ಸಿನಿಮಾ ಸುದ್ದಿ

'ಚಕ್ರವರ್ತಿ'ಯಲ್ಲಿ ಹೊಸ ಖಳನಾಯಕ ದಿನಕರ್ ತೂಗುದೀಪ್ ದರ್ಬಾರ್

Guruprasad Narayana
ಬೆಂಗಳೂರು: ಸಹ ನಿರ್ದೇಶಕನಾಗಿ, ಮೂರು ಸಿನೆಮಾಗಳಿಗೆ ನಿರ್ದೇಶಕನಾಗಿ, ಹಾಗೂ ನಿರ್ಮಾಪಕನಾಗಿ, ಜನಪ್ರಿಯ ನಟನ ಸಹೋದರನಾಗಿ ಈಗ ಸಹೋದರ ದರ್ಶನ್ ನಾಯಕನಟನಾಗಿ ನಟಿಸುತ್ತಿರುವ ಸಿನೆಮಾದಲ್ಲಿ ಖಳನಾಯನಾಗಿದ್ದಾರೆ ದಿನಕರ್ ತೂಗುದೀಪ್. 
ಸದ್ಯಕ್ಕೆ ಹೈದರಾಬಾದ್ ನಲ್ಲಿರುವ 'ಚಕ್ರವರ್ತಿ' ಚಿತ್ರತಂಡ ಸೇರಿರುವ ದಿನಕರ್, ತನ್ನ ಈ ನೂತನ ಖಳನಾಯಕನ ಅವತಾರದಲ್ಲಿ, ಅವರ ತಂದೆ ತೂಗುದೀಪ್ ಶ್ರೀನಿವಾಸ್ ನಿರ್ವಹಿಸುತ್ತಿದ್ದ ಖಳನಾಯಕನ ಪಾತ್ರಗಳನ್ನು ನೆನಪಿಸುತ್ತಾರೆ ಎನ್ನುತ್ತವೆ ಮೂಲಗಳು. 
ಕಲಾ ನಿರ್ದೇಶಕ ಈಶ್ವರಿ ಕುಮಾರ್ ನಿರ್ದೇಶನದಲ್ಲಿ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡಿರುವ ನಟ ತಮ್ಮ ಈ ಮೇಕ್ ಓವರ್ ಗೆ ನಿರ್ದೇಶಕ ಚಿಂತನ್ ಅವರೇ ಕಾರಣ ಎನ್ನುತ್ತಾರೆ.
ತಾವು ಈ ಪಾತ್ರಕ್ಕೆ ಸಿದ್ಧತೆ ಮಾಡಿಕೊಂಡದ್ದರ ಬಗ್ಗೆ ಹೇಳುವ ನಟ "ನನ್ನ ತಂದೆಯವರ ಹಳೆಯ ಚಿತ್ರಗಳನ್ನು ನೋಡಿದೆ. ಹಾಗೆಯೇ ವಜ್ರುಮುನಿ ಅವರು ಖಳನಾಯಕನ ಪಾತ್ರಗಳಲ್ಲಿ ನಟಿಸಿರುವ ಚಿತ್ರಗಳನ್ನು ಕೂಡ. ನಾನು ನಿರ್ದೇಶಕನ ಕೋನದಿಂದ ಈ ಎಲ್ಲಾ ಚಿತ್ರಗಳನ್ನು ನೋಡಿದ್ದೆನಾದರೂ, ನಟನ ದೃಷ್ಟಿಯಿಂದ ಮತ್ತೆ ಈ ಸಿನೆಮಾಗಳನ್ನು ನೋಡಿದ್ದು ಸಹಾಯ ಮಾಡಿದೆ. ನನ್ನ ಪಾತ್ರವನ್ನು ಚಿಂತನ್ ಬಹಳ ಚೆನ್ನಾಗಿ ಸೃಷ್ಟಿಸಿದ್ದಾರೆ" ಎನ್ನುತ್ತಾರೆ. 
ತಮ್ಮ ತಂದೆಯ ಜೊತೆ ಹೋಲಿಕೆ ಮಾಡುವ ಅಪಾಯ ಇದ್ದೆ ಇದೆ ಎನ್ನುವ ದಿನಕರ್, ಅವರ ಆಶೀರ್ವಾದ ನನಗೆ ಇಂದಿಗೂ ದೊಡ್ಡ ವರ ಎನ್ನುತ್ತಾರೆ "ನಮ್ಮ ತಂದೆಯ ನಟನಾ ಶೈಲಿಯನ್ನು ನಕಲು ಮಾಡುವ ಅವಶ್ಯಕತೆ ಇಲ್ಲ. ಅದು ನನ್ನ ರಕ್ತದಲ್ಲೇ ಇದೆ. ಆದರೆ ನಮ್ಮ ತಂದೆಯವರನ್ನು ದೊಡ್ಡ ತೆರೆಯಲ್ಲಿ ಮತ್ತೆ ನೋಡುವ ನಿರೀಕ್ಷೆ ಭಯ ಹುಟ್ಟಿಸುತ್ತದೆ" ಎನ್ನುತ್ತಾರೆ. 
SCROLL FOR NEXT