ಬೆಂಗಳೂರು: ನಿರ್ಮಾಪಕರು ಹೇಳುವಂತೆ ಗಣೇಶ್ ಅಭಿನಯದ 'ಜೂಮ್' ಒಳ್ಳೆಯ ಪ್ರದರ್ಶನ ಕಾಣುತ್ತಿದ್ದು, ಗಳಿಕೆಯಲ್ಲಿಯೂ ಮುಂಚೂಣಿಯಲ್ಲಿದೆಯಂತೆ. ಟಿ ವಿ ವಾಹಿನಿಯ ಹಕ್ಕುಗಳನ್ನು ಹೊರತುಪಡಿಸಿ ಥಿಯೇಟರ್ ಗಳಿಂದಲೇ 10 ಕೋಟಿ ರೂ ಗಳಿಕೆ ಕಂಡಿದ್ದು, ನಿರ್ಮಾಪಕರಿಗೆ 6 ಕೋಟಿ ಲಾಭ ಗಳಿಸಿಕೊಡುವತ್ತ ಮುಂದುವರಿದಿದೆಯಂತೆ. ಅಲ್ಲದೆ 25 ದಿನಗಳ ಪ್ರದರ್ಶನ ಮುಗಿಸುವತ್ತಲೂ ಮುನ್ನುಗ್ಗಿದೆ.
"ನಾವು 100 ಥಿಯೇಟರ್ ಗಳಲ್ಲಿ 20 ದಿನದ ಪ್ರದರ್ಶನ ಮುಗಿಸಿದ್ದೇವೆ. ಇದು ದಾಖಲೆ. ನಿರ್ದೇಶಕನಾಗಿ ನನಗೆ ಇದು ಸಾಧನೆ. ಅಲ್ಲದೆ ನಿರ್ಮಾಪಕರಿಗೆ ಈ ಸಿನೆಮಾ 100% ಲಾಭ ಗಳಿಸಿಕೊಟ್ಟಿದೆ. ಇದು ನಿಜಕ್ಕೂ ದೊಡ್ಡ ಸಂಭ್ರಮದ ವಾತಾವರಣ" ಎನ್ನುತ್ತಾರೆ ಸಿನೆಮಾದ ನಿರ್ದೇಶಕ ಪ್ರಶಾಂತ್ ರಾಜ್.
ಈ ಸಮಯದಲ್ಲಿ ಈ ಯಶಸ್ಸು ನಿಮಗೆ ಹೇಗೆ ಸಂತಸ ತಂದಿದೆ ಎಂದು ನಟ ಗಣೇಶ್ ಅವರನ್ನು ಪ್ರಶ್ನಿಸಿದಾಗ "ಈ ಉದ್ಯಮಕ್ಕೆ ಬರುವ ನಟನಾಗಲಿ, ನಿರ್ದೇಶಕನಾಗಲಿ ನಿರ್ಮಾಪಕನಾಗಲಿ ತಮ್ಮ ಸಿನೆಮಾಗಳು ಅತ್ಯುತ್ತಮ ಪ್ರದರ್ಶನ ಕಾಣಬೇಕೆಂದು ನಿರೀಕ್ಷಿಸುತ್ತಾರೆ. ಆದರೆ ಯಶಸ್ಸು ಧನಾತ್ಮಕ ಯೋಚನೆಯಿಂದ ಬರುತ್ತದೆ ಎಂಬುದು ನನ್ನ ನಂಬಿಕೆ. 'ಜೂಮ್' ಒಳ್ಳೆಯ ತಂಡವನ್ನು ಒಟ್ಟಿಗೆ ತಂದಿತ್ತು ಮತ್ತು ಅದು ಒಳ್ಳೆಯ ಫಲ ನೀಡಿದೆ. ತಂಡಕ್ಕೆ ಈ ಯಶಸ್ಸು ಬೆನ್ನು ತಟ್ಟಿದಂತೆ" ಎನ್ನುತ್ತಾರೆ.
ಪ್ರತಿ ದೃಶ್ಯಕ್ಕೂ ಜನರು ನಗುತ್ತಿದ್ದಾಗ ಈ ಸಿನೆಮಾದ ಯಶಸ್ಸು ನನಗೆ ಕಂಡಿತು ಎನ್ನುವ ನಟ "ನಟನಾಗಿ ನನ್ನ ಒಂದೇ ಗುರಿ ಮನರಂಜನೆ ನೀಡುವುದು ಮತ್ತು ಇದು ಈ ಸಿನೆಮಾದಲ್ಲಿ ಗೆದ್ದಿದೆ" ಎನ್ನುತ್ತಾರೆ ಗಣೇಶ್.
ನಿರ್ದೇಶಕ ಪ್ರಶಾಂತ್ ರಾಜ್ ಅವರೊಂದಿಗೆ ಮತ್ತೊಂದು ಯೋಜನೆಯಲ್ಲಿ ತೊಡಗಿಸಿಕೊಳ್ಳುವ ಮುನ್ಸೂಚನೆ ನೀಡುವ ಗಣೇಶ್ "ನಮ್ಮ ಮುಂದಿನ ಯೋಜನೆಯಲ್ಲಿ ನಾವು ಒಟ್ಟಿಗೆ ಬಂದಾಗ ಅದು ಇನ್ನು ಉತ್ತಮವಾಗುತ್ತದೆ" ಎನ್ನುತ್ತಾರೆ.
ಗಣೇಶ್ ಜೊತೆಗೆ ಮತ್ತೊಂದು ಸಿನೆಮಾ ಮಾಡಲು ಉತ್ಸುಕರಾಗಿರುವ ಪ್ರಶಾಂತ್ "ಸದ್ಯಕ್ಕೆ 'ಜೂಮ್' ಪ್ರಚಾರದಲ್ಲಿ ಮತ್ತು ನನ್ನ ಮತ್ತೊಂದು ಸಿನೆಮಾ 'ದಳಪತಿ' ಬಿಡುಗಡೆಗೆ ತೊಡಗಿಸಿಕೊಂಡಿದ್ದೇನೆ. ಎಲ್ಲವೂ ಸುಸೂತ್ರವಾಗಿ ಜರುಗಿದರೆ ನಮ್ಮ ಮುಂದಿನ ಯೋಜನೆ ಜನವರಿ 2017 ಕ್ಕೆ ಪ್ರಾರಂಭವಾಗಲಿದೆ" ಎನ್ನುತ್ತಾರೆ.