ಬೆಂಗಳೂರು: ರಾಯಚೂರು ಮೂರು ದಿನಗಳ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿರುವ ಸಮಯದಲ್ಲೇ, ಬೆಂಗಳೂರಿನಲ್ಲಿ ಅದೇ ಸಮಯಕ್ಕೆ ಮೂರು ದಿನಗಳ, ಕನ್ನಡ ಚಿತ್ರರಂಗದ ದಂತಕತೆ ಡಾ. ರಾಜಕುಮಾರ್ ರಾಷ್ಟ್ರೀಯ ಉತ್ಸವಕ್ಕೆ ರಂಗ ಸಜ್ಜಾಗಿದೆ.
ಈ ಮೂರು ದಿನಗಳ ರಾಜ್ ಉತ್ಸವ ರವೀಂದ್ರ ಕಲಾಕ್ಷೇತ್ರದಲ್ಲಿ ಡಿಸೆಂಬರ್ ೨ ರಿಂದ ೪ ರವರೆಗೆ ಆಯೋಜಿಸಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಇದನ್ನು ಉದ್ಘಾಟಿಸಲಿದ್ದಾರೆ. ಈ ಉತ್ಸವದ ಮುಖ್ಯಅಂಶಗಳು ಫೋಟೋ ಪ್ರದರ್ಶನ, ಸೆಮಿನಾರ್ ಗಳು, ಡಾ. ರಾಜಕುಮಾರ್ ಅವರ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಡಾ. ರಾಜಕುಮಾರ್ ಸಮಗ್ರ ಚರಿತ್ರೆ ಪುಸ್ತಕದ ಬಗ್ಗೆ ಮಾತುಕತೆ.
ಡಾ. ರಾಜಕುಮಾರ್ ಬಗ್ಗೆ ಹಿರಿಯ ಚಿತ್ರ ನಿರ್ದೇಶಕ ಟಿ ಎಸ್ ನಾಗಾಭರಣ, ನಟ-ನಿರ್ದೇಶಕ ಪ್ರಕಾಶ್ ರೈ, ಹಾಸ್ಯಗಾರ ಗಂಗಾವತಿ ಪ್ರಾಣೇಶ್ ಸೇರಿದಂತೆ ಹಲವರು ಮಾತನಾಡಲಿದ್ದಾರೆ. ನಟರಾದ ಆನಂದ್ ಮತ್ತು ರೂಪಿಕಾ ರಾಜಕುಮಾರ್ ಅವರ ಜನಪ್ರಿಯ ಗೀತೆಗಳಿಗೆ ಹೆಜ್ಜೆ ಹಾಕಲಿದ್ದಾರೆ ಮತ್ತು ಶಮಿತಾ ಮಲ್ನಾಡ್ ತಂಡ ಕೂಡ ಉತ್ಸವದಲ್ಲಿ ಪ್ರದರ್ಶನ ನೀಡಲಿದೆ.
ಈ ಉತ್ಸವದಲ್ಲಿ ರಾಜಕುಮಾರ್ ಅವರ ಕೆಲವು ಕಟ್ಟಾ ಅಭಿಮಾನಿಗಳನ್ನು ಸತ್ಕರಿಸಲು ಕೂಡ ಆಯೋಜಕರು ಯೋಜನೆ ರೂಪಿಸಿಕೊಂಡಿದ್ದಾರೆ.