'ನೀರ್ ದೋಸೆ' ಸಿನೆಮಾದಲ್ಲಿ ದತ್ತಣ್ಣ, ಸುಮನ್ ರಂಗನಾಥ್ ಮತ್ತು ಜಗ್ಗೇಶ್
ಬೆಂಗಳೂರು: ಮೂರು ವರ್ಷದ ನಂತರ 'ನೀರ್ ದೋಸೆ' ಸಿನೆಮಾ ಆಡಿಯೋ ಬಿಡುಗಡೆಗೆ ಸಜ್ಜಾಗಿದೆ. ಚಿತ್ರರಂಗದ ಒಳಗಿನಿಂದ ಮತ್ತು ಹೊರಗೆ ಎರಡೂ ಕಡೆಯಿಂದ ಅಡೆತಡೆಗಳನ್ನು ದಾಟಿದ್ದೇನೆ ಎನ್ನುತ್ತಾರೆ ನಿರ್ದೇಶಕ ವಿಜಯ್ ಪ್ರಸಾದ್.
ಹರಿಪ್ರಿಯಾ, ಜಗ್ಗೇಶ್, ದತ್ತಣ್ಣ ಮತ್ತು ಸುಮನ್ ರಂಗನಾಥ್ ಸಿನೆಮಾದ ಮುಖ್ಯ ಪಾತ್ರದಲ್ಲಿದ್ದಾರೆ. 'ಸಿದ್ಲಿಂಗು' ನಂತರ ಒಪ್ಪಿಕೊಂಡ ಸಿನೆಮಾ ಇದಾಗಿದ್ದರಿಂದ 'ನೀರ್ ದೋಸೆ' ತಮಗೂ ಮತ್ತು ನಿರ್ದೇಶಕರಿಗೂ ವಿಶೇಷ ಎನ್ನುತ್ತಾರೆ ಸಂಗೀತ ನಿರ್ದೇಶಕ ಅನೂಪ್ ಸೀಳಿನ್.
"ಸಿನೆಮಾ ಬಿಡುಗಡೆ ಕಾಣುತ್ತಿರುವುದಕ್ಕೆ ಹೊಸ ನಿರ್ಮಾಪಕರಿಗೆ ಧನ್ಯವಾದಗಳು" ಎನ್ನುವ ಅನೂಪ್ ಈ ಸಿನಿಮಾಗಾಗಿ ಹಾಡುಗಳನ್ನು ಸಂಯೋಜಿಸಿದ್ದಾರಂತೆ.
ಈ ಸಿನೆಮಾದ ಆಡಿಯೋದ ಮತ್ತೊಂದು ವಿಶೇಷ ಎಂದರೆ ಒಂದು ಹಾಡಿಗೆ ಖ್ಯಾತ ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್ ಅವರ ಆಲಾಪವನ್ನು ಬಳಸಿಕೊಂಡಿರುವುದು. "ಸಂಗೀತಗಾರ್ತಿಯ ಮೊಮ್ಮಗ ಮನೋಜ್ ಹಾನಗಲ್ ಅವರಿಂದ ಇದಕ್ಕೆ ಪರವಾನಗಿ ಪಡೆದೆವು. ನಮ್ಮ ಆಲ್ಬಮ್ ನಲ್ಲಿ ಖ್ಯಾತ ವಿದ್ವಾಂಸರ ಹಾಡುಗಾರಿಕೆಯನ್ನು ಬಳಸುತ್ತಿರುವುದಕ್ಕೆ ಹೆಮ್ಮೆಯಿದೆ" ಎನ್ನುತ್ತಾರೆ ಅನೂಪ್. ಸಂಗೀತ ನಿರ್ದೇಶಕರೇ ಸಂಯೋಜಿಸಿರುವ 'ಹೋಗಿ ಬಾ ಬೆಳಕೇ' ಹಾಡಿಗೆ ಗಂಗೂಬಾಯಿ ಅವರ ಪುರಿಯಾ ಧನಶ್ರೀ ರಾಗದ ಆಲಾಪವನ್ನು ಬಳಸಿಕೊಳ್ಳಲಾಗಿದೆಯಂತೆ.
"ಹಾಡುಗಳಲ್ಲಿ ವಿವಿಧ ಥೀಮ್ ಗಳನ್ನೂ ಬಳಸಿದ್ದೇನೆ. ಗಜಲ್, ಅರೇಬಿಯನ್, ಡುಯೆಟ್ ಥೀಮ್ ಇತ್ಯಾದಿ. ನನ್ನ ವೃತ್ತಿ ಜೀವನದ ಒಂದು ಅತ್ಯುತ್ತಮ ಆಲ್ಬಮ್ ಗಳಲ್ಲಿ ಇದು ಒಂದು ಎಂದು ನಂಬಿದ್ದೇನೆ" ಎನ್ನುತ್ತಾರೆ ಅನೂಪ್.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos