ಬೆಂಗಳೂರು: ಬ್ಲಾಕ್ ಬಸ್ಟರ್ ಮರಾಠಿ ಸಿನೆಮಾ 'ಸೈರಾಟ್' ನ ದಕ್ಷಿಣ ಭಾರತದ ಭಾಷೆಗಳ ರಿಮೇಕ್ ಹಕ್ಕುಗಳನ್ನು ಖರೀದಿಸಿರುವ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಕನ್ನಡ ಅವತರಿಣಿಕೆಯ ನಿರ್ದೇಶನಕ್ಕೆ ಎಸ್ ನಾರಾಯಣ್ ಅವರನ್ನು ಆಯ್ಕೆ ಮಾಡಿದ್ದಾರೆ.
ಹಿರಿಯ ನಿರ್ದೇಶಕನ ಆಯ್ಕೆಗೆ ಕಾರಣ ತಿಳಿಸುವ ನಿರ್ಮಾಪಕ "ಮೊದಲಿಗೆ ಇಂತಹ ವಿಷಯಗಳನ್ನು ನಿಭಾಯಿಸುವುದಕ್ಕೆ ಅವರು ಸಮರ್ಥ ವ್ಯಕ್ತಿ. ಈ ಸಿನೆಮಾದ ಬಹುತೇಕ ತಾರಾಗಣ ಹೊಸಬರಾಗಿದ್ದು, ಅವರು ಹೊಸ ನಟರಿಂದ ಒಳ್ಳೆಯ ನಟನೆಯನ್ನು ಸಮರ್ಥವಾಗಿ ಹೊರತೆಗೆಯಬಲ್ಲರು. ಶಿಸ್ತಿಗೆ ಹೆಸರಾಗಿರುವ ಅವರು, ಚಿತ್ರರಂಗದಲ್ಲಿ ಯಶಸ್ಸು ಕಾಣಬಯಸುವ ಹೊಸಬರಿಗೆ ಸೆಟ್ ನಲ್ಲಿಯೇ ಸಿನೆಮಾ ಶಾಲೆಯನ್ನೇ ನಿರ್ಮಿಸಿಬಿಡುತ್ತಾರೆ. ಅಲ್ಲದೆ ಹೊಸಬರನ್ನು ಬಹಳ ತಾಳ್ಮೆಯಿಂದ ಕಾಣುತ್ತಾರೆ" ಎನ್ನುತ್ತಾರೆ ರಾಕ್ಲೈನ್.
ಇನ್ನು ಹೆಸರಿಡದ ಈ ರಿಮೇಕ್ ಚಿತ್ರದ ತಾರಾಗಣದ ಆಯ್ಕೆಗೆ ರಾಕಲೈನ್ ವೆಂಕಟೇಶ್ ಸದ್ಯಕ್ಕೆ ಆಡಿಶನ್ ನಡೆಸುತ್ತಿದ್ದಾರೆ.
ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸೈರಾಟ್ ಮರಾಠಿ ಸಿನೆಮಾ 100 ಕೋಟಿಗೂ ಹೆಚ್ಚು ಗಳಿಸಿ ಮರಾಠಿ ಚಿತ್ರರಂಗದಲ್ಲಿ ದಾಖಲೆ ಮಾಡಿತ್ತು. ರಾಕಲೈನ್ ಅವರೇ ನಿರ್ಮಿಸಲಿರುವ ತೆಲುಗು ರಿಮೇಕ್ ಚಿತ್ರವನ್ನು ಮೂಲ ನಿರ್ದೇಶಕ ನಾಗರಾಜ್ ಮಂಜುಳೆ ಅವರೇ ನಿರ್ದೇಶಿಸಲಿದ್ದಾರೆ ಎಂಬ ಊಹಾಪೋಹಗಳು ಕೂಡ ಎದ್ದಿವೆ.