ಸಿನಿಮಾ ಸುದ್ದಿ

'ನಾನುಮ್ ರೌಡಿ ಧಾನ್' ಕನ್ನಡ ರಿಮೇಕ್ ನಲ್ಲಿ ಶರಣ್; ಪಿ ಸಿ ಶೇಖರ್ ನಿರ್ದೇಶನ

Guruprasad Narayana
ಬೆಂಗಳೂರು: ತಮಿಳು ಸಿನೆಮಾ 'ನಾನುಮ್ ರೌಡಿ ಧಾನ್' ಕನ್ನಡಕ್ಕೆ ರಿಮೇಕ್ ಆಗಲಿದೆ ಎಂಬ ಸುದ್ದಿಗಳು ಗಾಂಧಿನಗರದಲ್ಲಿ ಹರಿದಾಡಿದ್ದವು. ಮೂಲಗಳನ್ನು ನಂಬುವುದಾದರೆ ಈಗ ಕನ್ನಡ ಅವತರಣಿಕೆಯನ್ನು ಪಿ ಸಿ ಶೇಖರ್ ನಿರ್ದೇಶಿಸಲಿದ್ದು, ಶರಣ್ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ. ಇದು ಶೇಖರ್-ಶರಣ್ ಜೋಡಿಯ ಮೊದಲ ಚಿತ್ರ.
ಮತ್ತೊಂದು ಆಸಕ್ತಿದಾಯಕ ಅಂಶವೆಂದರೆ ಕನ್ನಡ ರಿಮೇಕ್ ಸಿನೆಮಾವನ್ನು ತಮಿಳು ನಟ ಧನುಶ್ ಅವರೇ ವಂಡರ್ ಬಾರ್ ಫಿಲಂಸ್ ಬ್ಯಾನರ್ ಅಡಿ ನಿರ್ಮಿಸಲಿದ್ದಾರಂತೆ. ನಿರ್ದೇಶಕ ಶೇಖರ್ ಮತ್ತು ನಟ ಶರಣ್ ಇದರ ಬಗ್ಗೆ ವಿವರ ನೀಡಲು ನಿರಾಕರಿಸಿದರು ಬಲ್ಲ ಮೂಲಗಳಿಂದ ತಮಿಳು ನಟ ಇದನ್ನು ನಿರ್ಮಿಸಲು ಉತ್ಸುಕರಾಗಿದ್ದಾರೆ ಎಂದು ತಿಳಿದುಬಂದಿದೆ. 
"ಮಾತುಕತೆಗಳು ನಡೆದಿವೆ ಮತ್ತು ಎರಡು ಕಡೆಯಿಂದ ಸಮಾನ ಆಸಕ್ತಿ ಇದೆ. ಆದರೆ ಅಧಿಕೃತ ಘೋಷಣೆಯಾಗುವವರೆಗೆ ಕಾಯಬೇಕಾಗುತ್ತದೆ" ಎನ್ನುತ್ತವೆ ಮೂಲಗಳು. 
ವಿಜ್ಞೇಶ್ ಶಿವಂ ನಿರ್ದೇಶಿಸಿದ್ದ, ವಿಜಯ್ ಸೇತುಪತಿ ಮತ್ತು ನಯನತಾರ ನಟಿಸಿದ್ದ 'ನಾನುಮ್ ರೌಡಿ ಧಾನ್' 2015 ರಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. 
ಶರಣ್ ಸದ್ಯಕ್ಕೆ ಪವನ್ ಒಡೆಯರ್ ನಿರ್ದೇಶನದ 'ನಟರಾಜ ಸರ್ವಿಸ್' ಬಿಡುಗಡೆಗೆ ಸಿದ್ಧರಾಗುತ್ತಿದ್ದಾರೆ. ಇದು ಸೆಪ್ಟೆಂಬರ್ ಗೆ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಶೇಖರ್ ಕೂಡ ತಮ್ಮ ಮುಂದಿನ ಚಿತ್ರ 'ರಾಗ' ನಿರ್ದೇಶನಕ್ಕೆ ಅಣಿಯಾಗುತ್ತಿದ್ದಾರೆ. 
SCROLL FOR NEXT