ಸಿನಿಮಾ ಸುದ್ದಿ

'ನೀರ್ ದೋಸೆ'ಗೆ ಬೆಲ್ಲಿ ಡ್ಯಾನ್ಸ್ ಕಲಿಯಲಿರುವ ಹರಿಪ್ರಿಯ

Guruprasad Narayana

ಬೆಂಗಳೂರು: ನೆನೆಗುದಿಗೆ ಬಿದ್ದಿದ್ದ 'ನೀರ್ ದೋಸೆ' ಸಿನೆಮಾ ಮತ್ತೆ ಜೀವ ಪಡೆದು ಈಗ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದು, ಅಕ್ಟೋಬರ್ ೨೬ ರಿಂದ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ.

"ನಾವು ಇನ್ನೂ ಮುಂಚಿತವಾಗಿಯೇ ಚಿತ್ರೀಕರಣ ಪ್ರಾರಂಭಿಸಬೇಕಿತ್ತು ಆದರೆ ಜಗ್ಗೇಶ್ ದೇಶದಲ್ಲಿಲ್ಲ ಮತ್ತು ಅವರು ಅಕ್ಟೋಬರ್ ೨೦ ರಂದು ಹಿಂದಿರುಗಲಿದ್ದಾರೆ. ಈ ಹಿರಿಯ ನಟ ಮಹತ್ವದ ಪಾತ್ರವೊಂದನ್ನು ನಿರ್ವಹಿಸುತ್ತಿರುವುದರಿಂದ ಅವರಿಲ್ಲದೆ ಮುಂದುವರೆಯಲು ಸಾಧ್ಯವಿಲ್ಲ. ಜಗ್ಗೇಶ್ ಜೊತೆ ಹರಿಪ್ರಿಯ, ದತ್ತಣ್ಣ ಮತ್ತು ಸುಮನ್ ರಂಗನಾಥ್ ಕೂಡ ಸೇರಿಕೊಳ್ಳಲಿದ್ದಾರೆ" ಎಂದು ವಿವರಿಸುತ್ತಾರೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ವಿಜಯ್ ಪ್ರಸಾದ್.

ಈ ಮಧ್ಯೆ ಸಿನೆಮಾಗಾಗಿ ಹರಿಪ್ರಿಯ 'ಬೆಲ್ಲಿ ಡ್ಯಾನ್ಸ್' ಕಲಿಯಲಿದ್ದಾರಂತೆ. "ಈಗಾಗಲೇ ಇಬ್ಬರು ನೃತ್ಯಗಾರರನ್ನು ಪಟ್ಟಿ ಮಾಡಿದ್ದೇವೆ. ಅವರಲ್ಲಿ ಒಬ್ಬರು ಹರಿಪ್ರಿಯಾ ಅವರಿಗೆ ಬೆಲ್ಲಿ ಡ್ಯಾನ್ಸ್ ತರಬೇತಿ ನೀಡಲಿದ್ದಾರೆ" ಎಂದು ಕೂಡ ಅವರು ತಿಳಿಸುತ್ತಾರೆ.

ಸಿನೆಮಾವನ್ನು ಡಿಸೆಂಬರ್ ಸಮಯದಲ್ಲಿ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ.

SCROLL FOR NEXT