

ಬೆಂಗಳೂರು: ಗ್ರಾಹಕರು ಬ್ಯಾಂಕ್ನಲ್ಲಿಟ್ಟಿದ್ದ ಸುಮಾರು 4 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದು ಅದನ್ನು ಆನ್ಲೈನ್ ಬೆಟ್ಟಿಂಗ್ ಆಡಿದ ಆರೋಪದ ಮೇರೆಗೆ ಅಸಿಸ್ಟೆಂಟ್ ಮ್ಯಾನೇಜರ್ ನನ್ನುಬಂಧಿಸಲಾಗಿದೆ.
ಬೆಂಗಳೂರಿನ ಗಿರಿನಗರದ ಇಂಡಿಯನ್ ಬ್ಯಾಂಕ್ನಲ್ಲಿ ಈ ಘಟನೆ ನಡೆದಿದ್ದು, ಬ್ಯಾಂಕ್ ನಲ್ಲಿದ್ದ ಸುಮಾರು 4 ಕೋಟಿ ರೂ ಮೌಲ್ಯದ ಗ್ರಾಹಕರ ಚಿನ್ನಾಭರಣಗಳನ್ನು ಕದಿಯಲಾಗಿದೆ.
ಸಹಾಯಕ ವ್ಯವಸ್ಥಾಪಕ ಕಿರಣ್ ಕುಮಾರ್ ಗ್ರಾಹಕರ ಅಡವಿಟ್ಟ ಚಿನ್ನಾಭರಣವನ್ನು ಕದ್ದು ಮಾರಾಟ ಮಾಡಿದ್ದಾನೆ. ಬಳಿಕ ಅದರಿಂದ ಬಂದ ಹಣದಲ್ಲಿ ಆನ್ಲೈನ್ ಬೆಟ್ಟಿಂಗ್ ಆಡಿದ್ದಾನೆ ಎಂದು ಆರೋಪಿಸಲಾಗಿದೆ.
ಕಿರಣ್ ಕುಮಾರ್ ಗಿರಿನಗರದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಲಾಕರ್ ಕೀ ಮ್ಯಾನೇಜರ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಹತ್ತಿರ ಇದ್ದ ಕಾರಣ, ಮ್ಯಾನೇಜರ್ ಅನುಪಸ್ಥಿತಿಯಲ್ಲಿ ಸ್ವಲ್ಪಸ್ವಲ್ಪ ಚಿನ್ನ ಕದಿಯುತ್ತಿದ್ದ.
ಜನವರಿ 2ರಂದು ಗ್ರಾಹಕರು ತಮ್ಮ ಅಡವಿಟ್ಟ ಚಿನ್ನ ಪಡೆಯಲು ಬಂದಾಗ ಲಾಕರ್ ಪರಿಶೀಲನೆ ನಡೆಸಿದ ವೇಳೆ ಕೆಲವು ಚಿನ್ನಾಭರಣಗಳ ನಾಪತ್ತೆ ಪತ್ತೆಯಾಗಿತ್ತು. ಬಳಿಕ ಇತರೆ ಪ್ಯಾಕೇಟ್ ಪರಿಶೀಲಿಸಿದ ಮ್ಯಾನೇಜರ್ 21 ಪ್ಯಾಕೇಟ್ಗಳಲ್ಲಿ ಕೆಲವು ಹಾಗೂ 3 ಪ್ಯಾಕೇಟ್ಗಳಲ್ಲಿ ಸಂಪೂರ್ಣ ಚಿನ್ನ ಕಾಣೆಯಾಗಿರುವುದನ್ನು ಗಮನಿಸಿದ್ದಾರೆ.
ಕಿರಣ್ ಕುಮಾರ್ 2025ರ ನವೆಂಬರ್ನಿಂದ 2026ರ ಜನವರಿ ಅಂತ್ಯದವರೆಗೆ ಬ್ಯಾಂಕ್ನ ಲಾಕರ್ನಲ್ಲಿದ್ದ 4.12 ಕೋಟಿ ರೂ. ಮೌಲ್ಯದ 2.783 ಕೆ.ಜಿ ಚಿನ್ನಾಭರಣಗಳನ್ನು ಹಂತ ಹಂತವಾಗಿ ಕಳವು ಮಾಡಿದ್ದ. ಈ ವೇಳೆ ಸುಮಾರು 4 ಕೋಟಿ ರೂ. ಮೌಲ್ಯದ 2,783 ಗ್ರಾಂ ಚಿನ್ನ ಕಾಣೆಯಾಗಿದೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.
ಸಿಕ್ಕಿಬಿದ್ದಿದ್ದೇ ರೋಚಕ!
ಆಂತರಿಕ ವಿಚಾರಣೆ ವೇಳೆ ಕೃತ್ಯ ತಪ್ಪೊಪ್ಪಿಕೊಂಡಿದ್ದ ಕಿರಣ್, ಕದ್ದ ಚಿನ್ನವನ್ನು ಬೇರೆ ಬೇರೆ ಅಂಗಡಿಯಲ್ಲಿ ಗಿರವಿ ಹಾಕಿ ಬಂದ ಹಣವನ್ನು ಆನ್ಲೈನ್ ಬೆಟ್ಟಿಂಗ್ ಮತ್ತು ಜೂಜಾಟದಲ್ಲಿ ಬಳಸಿದ್ದ ಎನ್ನಲಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ಗಿರಿನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ತನಿಖೆ ನಂತರ ಕಿರಣ್ ಕುಮಾರ್ ಬಂಧಿಸಲಾಗಿದ್ದು, ಈಗಾಗಲೇ 700 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಉಳಿದ ಚಿನ್ನ ಮತ್ತು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಕದ್ದ ಆಭರಣಗಳನ್ನು ಬೇರೆ ಬೇರೆ ಫೈನಾನ್ಸ್ ಕಂಪೆನಿಗಳಲ್ಲಿ ಅಡವಿಟ್ಟು ಸುಮಾರು 2.5 ಕೋಟಿ ರೂಪಾಯಿಯಷ್ಟು ದೊಡ್ಡಮೊತ್ತವನ್ನು ಪಡೆದಿದ್ದ ಕಿರಣ್ ಕುಮಾರ್, ಅಷ್ಟೂ ಹಣವನ್ನು ಆನ್ಲೈನ್ ಬೆಟ್ಟಿಂಗ್ನಲ್ಲಿ ಕಳೆದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಹಲವು ವರ್ಷಗಳಿಂದ ಆನ್ಲೈನ್ ಬೆಟ್ಟಿಂಗ್ ಗೀಳು ಅಂಟಿಸಿಕೊಂಡಿರುವ ಕಿರಣ್ ಕುಮಾರ್, ಇದರಿಂದ ಲಕ್ಷಾಂತರ ರೂ. ಕಳೆದುಕೊಂಡಿದ್ದರು. ಬೆಟ್ಟಿಂಗ್ಗೆ ಹಣ ಹೊಂದಿಸುವ ಸಲುವಾಗಿ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ನಲ್ಲೇ ಚಿನ್ನಾಭರಣ ಕದ್ದು, ಜೈಲು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಕಳವು ಹೇಗೆ?
2025ರ ಜೂನ್ನಿಂದ ಗಿರಿನಗರ ಶಾಖೆಯಲ್ಲಿ ಕಿರಣ್ ಕುಮಾರ್ ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ತಮ್ಮ ಬಳಿಯೇ ಬ್ಯಾಂಕ್ನ ಲಾಕರ್ ಕೀಗಳನ್ನು ಇಟ್ಟುಕೊಂಡಿದ್ದರು. ನವೆಂಬರ್ನಿಂದ ವಾರದಲ್ಲಿ ಒಂದೆರಡು ದಿನ ಎಲ್ಲರಿಗಿಂತ ಮುಂಚಿತವಾಗಿ ಬ್ಯಾಂಕ್ಗೆ ಬಂದು, ಸದ್ದಿಲ್ಲದೆ ಲಾಕರ್ ತೆರೆಯುತ್ತಿದ್ದರು.
ಅಲ್ಲಿ ಗ್ರಾಹಕರು ಅಡಮಾನವಿಟ್ಟಿದ್ದ ಚಿನ್ನವನ್ನು ಸ್ವಲ್ಪ ಪ್ರಮಾಣದಲ್ಲಿ ಕಳವು ಮಾಡುತ್ತಿದ್ದರು. ಬಳಿಕ ಅದೇ ಆಭರಣಗಳನ್ನು ಬೇರೆ ಫೈನಾನ್ಸ್ಗಳಲ್ಲಿ ಅಡವಿಟ್ಟು ಹಣ ಪಡೆದು ಆನ್ಲೈನ್ ಬೆಟ್ಟಿಂಗ್ ಆಡುತ್ತಿದ್ದರು.
ಕಿರಣ್ ಕುಮಾರ್ ಬ್ಯಾಂಕ್ ಖಾತೆಯಲ್ಲಿ ಬೆಳಗ್ಗೆ 10 ಲಕ್ಷ ರೂ. ಇದ್ದರೆ, ಅದನ್ನು ಸಂಜೆ ವೇಳೆಗೆ ಬೆಟ್ಟಿಂಗ್ನಲ್ಲಿ ಕಳೆಯುತ್ತಿದ್ದರು ಎಂಬ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
Advertisement