ಸಿನಿಮಾ ಸುದ್ದಿ

'ಬಿಗ್' ಮನೆಗೆ ಮತ್ತೆ ಎಂಟ್ರಿ ಕೊಟ್ಟ ಹುಚ್ಚ ವೆಂಕಟ್: ಪ್ರಥಮ್ ಮೇಲೆ ಹಲ್ಲೆ

Manjula VN

ಬೆಂಗಳೂರು: ಸಾಕಷ್ಟು ರಾದ್ಧಾಂತ ಸೃಷ್ಠಿಸಿ ಬಿಗ್ ಬಾಸ್ ಸೀಸನ್ 3ರಿಂದ ಹೊರಬಂದಿದ್ದ ಹುಚ್ಚ ವೆಂಕಟ್ ಅವರು ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದು, ಈ ಬಾರಿ ಒಳ್ಳೆ ಹುಡ್ಗ ಪ್ರಥಮ್ ಮೇಲೆ ಹಲ್ಲೆ ಮಾಡಿ ಹೊರಬಂದಿದ್ದಾರೆ.

ಕಳೆದ ಸೀಸನ್ ನಲ್ಲಿ ಗಾಯಕ ರವಿ ಮೂರೂರು ಅವರ ಮೇಲೆ ಹಲ್ಲೆ ನಡೆಸಿದ್ದ ಹುಚ್ಚ ವೆಂಕಟ್ ಅವರು ಬಿಗ್ ಮನೆಯಿಂದ ಎಲಿಮಿನೇಟ್ ಆಗದೆಯೇ ಹೊರಬಂದಿದ್ದರು. ಈ ವಿವಾದ ಪ್ರತೀಯೊಬ್ಬರೂ ಬಿಗ್ ಬಾಸ್ ಮನೆಯತ್ತ ತಿರುಗಿ ನೋಡುವಂತೆ ಮಾಡಿತ್ತು.

ಈ ಬಾರಿ ಕೂಡ ಸಾಕಷ್ಟು ಷರತ್ತುಗಳನ್ನು ವಿಧಿಸಿ, ಭದ್ರತಾ ಸಿಬ್ಬಂದಿಗಳೊಂದಿಗೆ ಮತ್ತೆ ಹುಚ್ಚ ವೆಂಕಟ್ ಅವರನ್ನು 3 ಗಂಟೆಗಳ ವಿಶೇಷ ಅತಿಥಿಯಾಗಿ ಬಿಗ್ ಬಾಸ್ ಮನೆಯೊಳಗೆ ಕಳುಹಿಸಲಾಗಿತ್ತು. ಮನೆಯೊಳಗೆ ಹೋಗುತ್ತಿದ್ದಂತೆಯೇ ಎಲ್ಲಾ ಸ್ಪರ್ಧಿಗಳನ್ನು ಮಾತನಾಡಿಸಿದ ಹುಚ್ಚ ವೆಂಕಟ್ ಅವರು, ನಟಿ ಸಂಜನಾ ಅವರ ಬಳಿ ಹೋಗಿ ಈ ರೀತಿಯಾದ ತುಂಡುಡುಗೆಗಳನ್ನು ಧರಿಸಬೇಡಿ ಎಂದು ಹೇಳಿದರು. ನಂತರ ನಟಿ ಕಾರುಣ್ಯ ಅವರ ಬಳಿ ಹೋಗಿ ಕಾರ್ಯಕ್ರಮವನ್ನು ಪುಟ್ಟ ಮಕ್ಕಳು ನೋಡುತ್ತಿರುತ್ತಾರೆ. ಈ ರೀತಿಯ ಬಟ್ಟೆ ಹಾಕಿದರೆ, ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದರು.

ಕೊನೆಯದಾಗಿ ಪ್ರಥಮ್ ಅವರ ಬಳಿ ಬಂದ ಹುಚ್ಚ ವೆಂಕಟ್ ಅವರು, ಕರ್ನಾಟಕದ ಬಾವುಟದ ಬಗ್ಗೆ ಕೇಳಿದರು. ಬಾವುಟದ ಮಹತ್ವದ ಬಗ್ಗೆ ಗೊತ್ತಿಲ್ಲ. ಹುಡುಗಿಯರ ಬಟ್ಟೆಯನ್ನು ಧರಿಸಿ ಬಾವುಟಕ್ಕೆ ಅವಮಾನ ಮಾಡುತ್ತೀಯಾ ಎಂದು ಹೇಳಿ ಏಕಾಏಕಿ ಹಲ್ಲೆ ನಡೆಸಲು ಆರಂಭಿಸಿದ್ದರು. ನಂತರ ಸ್ಥಳದಲ್ಲಿಯೇ ನಿಂತಿದ್ದ ಭದ್ರತಾ ಸಿಬ್ಬಂದಿಗಳು ಅವರನ್ನು ತಡೆದರು.

ಈ ಬಗ್ಗೆ ಸ್ವತಃ ಹುಚ್ಚ ವೆಂಕಟ್ ಅವರೇ ಸ್ಪಷ್ಟನೆ ನೀಡಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿದ್ದು, ಸ್ಪರ್ಧಿಗಳಿಗೆ ಟಾಸ್ಕ್ ವೊಂದನ್ನು ನೀಡಲಾಗಿತ್ತು. ಹೀಗಾಗಿ 2-3 ಗಂಟೆಗಳ ಕಾಲ ನನ್ನನ್ನು ಅತಿಥಿಯಾಗಿ ಆಹ್ವಾನಿಸಿದ್ದರು. ಮನೆಯೊಳಗೆ ಹೋಗುವುದಕ್ಕೂ ಮುನ್ನ ಕೆಲ ಷರತ್ತುಗಳನ್ನು ವಿಧಿಸಲಾಗಿತ್ತು. ಯಾರ ಮೇಲೂ ಕೈ ಎತ್ತಬಾರದು ಎಂದು ಸೂಚಿಸಿದ್ದರು. ಆದರೆ, ಈ ವೇಳೆ ನಾನು ಸುಳ್ಳು ಹೇಳಿದ್ದೆ. ಪ್ರಥಮ್ ಗೆ ಹೊಡೆಯುವುದು ನನ್ನ ಉದ್ದೇಶವಾಗಿತ್ತು. ಪ್ರಥಮ್ ಗೆ ಕರ್ನಾಟಕದ ಧ್ವಜದ ಬಗ್ಗೆ ಗೊತ್ತಿಲ್ಲ. ಹುಡುಗಿಯರ ಕೆಂಪು ಸ್ಕರ್ಟ್, ಹಳದಿ ಬಣ್ಣದ ಶರ್ಟ್ ಹಾಕಿಕೊಂಡು ಕರ್ನಾಟಕದ ಬಾವುಟ ಎಂದಿದ್ದ. ಆತನಿಗೆ ಬಾವುಟದ ಮಹತ್ವ ಗೊತ್ತಿಲ್ಲ ಹೀಗಾಗಿ ಅವರ ಮೇಲೆ ಕೋಪವಿತ್ತು. ಹೀಗಾಗಿ ಅವನಿಗೆ ಹೊಡೆದೆ ಎಂದು ಹೇಳಿಕೊಂಡಿದ್ದಾರೆಂದು ಹೇಳಿಕೊಂಡಿವೆ.

SCROLL FOR NEXT