ಕಳೆದ 12 ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ವೈವಿಧ್ಯಮಯ ಚಿತ್ರಗಳನ್ನು ಕೊಟ್ಟಿದ್ದಾರೆ. ಉತ್ತಮ ಕಥೆ, ಹಾಸ್ಯ ಮತ್ತು ಪ್ರೀತಿಯನ್ನು ಸರಿಯಾಗಿ ಮಿಶ್ರಣ ಮಾಡಿ ಪ್ರೇಕ್ಷಕರಿಗೆ ಉಣಬಡಿಸುವುದರಲ್ಲಿ ಭಟ್ಟರು ಜಾಣರು.
ನಿರ್ದೇಶಕನ ಸವಾಲುಗಳನ್ನು ಸಂತೋಷದಿಂದ ಸ್ವೀಕರಿಸುವ ಯೋಗರಾಜ್ ಭಟ್, ತಮ್ಮ ಬಹು ನಿರೀಕ್ಷಿತ ಚಿತ್ರ ದನ ಕಾಯೋನು ಬಿಡುಗಡೆಗೆ ಕಾತರರಾಗಿದ್ದಾರೆ. ಈ ಚಿತ್ರ ನನ್ನ, ದುನಿಯಾ ವಿಜಯ್ ಮತ್ತು ಇಡೀ ತಂಡಕ್ಕೆ ಒಂದು ಮೈಲಿಗಲ್ಲು ಎನ್ನುತ್ತಾರೆ.
ಇಂದು ಬೆಳ್ಳಿ ಪರದೆಯಲ್ಲಿ ಅಪರೂಪವಾಗಿ ಕಾಣಿಸುವ ಗ್ರಾಮೀಣ ಪ್ರದೇಶದ ಕಥೆಯನ್ನು ಹೇಳುವ ದನ ಕಾಯೋನು ಚಿತ್ರದಲ್ಲಿ ಗ್ರಾಮಣ ಪ್ರದೇಶದ ವಾಸ್ತವಕ್ಕೆ ಹತ್ತಿರವಾದ ವಿಷಯಗಳು, ಹಾಸ್ಯ, ನಾಟಕ ಮೊದಲಾದ ವಿಷಯಗಳನ್ನು ನಗರಕ್ಕೆ ತರಲಾಗಿದೆ. ಭಾರತದ ಶೇಕಡಾ 7ರಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ನಾವು ಕೂಡ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿಯನ್ನು ಅವಲಂಬಿಸಿದ್ದೇವೆ ಎನ್ನುತ್ತಾರೆ ಭಟ್ಟರು.
ದನ ಕಾಯೋನು ಚಿತ್ರದ ಶೀರ್ಷಿಕೆ ಕೂಡ ತುಂಬಾ ಕುತೂಹಲವಾಗಿದೆ. ಪ್ರೇಕ್ಷಕರನ್ನು ಶೀರ್ಷಿಕೆಯಿಂದಲೇ ಸೆಳೆಯುತ್ತಾರೆ. ಕಾಲೇಜಿನಲ್ಲಿ ಭಟ್ಟರ ಅಡ್ಡ ಹೆಸರು ದನ ಕಾಯೋನು ಎಂಬುದಾಗಿತ್ತಂತೆ. ಸಾಮಾನ್ಯವಾಗಿ ಶಾಲೆ, ಕಾಲೇಜುಗಳಲ್ಲಿ 10 ಹುಡುಗರಲ್ಲಿ ಇಬ್ಬರನ್ನು ದನ ಕಾಯೋನು ಎಂದು ಕರೆಯುತ್ತಿದ್ದರು, ನಾನು ಕೂಡ ಇಬ್ಬರಲ್ಲಿ ಒಬ್ಬನಾಗಿದ್ದೆ ಎಂದು ನೆಪಿಸಿಕೊಳ್ಳುತ್ತಾರೆ.
ಚಿತ್ರದಲ್ಲಿ ದನ ಕಾಯೋನು ಪಾತ್ರವನ್ನು ವಿಜಯ್ ನಿರ್ವಹಿಸಿದ್ದು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನು ವಿಜಯ್ ಗೆ ಜೋಡಿಯಾಗಿ ಅಭಿನಯಿಸಿದ ಪ್ರಿಯಾಮಣಿ ಪ್ರತಿಭಾವಂತ ಕಲಾವಿದೆ. ಇಂದಿನ ಹೊಸ ಕಲಾವಿದರು ಪ್ರಿಯಾಮಣಿಯವರಿಂದ ಕಲಿಯುವುದಿದೆ. ಅವರು ತಮ್ಮ ದೃಶ್ಯಗಳನ್ನು ನಿಖರವಾಗಿ ಅಭ್ಯಾಸ ಮಾಡುತ್ತಾರೆ. ಅವರ ಅಭಿನಯಕ್ಕೆ ಮಾರ್ಗದರ್ಶನ ನೀಡಬೇಕಾದ ಅಥವಾ ತಿದ್ದಬೇಕಾದ ಸಂದರ್ಭಗಳು ಕಡಿಮೆ ಎನ್ನುವ ಅವರು ದನ ಕಾಯೋನು ಅಂದರೆ ಅವಮಾನವಲ್ಲ, ಅದು ಹೆಮ್ಮೆಯ ಬಿರುದು ಎನ್ನುತ್ತಾರೆ.
ಚಿತ್ರದಲ್ಲಿ ಕಪ್ಪು ಗೂಳಿ ಬಿಳಿ ಹಸುವಿನ ಜೊತೆಗೆ ಪ್ರಣಯ ಮಾಡುವ ದೃಶ್ಯವಿದೆಯಂತೆ. ಅವುಗಳನ್ನು ಒಟ್ಟು ಸೇರಿಸುವುದು ಚಿತ್ರದ ಕ್ಲಿಷ್ಟಕರ ಸನ್ನಿವೇಶವಾಗಿತ್ತು ಎಂದು ಹೇಳುತ್ತಾರೆ. ಪ್ರಾಣಿಗಳನ್ನು ಬಳಸಲು ಪ್ರಾಣಿದಯಾ ಮಂಡಳಿ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದು ಹೇಳಲು ಮರೆಯುವುದಿಲ್ಲ.
ಚಿತ್ರದಲ್ಲಿ ರಂಗಾಯಣ ರಘು, ಚಿಕ್ಕಣ್ಣ ಮೊದಲಾದವರಿದ್ದಾರೆ. ವಿ.ಹರಿಕೃಷ್ಣನ್ ಅವರ ಸಂಗೀತ, ಸುಜ್ಞಾನ ಅವರ ಕ್ಯಾಮರಾ ಚಳಕವಿದೆ.