ಸಿನಿಮಾ ಸುದ್ದಿ

ಕಲರ್ಸ್ ಸೂಪರ್ ನಲ್ಲಿ 'ಗಿರಿಜಾ ಕಲ್ಯಾಣ' - ಬಾಹುಬಲಿ ನಿರ್ಮಾಪಕರಿಂದ ಅದ್ದೂರಿ ಕನ್ನಡ ಧಾರಾವಾಹಿ

Guruprasad Narayana
ಬೆಂಗಳೂರು: 'ಬಾಹುಬಲಿ' ಭಾರತೀಯ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ ಅದ್ದೂರಿ ಚಿತ್ರ. ಈ ಸಿನೆಮಾ ನಿರ್ಮಿಸಿದ ಆರ್ಕಾ ಮೀಡಿಯಾ ಈಗ ಕಿರುತೆರೆಯಲ್ಲಿ ಅಂಥದೇ ಮಹೋನ್ನತ ಅದ್ದೂರಿ-ಅಭೂತಪೂರ್ವ ಸಾಮಾಜಿಕ ಪೌರಾಣಿಕ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಅದುವೇ - 'ಗಿರಿಜಾ ಕಲ್ಯಾಣ'. 
ಕನ್ನಡ ಟೆಲಿವಿಷನ್ ಇತಿಹಾಸದಲ್ಲಿ ಅತ್ಯಂತ ದುಬಾರಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಗಿರಿಜಾ ಕಲ್ಯಾಣವನ್ನು ನಿರ್ದೇಶಿಸುತ್ತಿರುವವರು ಕನ್ನಡ ನಟ ನವೀನ್ ಕೃಷ್ಣ. ಈಗಾಗಲೇ ಚಿತ್ರರಂಗದಲ್ಲಿ ಸಾಹಿತ್ಯ, ಸಂಭಾಷಣೆ, ಗಾಯನ ಮತ್ತು ಅಭಿನಯದಿಂದ ಗುರುತಿಸಿಕೊಂಡಿರುವ ನವೀನ್ ಕೃಷ್ಣ ಈ ಧಾರಾವಾಹಿಯಿಂದ ಪ್ರೇಕ್ಷಕರಿಗೆ ಸುಂದರ ಚಲನಚಿತ್ರವೊಂದನ್ನು ನೋಡುವ ಅನುಭವ ನೀಡಲಿದ್ದಾರೆ ಎನ್ನುತ್ತದೆ ಕಲರ್ಸ್ ಕನ್ನಡ ಚಾನಲ್ ನೀಡಿರುವ ಹೇಳಿಕೆ. 
"'ಆಪ್ತಮಿತ್ರ', 'ಸಂಗೊಳ್ಳಿ ರಾಯಣ್ಣ' ಚಿತ್ರಗಳ ಛಾಯಾಗ್ರಾಹಕ ರಮೇಶ್ ಬಾಬು, ಹಲವು ಚಲನಚಿತ್ರಗಳ ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿ, 'ಗಜಕೇಸರಿ' ಚಿತ್ರದ ಖ್ಯಾತಿಯ ವಸ್ತ್ರ ವಿನ್ಯಾಸಕಿ ಶಾಚೀನ ಹೆಗ್ಗಾರ್ ಮತ್ತು ನಾಗರಾಜ್ ತಮ್ಮ ಚಿತ್ರರಂಗದ ಅನುಭವವನ್ನು ಕಿರುತೆರೆಗೆ ತಂದು ವೀಕ್ಷಕರಿಗೆ ಸಿನೆಮಾ ಮಟ್ಟದ ಅನುಭವ ನೀಡಲಿದ್ದಾರೆ" ಎನ್ನುತ್ತದೆ ಕಲರ್ಸ್ ಸೂಪರ್ ತಂಡ.
ಹಲವು ಚಿತ್ರಗಳಿಗೆ ಸಂಗೀತ ನೀಡಿರುವ ರವೀಶ್, ನೃತ್ಯ ಸಂಯೋಜಕರಾಗಿ ಮದನ್ ಹರಿಣಿ ಮತ್ತು ಮೇಕಪ್ ನಲ್ಲಿ ಕುಮಾರ್ ಈ ಅದ್ದೂರಿ ಧಾರಾವಾಹಿಯ ಭಾಗವಾಗಿದ್ದಾರೆ. 
ಹೈದರಾಬಾದ್, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಈ ಧಾರಾವಾಹಿಯ ಚಿತ್ರಕಥೆ - ಅನಂತ ಶಾಂಡ್ರೇಯ, ಸಂಭಾಷಣೆ - ಅಕ್ಷಯ ಸತ್ಯ, ಸಂಕಲನ - ಸತ್ಯ ಭಾರದ್ವಾಜ್. 
ಈ ಧಾರಾವಾಹಿಯ ಟ್ರೇಲರ್ ಅನ್ನು ನೀವಿಲ್ಲಿ ವೀಕ್ಷಿಸಬಹುದು.
SCROLL FOR NEXT