ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ತಮ್ಮ 15 ತಿಂಗಳ ಮೊಮ್ಮಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೇಗೆ ನೋಡುತ್ತಾಳೆ ಎಂಬುದನ್ನು ಇಂಗ್ಲಿಷ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮ್ಮ ಮಗಳು ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್. ರಾಹುಲ್ ಅವರ ಪುತ್ರಿ ಇವಾರಾಗೆ (Evaarah) ಮೊದಲ ಬಾರಿಗೆ ಪ್ರಧಾನಿ ಮೋದಿ ಅವರ ಬಗ್ಗೆ ಹೇಳಿದ್ದು ಮನೆಯ ದಾದಿಯರಲ್ಲಿ (ನಾನಿ) ಒಬ್ಬರು ಎಂದು ತಿಳಿಸಿದ್ದಾರೆ.
ಅಂದಿನಿಂದ ಪ್ರತಿದಿನ ಬೆಳಗ್ಗೆ ಇವಾರಾ ಪ್ರಧಾನಿ ಮೋದಿ ಅವರ ಫೋಟೋಗೆ ಗಣೇಶ ಪೂಜೆಯ ಪ್ರಸಾದ ಸಿಹಿ ಲಡ್ಡು ಅರ್ಪಿಸುತ್ತಾಳೆ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ. ಈ ಕೆಲಸವನ್ನು ಯಾರೂ ಆಕೆಗೆ ಹೇಳಿಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಹೀಗಿದ್ದರೂ ಆಕೆ ಹೀಗೆ ಮಾಡುತ್ತಿದ್ದಾಳೆ ಎಂದರೆ ಪ್ರಧಾನಿ ಮೋದಿ ಅವರಲ್ಲಿ ಏನೋ ಮಾಯಾಜಾಲ ಇದೆ ಎಂದು ಅಭಿಪ್ರಾಯಪಟ್ಟರು.
ನಾನು ಯಾವಾಗಲೂ ಪ್ರಧಾನಿ ಮೋದಿ ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದೇನೆ. ನಾನು ಯಾವುದೇ ಪಕ್ಷದ ಬಗ್ಗೆ ಮಾತನಾಡುತ್ತಿಲ್ಲ, ಒಬ್ಬ ನಾಯಕನ ಬಗ್ಗೆ ಮಾತನಾಡುತ್ತಿದ್ದೇನೆ. ಒಬ್ಬ ನಾಯಕ ನನ್ನನ್ನು ಪ್ರೇರೇಪಿಸಿದರೆ, ಅವರು ನನ್ನನ್ನು ಪ್ರೇರೇಪಿಸುತ್ತಾರೆ. ನನಗೆ ನನ್ನ ದೇಶ ಎಷ್ಟು ಪ್ರಿಯವೋ, ನನ್ನ ನಾಯಕನೂ ಅಷ್ಟೇ ಪ್ರಿಯ. ಅವರಲ್ಲಿ ಏನೋ ವಿಶೇಷತೆ ಇದೆ ಎಂದರು.
ನನ್ನ ಮೊಮ್ಮಗಳಿಗೆ ಈಗ 15 ತಿಂಗಳು. ಒಮ್ಮೆ ವಿಮಾನ ನಿಲ್ದಾಣದಲ್ಲಿ ಇದ್ದಾಗ, ನಮ್ಮ ಮನೆಯ ದಾದಿಯೊಬ್ಬರು ಆಕೆಗೆ ಮೋದಿಯವರ ಬಗ್ಗೆ ಹೇಳಿದರು. ಈಗ ಪ್ರತಿದಿನ ಬೆಳಗ್ಗೆ ಆಕೆ ಸಾಯಿಬಾಬಾ ಪುಸ್ತಕವನ್ನು ತೆಗೆಯುತ್ತಾಳೆ. ಆ ಪುಸ್ತಕದಲ್ಲಿ ಮೋದಿ ಅವರ ಫೋಟೋ ಕೂಡ ಇದೆ. ಫೋಟೋ ನೋಡುತ್ತಿದ್ದಂತೆ 'ಮೋದಿ ಜೀ' ಎಂದು ಕರೆಯುತ್ತಾಳೆ. ನಂತರ ಮನೆಯಲ್ಲಿರುವ ಗಣಪತಿ ವಿಗ್ರಹದ ಬಳಿಯ ಸಿಹಿಯನ್ನು ತೆಗೆದುಕೊಂಡು ಆ ಫೋಟೋಗೆ ಅರ್ಪಿಸುತ್ತಾಳೆ. ಇದನ್ನು ಮಾಡಲು ನಾನು ಹೇಳಿಕೊಟ್ಟಿಲ್ಲ, ಆಕೆಯ ತಂದೆ-ತಾಯಿಯೂ ಹೇಳಿಲ್ಲ. ಇದರಲ್ಲಿ ಏನೋ ವಿಶೇಷತೆ ಇದೆ. ಅವರಲ್ಲಿ ಏನೋ ಮಾಯಾಜಾಲ ಇದೆ ಎಂದು ಸಂದರ್ಶನದಲ್ಲಿ ಸುನಿಲ್ ಶೆಟ್ಟಿ ಹೇಳಿದ್ದಾರೆ.
ಸುನಿಲ್ ಶೆಟ್ಟಿ ತಮ್ಮ ಸಂದರ್ಶನಗಳಲ್ಲಿ ಆಗಾಗ ಮೊಮ್ಮಗಳ ಬಗ್ಗೆ ಮಾತನಾಡುತ್ತಾರೆ. ಈ ಹಿಂದೆ ಫ್ರೀ ಪ್ರೆಸ್ ಜರ್ನಲ್ಗೆ ನೀಡಿದ್ದ ಸಂದರ್ಶನದಲ್ಲಿ, "ಅವಳು ಅಥಿಯಾಳಂತೆಯೇ ಇದ್ದಾಳೆ. ಹೇಳಬೇಕೆಂದರೆ ಅಥಿಯಾ ಅವರ 2.0 ಆವೃತ್ತಿ. ನನಗೆ ಬಿಡುವು ಸಿಕ್ಕಾಗಲೆಲ್ಲಾ ಅವಳೊಂದಿಗೇ ಸಮಯ ಕಳೆಯುತ್ತೇನೆ ಎಂದು ಹೇಳಿದ್ದರು.
ತಮ್ಮ ದಿನಚರಿ ಬಗ್ಗೆ ಮಾತನಾಡಿದ ಅವರು, ಪ್ರತಿದಿನ ಬೆಳಗ್ಗೆ 5.30ರಿಂದ 7 ಗಂಟೆಯವರೆಗೆ ಜಿಮ್ನಲ್ಲಿ ವ್ಯಾಯಾಮ ಮಾಡುತ್ತೇನೆ. ನಂತರ ಸ್ನಾನ ಮುಗಿಸಿ ಮೊಮ್ಮಗಳೊಂದಿಗೆ ಸಮಯ ಕಳೆಯುವುದನ್ನು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ಜೀವನದ ಅತ್ಯಂತ ಸಂತೋಷದಾಯಕ ಮತ್ತು ತೃಪ್ತಿದಾಯಕ ಹಂತ ಇದಾಗಿದೆ ಎಂದು ಅವರು ಹೇಳಿದ್ದಾರೆ.
ಕೆಲಸದ ಕಾರಣದಿಂದ ಆಗಾಗ ಬ್ಯುಸಿಯಾಗಿದ್ದರೂ, ಮನೆಗೆ ಮರಳಿ ಮೊಮ್ಮಗಳೊಂದಿಗೆ ಸಮಯ ಕಳೆಯಲು ಸದಾ ಕಾತರನಾಗಿರುತ್ತೇನೆ. ಆಕೆ ನಮ್ಮ 'ಮನೆಯ ಲಕ್ಷ್ಮಿ' ಎಂದು ಸುನಿಲ್ ಶೆಟ್ಟಿ ಪ್ರೀತಿಯಿಂದ ಹೇಳಿದ್ದಾರೆ.