ್ಟುಡಿಯೊದಲ್ಲಿ ಆಗಸ್ಟ್‌ 2ರಂದು ಶವವಾಗಿ ಪತ್ತೆಯಾದ ಬಾಲಿವುಡ್ ಕಲಾ ನಿರ್ದೇಶಕ ನಿತಿನ್ ಚಂದ್ರಕಾಂತ್ ದೇಸಾಯಿ ಅವರು ಸಾಯುವ ಮೊದಲು 11 ಆಡಿಯೊ ಸಂದೇಶಗಳನ್ನು ರೆಕಾರ್ಡ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆಡಿಯೊ ರೆಕಾರ್ಡರ್ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪೊಲೀಸರ ಪ್ರಕಾರ, ದೇಸಾಯಿ ಅವರು ಆಡಿಯೊ ಸಂದೇಶಗಳಲ್ಲಿ, ತಮಗೆ ಕಿರುಕುಳ ನೀಡಿದ ಕೆಲವು ಜನರನ್ನು ಹೆಸರಿಸಿದ್ದಾರೆ. ಆದರೆ ಪೊಲೀಸರು ಹೆಸರನ್ನು ಮಾತ್ರ ಬಹಿರಂಗಪಡಿಸುತ್ತಿಲ್ಲ. ಎಫ್‌ಎಸ್‌ಎಲ್ ವರದಿಯ ನಂತರ ತನಿಖೆ ಇನ್ನಷ್ಟು ತಿರುವು ಪಡೆದುಕೊಳ್ಳಬಹುದು ಎಂದು ಹೇಳಿಕೆ ನೀಡಿದ್ದಾರೆ.

ಆಗಸ್ಟ್‌ 3ರಂದು ಮರಣೋತ್ತರ ಪರೀಕ್ಷೆಯನ್ನು ನಾಲ್ವರು ವೈದ್ಯರ ತಂಡ ನಡೆಸಿತ್ತು. ಮರಣೋತ್ತರ ವರದಿ ಪ್ರಕಾರ ನಿತಿನ್ ಚಂದ್ರಕಾಂತ್ ದೇಸಾಯಿ ನೇಣು ಬಿಗಿದುಕೊಂಡೇ ಮೃತಪಟ್ಟಿರುವುದಾಗಿ ರಾಯಗಢ ಪೊಲೀಸರು ಹೇಳಿಕೆ ನೀಡಿದ್ದರು.

ನಿತಿನ್ ದೇಸಾಯಿ ತಮ್ಮದೇ ಆದ ‘ಎನ್.ಡಿ ಸ್ಟುಡಿಯೋ’ ಹೊಂದಿದ್ದರು. ಈ ಸ್ಟುಡಿಯೋಗಾಗಿ ಅವರು ಸಾಲವನ್ನು ಪಡೆದಿದ್ದರು. ಕಾಲಮಿತಿಯೊಳಗೆ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸ್ಟುಡಿಯೋಗಾಗಿ ಇವರು 252 ಕೋಟಿ ರೂಪಾಯಿ ಸಾಲ ಮಾಡಿದ್ದರು ಎಂದು ಹೇಳಲಾಗುತ್ತಿದೆ.

ಸಾಲ ತೀರಿಸಲು ಆಗದ್ದಕ್ಕೆ ನ್ಯಾಯಾಲಯ ಕಳೆದ ವಾರವಷ್ಟೇ ಅವರಿಗೆ ನೋಟಿಸ್ ನೀಡಿತ್ತು.  ಇದರಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

SCROLL FOR NEXT