ಡಾ.ರಾಜ್ಕುಮಾರ್ ಅವರ ಜೀವನ ಮತ್ತು ಬಣ್ಣದ ಬದುಕಿನ ಕುರಿತ ಪುಸ್ತಕ ಬಿಡುಗಡೆ ( ಕೃಪೆ ಕೆಪಿಎನ್)
ಬೆಂಗಳೂರು: `ವರನಟ ಡಾ.ರಾಜ್ಕುಮಾರ್ ರಂಗಭೂಮಿ ಮತ್ತು ಚಲನಚಿತ್ರ ರಂಗ ಕಂಡ ಮಹಾನ್ ಕಲಾವಿದ. ಸಾಂಸ್ಕೃತಿಕ ಲೋಕದ ನಾಯಕ. ನಟನಾಗಿ ತೆರೆಯಲ್ಲಿ
ಕಂಡಂತೆಯೇ ನಿಜ ಜೀವನದಲ್ಲೂ ಕಂಡಬಂಗಾರದ ಮನುಷ್ಯ. ಅವರ ಬದುಕನ್ನುನಮ್ಮಿಂದ ವರ್ಣಿಸಲು ಅಸಾಧ್ಯ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಣ್ಣಿಸಿದರು. ಡಾ.ರಾಜ್ಕುಮಾರ್ ಅವರ ಜೀವನ ಮತ್ತು ಬಣ್ಣದ ಬದುಕಿನ ಕುರಿತು ಲೇಖಕ ದೊಡ್ಡ ಹುಲ್ಲೂರು ರುಕ್ಕೋಜಿ ಅವರು ಬರೆದ ಬೃಹತ್ ಸಂಪುಟಗಳನ್ನು ಗುರುವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ ಅವರು, ``ರಾಜ್ಕುಮಾರ್ ಅಸಾಮಾನ್ಯ ಕಲಾವಿದರಾಗಿದ್ದರು. ಅವರು ನಿಜವಾದ ಬಂಗಾರದ ಮನುಷ್ಯ. ನನ್ನನ್ನು ಕಂಡಾಗೆಲ್ಲ ,`` ಓಹೋ, ಬನ್ನಿ ನಮ್ಮ ಕಾಡಿನವರು'' ಎಂದು ತಬ್ಬಿಕೊಂಡು ಆಪ್ತತೆ ತೋರುತ್ತಿದ್ದರು. ಅವರು ಅಭಿನಯಿಸಿದ್ದ `ಬಂಗಾರದ ಮನುಷ್ಯ' ಹಾಗೂ `ಕಸ್ತೂರಿ ನಿವಾಸ 'ಚಿತ್ರಗಳನ್ನು ತಲಾ ನಾಲ್ಕು ಬಾರಿ ನೋಡಿದ್ದೆ'' ಎಂದು ಸ್ಮರಿಸಿದರು. ``ರಾಷ್ಟ್ರಕವಿ ಕುವೆಂಪು ಮತ್ತು ರಾಜ್ ಕುಮಾರ್ ಇಬ್ಬರಿಗೂ ಒಂದೇ ಬಾರಿ `ಕರ್ನಾಟಕ ರತ್ನ' ಗೌರವ ಲಭಿಸಿತ್ತು. ಕಾಕತಾಳೀಯ ಎಂಬಂತೆ ಇಂದು ಕುವೆಂಪು ಕಲಾಕ್ಷೇತ್ರದಲ್ಲಿಯೇ ಅವರ ಜೀವನ ಚರಿತ್ರೆಯ ಸಂಪುಟಗಳು ಬಿಡುಗಡೆ ಯಾಗುತ್ತಿವೆ. ಮಹಾನ್ ಚೇತನಗಳು ನಾಡನ್ನು ಬೆಳಗಿದವರು ಎಂಬುದರ ಸಂಕೇತವಿದು,'' ಎಂದು ಹೇಳಿದರು. ``ರಾಜ್ ವಿನಯ, ವಿನಮ್ರತೆ, ಶಿಸ್ತಿಗೆ ಸರಿಸಾಟಿ ಇಲ್ಲ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಭಕ್ತ ಕುಂಬಾರ ನಿಂದ ಹಿಡಿದು ಬಾಂಡ್ ಮಾದರಿಯ ಪಾತ್ರಗಳಲ್ಲೂ ಮನೋಜ್ಞವಾಗಿ ಅಭಿನಯಿಸಿ ಕನ್ನಡಿಗರ ಮನದಾಳದಲ್ಲಿ ಸ್ಥಿರ ಸ್ಥಾಯಿಯಾಗಿ ಅವರು ಉಳಿದಿದ್ದಾರೆ. ನಿಜಕ್ಕೂ ಅವರು ಕನ್ನಡ ರತ್ನ,'' ಎಂದು ಸಿಎಂ ವಿಶ್ಲೇಷಿಸಿದರು. ``ಲೇಖಕ ರುಕ್ಕೋಜಿ ಅವರ ಸಾಹಸಸಾರ್ಥಕವಾಗಿದೆ. 15 ವರ್ಷಗಳ ಕಾಲ ಅವಿರತ ಶ್ರಮ ಹಾಕಿ, ರಾಜ್ಕುಮಾರ್ ಚರಿತ್ರೆಯನ್ನು ಬರಹದಲ್ಲಿ ಹಿಡಿದಿಡುವ ಮೂಲಕ ಕನ್ನಡಿಗರಿಗೆ ಅರ್ಪಿಸಿದ್ದಾರೆ'' ಎಂದು ಅವರ ಕೆಲಸವನ್ನು ಪ್ರಶಂಸಿದರು. ವೇದಿಕೆಯಲ್ಲಿ ಪುಟ್ಟದೊಂದು ಮನೆ ಮಾಡಿ, ಅಲ್ಲಿ ಇಡಲಾಗಿದ್ದ ಸಂಪುಟಗಳನ್ನು ರಾಜ್ ಪುತ್ರಿಯರಾದ ಪೂರ್ಣಿಮಾ ಮತ್ತು ಲಕ್ಮೀ ಗಣ್ಯರಿಗೆ ನೀಡಿದರು. ನಂತರ ಪುಸ್ತಕ ಬಿಡುಗಡೆ ನಡೆಯಿತು. ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ``ರಾಜ್ಕುಮಾರ್ ಅವರ ಬಗ್ಗೆ ಇದುವರೆಗೂ ದಾಖಲಾಗದ ಅನೇಕ ಸಂಗತಿಗಳು ಈ ಸಂಪುಟಗಳಲ್ಲಿವೆ. ಈ ಕಾರಣಕ್ಕೆ ಈ ಸಂಪುಟಗಳು ಅತಿಮುಖ್ಯ'' ಎಂದರು. ಸಚಿವ ಅಂಬರೀಷ್, ಪಾರ್ವತಮ್ಮ ರಾಜ್ಕುಮಾರ್, ಹಿರಿಯ ನಟಿಯರಾದ ಕೃಷ್ಣಕುಮಾರಿ, ಜಯಂತಿ, ಸಾಹುಕಾರ್ ಜಾನಕಿ, ಜಯಮಾಲ, ಲೇಖಕ ರುಕ್ಕೋಜಿಯವರ ತಾಯಿ ಪದ್ಮಮ್ಮ, ರಾಜ್ ಪುತ್ರರಾದ ಶಿವರಾಜ್ಕುಮಾರ್, ಪುನೀತ್ ರಾಜ್ ಕುಮಾರ್, ಪುತ್ರಿಯರಾದ ಪೂರ್ಣಿಮಾ, ಲಕ್ಷ್ಮಿ, ಅಳಿಯ ರಾಮ್ ಕುಮಾರ್ ಹಾಜರಿದ್ದರು.
ರಾಜ್ ಲೈಬ್ರರಿ ಸ್ಥಾಪನೆಗೆ ಕ್ರಮ
ಡಾ.ರಾಜ್ಕುಮಾರ್ ಬದುಕಿನ ಸಮಗ್ರ ಅಧ್ಯಯನಕ್ಕೆ ಸರ್ಕಾರ, ಗ್ರಂಥಾಲಯ ಸ್ಥಾಪಿಸಬೇಕೆಂದು ಸಭಿಕರೊಬ್ಬರು ಮುಂದಿಟ್ಟ ಬೇಡಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಆ ಬಗ್ಗೆ ಮುಂದಿನ ದಿನಗಳಲ್ಲಿ ನೋಡೋಣ. ಸರ್ಕಾರ ಲೈಬ್ರರಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಿದೆ. ರಾಜ್ಯದ ಎಲ್ಲ ಗ್ರಂಥಾಲಯಗಳಿಗೂ ಈ ಸಂಪುಟಗಳನ್ನು ತಲುಪಿಸಲು ಪ್ರಯತ್ನಿಸಲಾಗುವುದು ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos