ಬೆಂಗಳೂರು: ಬಹುತೇಕ ಸಿನೆಮಾಗಳಲ್ಲಿ ರೋಮ್ಯಾಂಟಿಕ್ ಹೀರೊ ಆಗಿ ಜನಮನ ಗೆದ್ದಿರುವ ನಟ ಗಣೇಶ್, ತಮ್ಮ ಹಾಸ್ಯ ಪ್ರವೃತ್ತಿಗೂ ಚಿರಪರಿಚಿತರು. ಅವರಿಗೆ ಹಾಸ್ಯ ಅವತಾರದ ಪಾತ್ರ ನೀಡಿದರೆ, ಜನರನ್ನು ರಂಜಿಸುವುದಕ್ಕೆ ಯಾವುದೇ ಮೋಸವಿಲ್ಲ. ಈಗ ಅವರ ಮುಂದಿನ ಸಿನೆಮಾ 'ಸುಂದರಾಂಗ ಜಾಣ' ಬಿಡುಗಡೆಗೆ ಸಿದ್ಧವಾಗಿದ್ದು, ಸಿನೆಮಾ ಪೂರ್ತಿ ಪ್ರೇಕ್ಷಕರಿಗೆ ಕಚಗುಳಿಯಿಡುವುದು ಖಾತ್ರಿಯಂತೆ.
ರಮೇಶ್ ಅರವಿಂದ್ ನಿರ್ದೇಶನದ ಈ ಚಿತ್ರದಲ್ಲಿ ತಮ್ಮ ಪಾತ್ರ ಅನ್ಯಮನಸ್ಕನ ವ್ಯಕ್ತಿ ಲಕ್ಕಿ ಮತ್ತು ಆ ಪಾತ್ರದ ತಾತ್ವಿಕತೆಯ ಬಗ್ಗೆಯೂ ಮಾತನಾಡುವ ಗಣೇಶ್ "ಎಷ್ಟೋ ಬಾರಿ ಅನ್ಯಮನಸ್ಕನಾಗಿರುವುದೇ ಉತ್ತಮ ಮತ್ತು ಅದು ನಿಮ್ಮ ಜೀವನದ ಋಣಾತ್ಮಕ ಭಾಗವನ್ನು ಮರೆತು ಧನಾತ್ಮಕತೆಯನ್ನು ತಂದುಕೊಡುತ್ತದೆ. ನಾವು ಏನನ್ನಾದರೂ ಸಾಧಿಸಲು, ಕೆಲವನ್ನು ಕಳೆದುಕೊಳ್ಳಬೇಕಾಗುತ್ತದೆ, ಲಕ್ಕಿ ಪಾತ್ರ ಅಂತಹುದ್ದು. ಆ ಪಾತ್ರವನ್ನು ನಿಭಾಯಿಸಲು ನಾನು ಸ್ವಾಭಾವಿಕವಾಗಿರಬೇಕಿತ್ತು ಮತ್ತು ಜನ ನನ್ನ ಮರೆಗುಳಿಯ ಪಾತ್ರವನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂಬ ಭರವಸೆ ಇದೆ" ಎನ್ನುತ್ತಾರೆ.
ಹಾಸ್ಯ ಉತ್ಪಾದನೆ ಬಹಳ ಕಷ್ಟದ ಕಲೆ ಎನ್ನುವ ಗಣೇಶ್ "ಬರಿ ನಗಿಸುವ ಕೆಲಸ ಮಾಡುವ ಹಾಸ್ಯಕಾರರನ್ನು ನಾನು ಬಹಳ ಗೌರವಿಸುತ್ತೇನೆ. ಚಾರ್ಲಿ ಚಾಪ್ಲಿನ್ ತಮ್ಮ ಅದ್ಭುತ ಹಾಸ್ಯದಿಂದ ಎಲ್ಲರನ್ನು ನಗಿಸಿದರು ಆದರೆ ಎಲ್ಲ ನಟನಿಗೂ ಚಾರ್ಲಿ ಚಾಪ್ಲಿನ್ ಆಗಲು ಸಾಧ್ಯವಿಲ್ಲ ಏಕೆಂದರೆ ಜನರನ್ನು ನಗಿಸುವುದು ಎಲ್ಲರಿಗು ಅಷ್ಟು ಸುಲಭವಲ್ಲ. ರೋಮ್ಯಾನ್ಸ್ ಮತ್ತು ಆಕ್ಷನ್ ಆದರೆ ತರಬೇತಿ ಪಡೆದು ಕಲಿಯಬಹುದು ಆದರೆ ಹಾಸ್ಯ ಒಳಗಿನಿಂದ ಮೂಡಬೇಕು, ಅನುಕರಣೆ ಸಾಧ್ಯವಿಲ್ಲ" ಎನ್ನುತ್ತಾರೆ.
ಈ ರಿಮೇಕ್ ಚಿತ್ರವನ್ನು ನಿರ್ದೇಶಿಸಿರುವ ರಮೇಶ್ ಅರವಿಂದ್ ಅವರ ಬಗ್ಗೆ ಮಾತಿಗಿಳಿಯುವ ಗಣೇಶ್ "ಅನ್ಯಮನಸ್ಕ ಮರೆಗುಳಿಯ ಪಾತ್ರ ರಮೇಶ್ ಅವರ ಕಲ್ಪನೆಯಲ್ಲಿ ಇನ್ನು ಉತ್ತಮಗೊಂಡಿದೆ. ನನ್ನ ಬಹುತೇಕ ಸಿನೆಮಾಗಳಲ್ಲಿ ಹಾಸ್ಯ ಹಾಸುಹೊಕ್ಕಾಗಿದ್ದರು, ಈ ಸಿನೆಮಾ ಸಂಪೂರ್ಣ ಹಾಸ್ಯಮಯ. ಇದು ನನಗೆ ಮೊದಲನೇ ಅನುಭವ. ಆದರೆ ಸಿನೆಮಾ ಸಂಪೂರ್ಣಗೊಳ್ಳಲು ಭಾವನಾತ್ಮಕ ದೃಶ್ಯಗಳು ಕೂಡ ಸೇರಿವೆ. ಇದನ್ನು ಹೊರತುಪಡಿಸಿದರೆ ಇದು ನಗೆಯ ದಂಗೆ" ಎನ್ನುತ್ತಾರೆ.
ಅಲ್ಲು ಅರವಿಂದ್ ಮತ್ತು ರಾಕ್ಲೈನ್ ವೆಂಕಟೇಶ್ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ, ಗಣೇಶ್ ಎದುರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos