ಭೂಗತ ಜಗತ್ತಿನ ಮಾಜಿ ಡಾನ್ ಎಂಪಿ ಜಯರಾಜ್ ಪುತ್ರ ಅಜಿತ್ ಜಯರಾಜ್ ತನ್ನ ತಂದೆಯ ಕುರಿತು ಚಿತ್ರವನ್ನು ಮಾಡಲು ನಿರ್ಧರಿಸಿದ್ದಾರೆ.
ಉದಯೋನ್ಮುಖ ನಟನಾಗಿರುವ ಅಜಿತ್ ಜಯರಾಜ್, ತಮ್ಮ ಕಲಾರಂಗವನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ಹೀಗೆ ಹೇಳುತ್ತಾರೆ " ಓರ್ವ ಡಾಕ್ಟರ್ ನ ಮಗ ಡಾಕ್ಟರ್ ಆಗಬೇಕೆಂಬ ನಿಯಮವಿಲ್ಲ. ನಮ್ಮ ತಂದೆಯನ್ನು ಡಾನ್ ಎಂದು ಗುರುತಿಸಲಾಗಿತ್ತು. ಆದರೆ ನಾನು ಕಲಾತ್ಮಕ ರೀತಿಯಲ್ಲಿ ಹಿಂಸಾಚಾರ ಇರುವ ಕಲಾರಂಗವನ್ನು ಆಯ್ಕೆ ಮಾಡಿಕೊಂಡಿದ್ದೇನೆ". ಎಂದಿದ್ದಾರೆ.
ಜಯರಾಜ್ ಅವರ ಮಗ ಎಂದು ಗುರುತಿಸಿಕೊಳ್ಳುವುದರ ಬಗ್ಗೆ ಹೆಮ್ಮೆಯಿದೆ ಎಂದಿರುವ ಅಜಿತ್ ಜಯರಾಜ್ ತನ್ನ ತಂದೆ ಸಿಟಿಯ ರಾಬಿನ್ ಹುಡ್ ಆಗಿದ್ದರು ಎಂದು ಹೇಳುತ್ತಾರೆ. ಜಯರಾಜ್ ಮೃತಪಟ್ಟಾಗ ಅಜಿತ್ ಜಯರಾಜ್ ಗೆ ಕೇವಲ 8 ವರ್ಷ. ನನ್ನ ತಂದೆ ಜಯರಾಜ್ ಬಗ್ಗೆ ಜನರಿಗೆ ತಿಳಿಯದ ಅನೇಕ ವಿಷಯಗಳಿವೆ, ಅವರಲ್ಲಿ ಒಳ್ಳೆಯ ಗುಣಗಳೂ ಇದ್ದವು. ನಮ್ಮ ಏರಿಯಾದ ಸ್ಲಂಗಳಲ್ಲಿ ಇಂದಿಗೂ ದೇವರ ಫೋಟೊ ಪಕ್ಕದಲ್ಲಿ ಜಯರಾಜ್ ಫೋಟೊ ಇಟ್ಟು ಪೂಜೆ ಮಾಡುತ್ತಾರೆ. ಅವರಿಗೆ ಬಹಳಷ್ಟು ಮಂದಿ ಅನುಯಾಯಿಗಳಿದ್ದರು. ನಮ್ಮ ತಾಯಿ ನನ್ನನ್ನು ಈ ಮಟ್ಟಕ್ಕೆ ಬೆಳೆಸಲು ಪಟ್ಟಿರುವ ಶ್ರಮ ಸೇರಿದಂತೆ ಜಯರಾಜ್ ಜೀವನದ ಬಗೆಗಿನ ಎಲ್ಲದನ್ನೂ ಚಿತ್ರದಲ್ಲಿ ತೋರಿಸಲಾಗುವುದು ಎಂದು 'ಅಗಮ್ಯ' ಸಿನೆಮಾದ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ ಅಜಿತ್ ತಿಳಿಸಿದ್ದಾರೆ. 'ಆ ದಿನಗಳು' ಸಿನೆಮಾದಲ್ಲಿ ಅಜಿತ್ ಪಾತ್ರವೊಂದರಲ್ಲಿ ನಟಿಸಬೇಕಿತ್ತಂತೆ. ಆದರೆ ಆಗ ಅವರು ದೈಹಿಕವಾಗಿ ಇನ್ನು ಸಿದ್ಧಗೊಳ್ಳದೆ ಹೋದದ್ದರಿಂದ ಆ ಪಾತ್ರವನ್ನು ಚೇತನ್ ಪಡೆದುಕೊಂಡರಂತೆ. ಆದರೆ ಈಗ ತಮ್ಮ ತಂದೆಯ ಬಗೆಗಿನ ಚಿತ್ರವನ್ನು 'ಭಗತ್' ನಿರ್ದೇಶಿಸಲಿದ್ದಾರೆ ಎಂದು ಅಜಿತ್ ಹೇಳಿದ್ದಾರೆ.
ಅಜಿತ್ ಜಯರಾಜ್ ತಮ್ಮ ಮೂರನೆ ಸಿನಿಮಾ ತ್ರಾಟಕ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದು, ಶಿವಗಣೇಶ್ ನಿರ್ದೇಶನದ ಎರಡನೇ ಸಿನಿಮಾ ಇದಾಗಿರಲಿದ್ದು ಈ ಸಿನೆಮಾ ಕನ್ನಡ ಮತ್ತು ತಮಿಳು ಎರಡು ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos