ಸ್ಯಾಂಡಲ್ವುಡ್ ನ ಸ್ಟಾರ್ ನಟರಾದ ಶಿವರಾಜ್ ಕುಮಾರ್ ಹಾಗೂ ಸುದೀಪ್ ಒಟ್ಟಿಗೆ ಅಭಿನಯಿಸುತ್ತಾರೆಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿರುವ ವಿಷಯ ನಿಮಗೆಲ್ಲ ತಿಳಿದಿರುವುದೇ. ಈಗ ಇಬ್ಬರು ನಟರ ನಟನೆಯ ಚಿತ್ರದ ಹೆಸರು ಕುಂಭಮೇಳ. ಈ ಚಿತ್ರವನ್ನು ಎನ್.ಎ. ಸುರೇಶ್ ಅದ್ಧೂರಿಯಾಗಿ ನಿರ್ಮಾಣ ಮಾಡಲಿದ್ದಾರೆ.
ಈ ಸ್ಟಾರ್ ನಟರು ಒಂದೇ ಚಿತ್ರದಲ್ಲಿ ಅಭಿನಯಿಸುವ ವಿಚಾರವಾಗಿ ಈಗಾಗಲೇ 'ಒಂದಾಗುತ್ತಾರೆಯೇ ಈ ಸ್ಟಾರ್ ನಟರು?' ಎನ್ನುವ ಪ್ರಶ್ನೆ ಗಾಂಧಿನಗರವನ್ನು ಒಂದು ಸುತ್ತು ಹಾಕಿಕೊಂಡು ಬಂದಿದೆ. ಎರಡ್ಮೂರು ದಿನಗಳಿಂದ ಇಂಥದ್ದೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಈ ಇಬ್ಬರು ನಟರು ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿ ಅವರವರ ಅಭಿಮಾನಿಗಳಿಗೂ ಸಂಭ್ರಮ ಮೂಡಿಸಿರುವುದಂತೂ ನಿಜ. ಆದರೆ, ಇದು ಎಷ್ಟು ನಿಜ? ಎಂಬುದಕ್ಕೆ ಸದ್ಯಕ್ಕೆ ಯಾವುದೇ ಉತ್ತರ ಸಿಗುತ್ತಿಲ್ಲ. ಆದರೆ, ಶಿವರಾಜ್ಕುಮಾರ್ ಹಾಗೂ ಸುದೀಪ್ ಒಟ್ಟಿಗೆ ಅಭಿನಯಿಸುತ್ತಾರೆಂದು ಸುದ್ದಿ ಮಾಡುತ್ತಿರುವ ಸಿನಿಮಾದ ಹೆಸರು 'ಕುಂಭಮೇಳ'.
ಈ ಚಿತ್ರ ಹೆಸರಿಗೆ ತಕ್ಕಂತೆ ಇದೊಂದು ಐತಿಹಾಸಿಕ ಸಿನಿಮಾ ಆಗಿದೆ. ಈಗಾಗಲೇ ಕಥೆ ಕೂಡ ಸಿದ್ಧವಾಗುತ್ತಿದ್ದು, ಈ ಚಿತ್ರಕ್ಕೆ ನಿರ್ಮಾಪಕ ಎನ್.ಎಂ. ಸುರೇಶ್, ಇಬ್ಬರು ದೊಡ್ಡ ಸ್ಟಾರ್ ನಟರನ್ನೇ ನಾಯಕರನ್ನಾಗಿ ಮಾಡುವುದಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ಆದರೆ, ಯಾವ ಸ್ಟಾರ್ ನಟನನ್ನೂ ಇನ್ನೂ ಅಂತಿಮ ಮಾಡಿಲ್ಲ. ಅಷ್ಟರಲ್ಲಿ `ಕುಂಭಮೇಳ' ಚಿತ್ರದ ಹಿಂದೆ ನಟ ಶಿವರಾಜ್ಕುಮಾರ್ ಹಾಗೂ ಸುದೀಪ್ ಹೆಸರುಗಳು ಕೇಳಿಬರುತ್ತಿವೆ.
ಅಲ್ಲದೆ ಕನ್ನಡದ ಮಟ್ಟಿಗೆ ನಟರಾದ ದರ್ಶನ್, ಶಿವರಾಜ್ಕುಮಾರ್ ಹಾಗೂ ಸುದೀಪ್ ಐತಿಹಾಸಿಕ ಹಾಗೂ ಪೌರಾಣಿಕ ಕಥೆಯ ಸಿನಿಮಾಗಳಿಗೆ ಅತ್ಯಂತ ಸೂಕ್ತರಾಗುತ್ತಾರೆಂಬುದನ್ನು ಈಗಾಗಲೇ ಈ ನಟರು ನಿರೂಪಿಸಿದ್ದಾರೆ. ಹೀಗಾಗಿ `ಕುಂಭಮೇಳ' ಚಿತ್ರದ್ದು, ಐತಿಹಾಸಿಕ ಕಥೆಯಾಗಿರುವುದರಿಂದ ಸದ್ಯ ಸೆಂಚುರಿಸ್ಟಾರ್ ಹಾಗೂ ಕಿಚ್ಚನ ಹೆಸರು ಈ ಚಿತ್ರದ ಹಿಂದೆ ಕೇಳಿಬರುತ್ತಿದೆ. ಈ ಬಗ್ಗೆ ಚಿತ್ರದ ನಿರ್ಮಾಪಕ ಎನ್.ಎಂ. ಸುರೇಶ್ ಅವರನ್ನು ಕೇಳಿದಾಗ ಅವರು ಹೇಳುವುದು ಬೇರೆ. `ಸದ್ಯಕ್ಕೆ ಚಿತ್ರಕ್ಕೆ ಕಥೆಯನ್ನು ಸಿದ್ಧಗೊಳಿಸುತ್ತಿದ್ದೇವೆ. ಖಂಡಿತ ಇದೊಂದು ದೊಡ್ಡ ಮಟ್ಟದ ಕಥೆ.
ಬಿಗ್ ಬಜೆಟ್ ಸಿನಿಮಾ ಎನ್ನುವುದರಲ್ಲಿ ಎರಡು ಮಾತಿಲ್ಲ. ಚೆಲುವೆಯೇ ನಿನ್ನೇ ನೋಡಲು ಚಿತ್ರದ ನಂತರ ಮತ್ತೆ ನಾನು ಸಿನಿಮಾ ನಿರ್ಮಾಣ ಮಾಡಲಿಲ್ಲ. ನನ್ನದೇ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೆ. ಹೀಗಾಗಿ ತಡವಾಗಿಯಾದರೂ ದೊಡ್ಡ ಸಿನಿಮಾ ಮೂಲಕ ಮತ್ತೆ ನಿರ್ಮಾಣಕ್ಕಿಳಿಯಬೇಕು ಎಂದುಕೊಂಡು ಕುಂಭಮೇಳ ಚಿತ್ರವನ್ನು ಕೈಗೆತ್ತಿಕೊಂಡಿದ್ದೇನೆ. ಒಂದು ಹಂತಕ್ಕೆ ಕಥೆ ಸಿದ್ಧವಾಗಿದೆ. ಇದು ಐತಿಹಾಸಿಕ ಸಿನಿಮಾ ಆಗಿರುವುದರಿಂದ ಇಲ್ಲಿ ಸ್ಟಾರ್ ನಟರನ್ನೇ ನಾಯಕರನ್ನಾಗಿ ಮಾಡುವ ಯೋಚನೆ ಇದೆ. ಆದರೆ, ಯಾರನ್ನೂ ಸದ್ಯಕ್ಕೆ ಅಂತಿಮಗೊಳಿಸಿಲ್ಲ. ಯಾವ ಸ್ಟಾರ್ ನಟರು ಈ ಚಿತ್ರದಲ್ಲಿ ನಟಿಸುತ್ತಾರೆಂಬುದನ್ನು ಮುಂದೆ ಹೇಳುತ್ತೇನೆ' ಎನ್ನುತ್ತಾರೆ ಸುರೇಶ್. ಚಿತ್ರತಂಡ ಮಾತ್ರ ಯಾವ ಸ್ಟಾರ್ ನಟನನ್ನೂ ಈ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿಲ್ಲ. ಆದರೆ, 'ಕುಂಭಮೇಳ' ಚಿತ್ರದ ಮೈದಾನದಲ್ಲಿ ಮಾತ್ರ ಶಿವರಾಜ್ ಕುಮಾರ್ ಹಾಗೂ ಸುದೀಪ್ ಹೆಸರುಗಳು ಕೇಳಿಬರುತ್ತಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos