ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರ ದ್ವಿತೀಯ ಪುತ್ರಿ ಹಾಗೂ ಚಿತ್ರ ನಿರ್ಮಾಪಕಿಯಾಗಿರುವ ಸೌಂದರ್ಯ ಅವರು ಶುಕ್ರವಾರ ತಮ್ಮ ಪತಿ ಗ್ರಾಫಿಕ್ ಡಿಸೈನರ್ ಅಶ್ವಿನ್ ರಾಮ್ ಕುಮಾರ್ ಅವರಿಂದ ವಿಚ್ಛೇದನ ಕೋರಿ ನಗರದ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
2010ರಲ್ಲಿ ಉದ್ಯಮಿ ಅಶ್ವಿನ್ ರಾಮ್ಕುಮಾರ್ ಅವರನ್ನು ಮದುವೆಯಾಗಿದ್ದ ಇವರು ಕಳೆದೊಂದು ವರ್ಷದಿಂದಲೂ ಪತಿ ಅಶ್ವಿನ್ ರಾಮ್ಕುಮಾರ್ ರಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದು, ಇಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
4 ವರ್ಷಗಳ ಕಾಲ ಪ್ರೀತಿಸಿ ಒಂದಾಗಿದ್ದ ಈ ಜೋಡಿಗೆ ವೇದ್ ಎನ್ನುವ ಒಂದು ವರ್ಷದ ಮಗನಿದ್ದಾನೆ. ಕಳೆದ ಕೆಲ ಸಮಯಗಳಿಂದ ದಂಪತಿ ಮಧ್ಯೆ ಭಿನ್ನಾಭಿಪ್ರಾಯಗಳಿದ್ದು ಒಂದಾಗಿ ಬಾಳಲು ಸಾಧ್ಯವಾಗದ ಕಾರಣ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಮೂತ್ರಪಿಂಡದ ಚಿಕಿತ್ಸೆಗೆ ಅಮೆರಿಕಕ್ಕೆ ಹೋಗಿದ್ದ ರಜನಿಕಾಂತ್ ಚೆನ್ನೈಗೆ ವಾಪಸಾದ ನಂತರ ಮಗಳು ಸೌಂದರ್ಯಾ ಜೊತೆಗೆ ಸ್ವಲ್ಪ ದಿನ ವಾಸವಿದ್ದು ದಂಪತಿಗಳ ಮಧ್ಯೆ ರಾಜಿ ಮಾಡಲು ಪ್ರಯತ್ನಿಸಿದ್ದರು. ಭಿನ್ನಾಭಿಪ್ರಾಯಗಳನ್ನು ಮರೆತು ಒಂದು ಮಾಡಲು ಮುಂದಾಗಿದ್ದರಂತೆ. ಆದರೆ ಅವರ ಪ್ರಯತ್ನ ಫಲ ನೀಡಲಿಲ್ಲ. ಈಗ ಕಾನೂನಾತ್ಮಕವಾಗಿ ದೂರವಾಗಲು ನಿರ್ಧರಿಸಿದ್ದು, ದಂಪತಿಗಳ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯುತ್ತಿದ್ದಾರೆ.
ಗ್ರಾಫಿಕ್ ವಿನ್ಯಾಸಗಾರ್ತಿಯಾಗಿ ತಮ್ಮ ವೃತ್ತಿ ಆರಂಭಿಸಿದ ಸೌಂದರ್ಯಾ ನಂತರ ಚಿತ್ರ ನಿರ್ದೇಶಕಿಯೂ ಆದರು. ತಮ್ಮ ತಂದೆ ರಜನಿಕಾಂತ್ ಅಭಿನಯದ ಕೊಚಾಡಿಯಾನ್ ಚಿತ್ರವನ್ನು ನಿರ್ದೇಶಿಸಿದ್ದರು.