ಸಿನಿಮಾ ಸುದ್ದಿ

ನಾನು ಸ್ಪರ್ಧಿಸುವುದಿಲ್ಲ; ಎಲ್ಲರಿಂದಲೂ ಕಲಿಯುತ್ತೇನೆ: ದೊಡ್ಮನೆ ಸಂಗೀತ ನಿರ್ದೇಶಕ ಹರಿಕೃಷ್ಣ

Guruprasad Narayana
ಬೆಂಗಳೂರು: 'ದೊಡ್ಮನೆ ಹುಡುಗ' ಸಿನೆಮಾದ ಮೂಲಕ ನಟ ಪುನೀತ್ ರಾಜಕುಮಾರ್ ಮತ್ತು ಸಂಗೀತ ನಿರ್ದೇಶಕ ವಿ ಹರಿಕೃಷ್ಣ 9ನೇ ಬಾರಿಗೆ ಒಟ್ಟಾಗಿದ್ದಾರೆ. ಈ ಸಿನೆಮಾದ ಆಡಿಯೋ ಭಾನುವಾರ ಶ್ರೀ ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ತುಮಕೂರಿನಲ್ಲಿ ಬಿಡುಗಡೆಯಾಗಲಿದೆ. 
"ಸೂರಿ ನಿರ್ದೇಶನದ ಚಿತ್ರಕ್ಕೆ ಸಂಗೀತ ನಿರ್ದೇಶಿಸುವಾಗ ಹೀರೊ ಮತ್ತು ಕಥಾ ವಿಷಯವನ್ನು ಮನಸ್ಸಿನ್ನಲ್ಲಿಟ್ಟುಕೊಳ್ಳಬೇಕು. ಪುನೀತ್ ಅವರಿಗೆ ಪವರ್ ಹಾಡುಗಳು ಇದ್ದರೆ ಚಂದ" ಎನ್ನುತ್ತಾರೆ ಈ ಸಿನಿಮಾಗಾಗಿ ನಾಲ್ಕು ಹಾಡುಗಳಿಗೆ ಸಂಗೀತ ನಿರ್ದೇಶಿಸಿರುವ ಹರಿ. 
"ಸೂರಿ, ಪುನೀತ್ ಮತ್ತು ನನ್ನ ಜೋಡಿ, 'ಜಾಕಿ' ಮತ್ತು 'ಅಣ್ಣಾ ಬಾಂಡ್' ನಲ್ಲಿ ಯಶಸ್ವಿಯಾಗಿದೆ ಮತ್ತು ಆ ಸಂಗೀತ ಚಿತ್ರರಂಗದಲ್ಲಿ ಬಜ್ ಸೃಷ್ಟಿಸಿತ್ತು. 'ದೊಡ್ಮನೆ ಹುಡುಗ' ಕೂಡ ಅದೇ ರೀತಿಯ ಸಂಚಲನ ಸೃಷ್ಟಿಸಲಿದೆ" ಎನ್ನುತ್ತಾರೆ ಸಂಗೀತ ನಿರ್ದೇಶಕ. 
"ಹಾಗೆಯೇ ದೊಡ್ಮನೆ ಹಿನ್ನಲೆ ಸಂಗೀತ ಸಿನಿಮಾದುದ್ದಕ್ಕೂ ಬರಲಿದೆ" ಎನ್ನುತ್ತಾರೆ ಹರಿ. 
ಸೂರಿಯವರ ನಿರ್ದೇಶನದ ಬಗ್ಗೆ ಮನಸಾರೆ ಪ್ರಶಂಸಿಸುವ ಹರಿಕೃಷ್ಣ "ಸೂರಿ ಜೊತೆಗೆ ಕೆಲಸ ಮಾಡುವುದಕ್ಕೆ ಸಂತಸವಾಗುತ್ತದೆ ಏಕೆಂದರೆ ಹೊಸ ಶೈಲಿಯನ್ನು ಅವರು ಒಪ್ಪಿಕೊಂಡು ಅದನ್ನು ಕಮರ್ಶಿಯಲ್ ಸಿನೆಮಾಗಳಿಗೆ ಚೆನ್ನಾಗಿ ಜೋಡಿಸುತ್ತಾರೆ. ಹಾಗೆ ಸೃಜನಶೀಲತೆಗೆ ಹೆಚ್ಚಿನ ಅವಕಾಶ ನೀಡುತ್ತಾರೆ. 'ಜಾಕಿ', 'ಕಡ್ಡಿಪುಡಿ' ಮತ್ತು 'ಕೆಂಡಸಂಪಿಗೆ' ಇದಕ್ಕೆ ಅತ್ಯುತ್ತಮ ಉದಾಹರಣೆಗಳು" ಎನ್ನುವ ಹರಿ "'ದೊಡ್ಮನೆ ಹುಡುಗ' ಸಿನಿಮಾದಲ್ಲಿಯೂ ಎರಡು ಹಾಡುಗಳಲ್ಲಿ ಹೊಸ ಪ್ರಯೋಗ ಮಾಡಿದ್ದೇನೆ ಮತ್ತು ನಿರ್ದೇಶಕ ಅವುಗಳನ್ನು ತುಂಬು ಹೃದಯದಿಂದ ಸ್ವಾಗತಿಸಿದರು" ಎನ್ನುತ್ತಾರೆ. 
ಹೊಸ ಸಂಗೀತ ನಿರ್ದೇಶಕರು ಚಿತ್ರರಂಗಕ್ಕೆ ಬರುತ್ತಿರುವುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಹರಿಕೃಷ್ಣ ತಾವು ಇಂದಿಗೂ ವಿದ್ಯಾರ್ಥಿಯೇ ಎನ್ನುತ್ತಾರೆ. "ನಾನು ಇಂದಿಗೂ ಸ್ಪರ್ಧೆಯ ಬಗ್ಗೆ ತೆಲೆಕೆಡಿಸಿಕೊಳ್ಳುವುದಿಲ್ಲ ಏಕೆಂದರೆ ನಾನು ಎಲ್ಲರಿಂದಲೂ ಕಲಿಯಲು ನಿರತನಾಗಿರುತ್ತೇನೆ" ಎನ್ನುವ ಅವರು "ಒಳ್ಳೆಯ ಸಂಗೀತ ಹೊಸಬರಿಂದಲೂ ಬರಬಹುದು ಅಥವಾ ಸ್ಟಾರ್ ಗಳಿಂದಲೂ. ಇದು ಒಳ್ಳೆಯ ವಿಷಯದಿಂದ ಸ್ಫುರ್ತಿ ಪಡೆಯುತ್ತದೆ" ಎನ್ನುತ್ತಾರೆ. 
ಹೊಸ ಸಂಗೀತ ನಿರ್ದೇಶಕರಲ್ಲಿ ಪೂರ್ಣಚಂದ್ರ ತೇಜಸ್ವಿ, ಬಿ ಅಜನೀಶ್ ಲೋಕನಾಥ್ ಮತ್ತು ರವಿ ಬಸರೂರ್ ನನಗೆ ಹೆಚ್ಚು ಇಷ್ಟ ಎಂದು ಕೂಡ ಹರಿಕೃಷ್ಣ ಹೇಳುತ್ತಾರೆ. 
SCROLL FOR NEXT