ಕೊಟ್ಟಾಯಂ: ಕೇರಳ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಎದ್ದಿರುವ ರಾಷ್ಟ್ರಗೀತೆ ವಿವಾದಕ್ಕೆ ಪ್ರತಿಕ್ರಿಯಿಸಿರುವ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ "ಸುಪ್ರೀಂ ಕೋರ್ಟ್ ಆದೇಶವನ್ನು ಗೌರವಿಸುವವರು ಮಾತ್ರ ಚಲನಚಿತ್ರಮಂದಿರ ಪ್ರವೇಶಿಸಿ" ಎಂದಿದ್ದಾರೆ.
ಇದಕ್ಕೂ ಮುಂಚಿತವಾಗಿ ರಾಷ್ಟ್ರಗೀತೆಗೆ ಎದ್ದು ನಿಂತಿಲ್ಲ ಎಂಬ ಆರೋಪದ ಮೇರೆಗೆ ಆರು ಜನರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ ಎಂಬ ವರದಿಗಳು ಮೂಡಿದ್ದವು.
ಮಂಗಳವಾರ ಮಾಧ್ಯದವರೊಂದಿಗೆ ಸಂವಾದ ನಡೆಸಿದ ಬಾಲಕೃಷ್ಣ ಸುಪ್ರೀಂ ಕೋರ್ಟ್ ಆದೇಶವನ್ನು ಅನಷ್ಠಾನಗೊಳಿಸುವುದು ಸರ್ಕಾರದ ಕರ್ತವ್ಯ ಎಂದಿದ್ದಾರೆ. "ಚಲನಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡುವ ಮತ್ತು ಅದಕ್ಕೆ ಗೌರವಿಸುವ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಬೇಕಿದೆ. ಈ ಆದೇಶವನ್ನು ಪಾಲಿಸಲು ಒಪ್ಪುವವರು ಮಾತ್ರ ಚಿತ್ರಮಂದಿರದ ಒಳಗೆ ಹೋಗಬಹುದು. ಅಥವಾ ರಾಷ್ಟ್ರಗೀತೆ ಮುಗಿದ ನಂತರ ಅವರು ಪ್ರವೇಶ ಪಡೆಯಬಹುದು" ಎಂದು ಕೂಡ ಅವರು ಹೇಳಿದ್ದಾರೆ.