ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇಬ್ಬರು ಪ್ರಯೋಗಾತ್ಮಕ ಮನಸ್ಸುಗಳು ಒಂದಾಗಲಿವೆ. 'ಸಿಂಪಲ್ ಆಗಿ ಒಂದು ಲವ್ ಸ್ಟೋರಿ', 'ಉಳಿದವರು ಕಂಡಂತೆ', 'ರಿಕ್ಕಿ', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾಗಳಲ್ಲಿ ಪ್ರಯೋಗಕ್ಕೆ ಒಡ್ಡಿಕೊಂಡ ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ, 2016 ರ ಅತಿ ಜನಪ್ರಿಯ ಕನ್ನಡ ಸಿನೆಮಾ 'ರಂಗಿತರಂಗ'ದ ನಿರ್ಮಾಪಕ ಎಚ್ ಕೆ ಪ್ರಕಾಶ್ ಒಂದಾಗಲಿದ್ದಾರೆ.
ಈ ಸಿನೆಮಾದ ಮೂಲಕ ಸಚಿನ್ ಸಂಕಲನಕಾರರರಾಗಿ ಮತ್ತು ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಈ ಹಿಂದೆ ಅವರು ರಕ್ಷಿತ್ ಶೆಟ್ಟಿ ನಿರ್ದೇಶನದ 'ಉಳಿದವರು ಕಂಡಂತೆ' ಸಿನೆಮಾದಲ್ಲಿ ಕೆಲಸ ಮಾಡಿದ್ದರು.
ಸ್ವತಂತ್ರ ನಿರ್ದೇಶಕನಾಗಿ ಇದು ಮೊದಲನೇ ಸಿನೆಮಾ ಆಗಿದ್ದು, ಸಿದ್ಧತೆಗಳು ಆಗಲೇ ಪ್ರಾರಂಭವಾಗಿವೆಯಂತೆ. ಅಧಿಕೃತ ಘೋಷಣೆ ಹೊರಬೀಳಬೇಕಷ್ಟೆ.
ಚರಣ್ ರಾಜ್ ಸಿನೆಮಾಗೆ ಸಂಗೀತ ನೀಡಲಿದ್ದು, ಮನೋಹರ್ ಜೋಶಿ ಸಿನೆಮ್ಯಾಟೋಗ್ರಾಫರ್. "ರಂಗಿತರಂಗ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ ಹಿನ್ನಲೆಯಲ್ಲಿ ಈ ಯಶಸ್ಸನ್ನು ಪ್ರಕಾಶ್ ಮರುಕಳಿಸಲು ಎಚ್ಚರದ ಹೆಜ್ಜೆ ಇಡುತ್ತಿದ್ದಾರೆ" ಎನ್ನುತ್ತವೆ ಮೂಲಗಳು.
ರಿಷಬ್ ಶೆಟ್ಟಿ ನಿರ್ದೇಶನದ 'ಕಿರಿಕ್ ಪಾರ್ಟಿ' ಸಿನೆಮಾದ ತದನಂತರ ರಕ್ಷಿತ್ ಶೆಟ್ಟಿ ಈ ಸಿನೆಮಾದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.