ಬೆಂಗಳೂರು: ರಜನಿಕಾಂತ್ ನಟನೆಯ 'ಲಿಂಗಾ' ಮೂಲಕ ಕಾಲಿವುಡ್ ನಲ್ಲಿಯೂ, ಅತ್ಯುತ್ತಮ ಜನಪ್ರಿಯ ಸಿನೆಮಾ ರಾಷ್ಟ್ರಪ್ರಶಸ್ತಿ ಗೆದ್ದ ಸಲ್ಮಾನ್ ಖಾನ್ ನಟನೆಯ 'ಭಜರಂಗಿ ಭಾಯಿಜಾನ್' ಮೂಲಕ ಬಾಲಿವುಡ್ ನಲ್ಲಿಯೂ ನಿರ್ಮಾಪಕರಾಗಿ ಯಶಸ್ಸು ಕಂದ ರಾಕ್ಲೈನ್ ವೆಂಕಟೇಶ್ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಈಗ ಧನುಷ್ ನಿರ್ಮಾಣದ ಸಿನೆಮಾದ ಮೊರೆ ಹೋಗಿದ್ದಾರೆ.
ಅತ್ಯುತ್ತಮ ತಮಿಳು ಚಿತ್ರ ರಾಷ್ಟ್ರಪ್ರಶಸ್ತಿ ಗೆದ್ದ 'ವಿಸಾರಣೈ' ಸಿನೆಮಾದ ರಿಮೇಕ್ ಹಕ್ಕುಗಳನ್ನು ಖರೀದಿಸಿರುವ ರಾಕ್ಲೈನ್ ಈ ಸಿನೆಮಾದ ಕನ್ನಡ ಮತ್ತು ಹಿಂದಿಯ ರಿಮೇಕ್ ನಿರ್ಮಿಸಲಿದ್ದಾರೆ. ಧನುಷ್ ಪ್ರೊಡಕ್ಷನ್ಸ್ ನಿರ್ಮಿಸಿದ್ದ ಈ ತಮಿಳು ಚಿತ್ರವನ್ನು ಖ್ಯಾತ ನಿರ್ದೇಶಕ ವೆಟ್ರಿಮಾರನ್ ಬರೆದು ನಿರ್ದೇಶಿಸಿದ್ದರು.
ಆಟೋ ರಿಕ್ಷಾ ಚಾಲಕ- ಬರಹಗಾರ ಎಂ ಚಂದ್ರಕುಮಾರ್, ತಮ್ಮ ನಿಜ ಜೀವನ ಆಧಾರಿತ 'ಲಾಕ್-ಅಪ್' ಕೃತಿಯ ಅಳವಡಿಕೆಯಾಗಿತ್ತು 'ವಿಸಾರಣೈ'. ಪೋಲೀಸರ ದೌರ್ಜನ್ಯ ಮತ್ತು ಆಡಳಿತಶಾಹಿಯ ಭ್ರಷ್ಟಾಚಾರದ ಬಗೆಗಿನ ಈ ಸಿನೆಮಾ ಮೂರು ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿ ಗಳಿಸಿತ್ತು. ವೆನಿಸ್ ಅಂತರಾಷ್ಟ್ರೀಯ ಸಿನೆಮೋತ್ಸವದಲ್ಲೂ ಪ್ರಶಸ್ತಿ ಗಳಿಸಿತ್ತು.
"'ವಿಸಾರಣೈ' ಜಾಗತಿಕ ಕಥೆ. ಇದನ್ನು ಎಲ್ಲಾ ಭಾಷೆಗಳಲ್ಲೂ ಹೇಳಬೇಕು. ಆದುದರಿಂದ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಿಸಲು ನಿರ್ಧರಿಸಿದೆ" ಎನ್ನುತ್ತಾರೆ ರಾಕ್ಲೈನ್ ವೆಂಕಟೇಶ್.
ಅಲ್ಲದೆ ಧನುಶ್ ಮತ್ತು ಅಮಲ ಪೌಲ್ ನಟನೆಯ 'ವೆಲೈಯಿಲಾ ಪಟ್ಟಾಥರಿ' (ವಿಐಪಿ) ಸಿನೆಮಾದ ಹಕ್ಕುಗಳನ್ನು ಕೂಡ ಖರೀದಿಸಿದ್ದು, ಕನ್ನಡದಲ್ಲಿ ರಿಮೇಕ್ ಮಾಡಲಿದ್ದಾರಂತೆ. ಸದ್ಯಕ್ಕೆ ರಮೇಶ್ ಅರವಿಂದ್ ನಿರ್ದೇಶಿಸುತ್ತಿರುವ, ಗಣೇಶ್ ಮತ್ತು ಶಾನ್ವಿ ಶ್ರೀವತ್ಸ ನಟಿಸುತ್ತಿರುವ 'ಗಂಡು ಎಂದರೆ ಗಂಡು' ಸಿನೆಮಾದ ಬಗ್ಗೆ ನಿರ್ಮಾಪಕ ಗಮನ ಹರಿಸಿದ್ದಾರಂತೆ. ಇದರ ನಂತರವೇ 'ವಿಸಾರಣೈ' ಕೈಗೆತ್ತಿಕೊಳ್ಳಲಿದ್ದಾರಂತೆ.