'ಕಿರಿಕ್ ಪಾರ್ಟಿ' ಸಿನೆಮಾದ ಪೋಸ್ಟರ್
ಬೆಂಗಳೂರು: ರಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ಚಿತ್ರ 'ಕಿರಿಕ್ ಪಾರ್ಟಿ' ಸಿನೆಮಾ ಬಿಡುಗಡೆಗೆ ಇನ್ನೆರಡೇ ದಿನಗಳು ಬಾಕಿಯಿದ್ದು, ಹೊಸದೊಂದು ವಿವಾದದಲ್ಲಿ ಸಿಕ್ಕಿಕೊಂಡಿದೆ. ಈ ಸಿನೆಮಾದ ಹಾಡು 'ಹೇ ವೂ ಆರ್ ಯು' ಈಗ ವಿವಾದಕ್ಕೆ ಈಡಾಗಿದೆ.
'ಹೇ ವೂ ಆರ್ ಯು' ಹಾಡಿನ ಟ್ಯೂನ್ ಗೆ ಲಹರಿ ಆಡಿಯೋ ಸಂಸ್ಥೆ ಆಕ್ಷೇಪಿಸಿದ್ದು, ಇದು ಅವರ ಒಡೆತನದ 'ಶಾಂತಿ ಕ್ರಾಂತಿ' ಸಿನೆಮಾದ 'ಮಧ್ಯ ರಾತ್ರೀಲಿ' ಹಾಡಿನ ಟ್ಯೂನ್ ನ ನಕಲು ಎಂದು ಕಾನೂನು ನೋಟಿಸ್ ನೀಡಿದೆ. ಈ ಹಾಡನ್ನು ಸಿನೆಮಾದಿಂದ ತೆಗೆದು ಹಾಕಿದರೆ ಸಿನೆಮಾ ಬಿಡುಗಡೆಗೆ ಯಾವುದೇ ಆಕ್ಷೇಪ ಇಲ್ಲ ಎಂದು ಕೂಡ ಲಹರಿ ಸಂಸ್ಥೆ ನೀಡಿರುವ ನೋಟಿಸ್ ನಲ್ಲಿ ತಿಳಿಸಿದೆ.
ಇದರ ಬಗ್ಗೆ ಫೇಸ್ಬುಕ್ ನಲ್ಲಿ ಬರೆದುಕೊಂಡಿರುವ ನಟ ರಕ್ಷಿತ್ ಶೆಟ್ಟಿ, ಈ ಹಾಡನ್ನು ತೆಗೆದುಹಾಕಿ ಸಿನೆಮಾ ಬಿಡುಗಡೆ ಮಾಡಲು ಮುಂದಾಗಿರುವುದಾಗಿ ತಿಳಿಸಿದ್ದಾರೆ. "ಈ ಹಾಡನ್ನು ಹಲವು ವಾರಗಳ ಮೊದಲೇ ಬಿಡುಗಡೆ ಮಾಡಲಾಗಿತ್ತಾದರೂ, ಲಹರಿ ಮ್ಯೂಸಿಕ್ ಈ ಸಮಯದಲ್ಲಿ ಆಕ್ಷೇಪ ವ್ಯಕ್ತಪಡಿಸಿರುವುದರಿಂದ, ನಮ್ಮ ವಾದವನ್ನು ನ್ಯಾಯಾಲಯಕ್ಕೆ ಹೇಳಲು ಸಮಯ ಇಲ್ಲವಾಗಿರುವುದರಿಂದ ಒತ್ತಾಯಪೂರ್ವಕವಾಗಿ ಈ ಹಾಡನ್ನು ಕತ್ತರಿಸಬೇಕಿದೆ. ಇದು ಬಹಳ ನೋವಿನ ಸಂಗತಿ. 'ಹೇ ವೂ ಆರ್ ಯು' ಹಾಡು, ಹಂಸಲೇಖ ಮತ್ತು ರವಿಚಂದ್ರನ್ ಅವರಿಗೆ ಗೌರವ ಸಲ್ಲಿಸಲು ಬರೆದಿದ್ದ ಹಾಡು. ಮೊದಲೇ ಹೇಳಿದಂತೆ ಈ ಇಬ್ಬರು ದಂತಕತೆಗಳಿಂದ ಸ್ಫುರ್ತಿ ಪಡೆದು ಹೊಸ ಹಾಡನ್ನು ಸೃಷ್ಟಿಸಿದ್ದೆವು. ನಾವು ಯಾವುದೇ ಹಕ್ಕುಸ್ವಾಮ್ಯ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಪ್ರಾಮಾಣಿಕವಾಗಿ ನಂಬಿದ್ದೇವೆ. ನಮ್ಮ ಉದ್ದೇಶವನ್ನು ತಪ್ಪಾಗಿ ಗ್ರಹಿಸಿರುವುದು ದುರಂತ. ಈ ಕಾನೂನು ವಿವಾದ ಬಗೆಹರಿದ ಮೇಲೆ ಈ ಹಾಡನ್ನು ಸಿನೆಮಾದಲ್ಲಿ ಒಳಗೊಳ್ಳಲು ಎಲ್ಲ ಪ್ರಯತ್ನ ನಡೆಸಿದ್ದೇವೆ. ನೀವು ಸಿನೆಮಾವನ್ನು ಇಷ್ಟ ಪಡುತ್ತೀರಾ ಎಂದು ನಂಬಿದ್ದೇನೆ. ನಿಮ್ಮೆಲ್ಲರ ಸಹಕಾರಕ್ಕೆ ಶರಣು" ಎಂದು ಬರೆದುಕೊಂಡಿದ್ದಾರೆ.
ಈ ಹಾಡು ಸಾಮಾಜಿಕ ಜಾಲತಾಣದ್ಲಲಿ ಭಾರಿ ಜನಪ್ರಿಯತೆ ಪಡೆದುಕೊಂಡಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos