ಬೆಂಗಳೂರು: ಮರಾಠಿಯ ಬ್ಲಾಕ್ ಬಸ್ಟರ್ ಸಿನೆಮಾ 'ಸೈರಾಟ್' ರಿಮೇಕ್ ಗೆ ಮೂಲ ಸಿನೆಮಾದ ನಾಯಕನಟಿಯೇ ನಟಿಸುತ್ತಿರುವುದು ವಿಶೇಷ. ರಿಂಕು ರಾಜಗುರು ಜೊತೆಗೆ, ಸತ್ಯಪ್ರಕಾಶ್ ಅವರ ಪುತ್ರನನ್ನು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.
ಎಸ್ ನಾರಾಯಣ್ ನಿರ್ದೇಶಿಸುತ್ತಿರುವ, ಇನ್ನು ಹೆಸರಿಡದ ಈ ಚಿತ್ರದ ಮುಹೂರ್ತ ಎರಡು ದಿನಗಳ ಹಿಂದೆ ನೆರವೇರಿದೆ. ಹಾಗೆಯೇ ನಾಯಕ ಮತ್ತು ನಾಯಕನಟಿಯ ಫೋಟೋ ಶೂಟ್ ಕೂಡ ಜರುಗಿದೆ. "ಹೌದು ದಸರಾ ಹಬ್ಬದ ಸಮಯದಲ್ಲಿ ಗುರುವಾರ ಮುಹೂರ್ತ ಮಾಡಿದ್ದೇವೆ. ಮೂರು ದಿನಗಳ ಕಾಲ ಚಿತ್ರೀಕರಣ ಮಾಡಿ, ಮುಂದಿನ ಹಂತದ ಚಿತ್ರೀಕರಣವನ್ನು ದೀಪಾವಳಿಯಲ್ಲಿ ಮುಂದುವರೆಸಲಿದ್ದೇವೆ" ಎನ್ನುತ್ತಾರೆ ನಾರಾಯಣ್.
ಚಲನಚಿತ್ರಗಳಿಗಾಗಿ ಸತ್ಯಪ್ರಕಾಶ್ ಅವರ ಪುತ್ರನ ಹೆಸರನ್ನು ಬದಲಾಯಿಸಲು ಮನಸುಮಾಡಿರುವ ನಿರ್ದೇಶಕ ಶೀಘ್ರದಲ್ಲೇ ಅವರಿಗೆ ನಾಮಕರಣ ಮಾಡಲಿದ್ದಾರಂತೆ. ಸತ್ಯಪ್ರಕಾಶ್ ದಕ್ಷಿಣ ಭಾರತದ ಖ್ಯಾತ ಖಳನಟ.
ಆಕಾಶ್ ಥೋಸರ್ ಮತ್ತು ರಿಂಕು ನಟಿಸಿದ್ದ ಈ ಮರಾಠಿ ಚಿತ್ರ ಏಪ್ರಿಲ್ ನಲ್ಲಿ ಬಿಡುಗಡೆಯಾಗಿ ಹಲವು ದಾಖಲೆಗಳನ್ನು ಮಾಡಿತ್ತು. ರಾಕ್ಲೈನ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆ ಈ ಸಿನೆಮಾವನ್ನು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ರಿಮೇಕ್ ಮಾಡಲು ಹಕುಗಳನ್ನು ಖರೀದಿಸಿತು. ಪಂಜಾಬಿ ಭಾಷೆಯಲ್ಲಿಯೂ ಈ ಸಿನೆಮಾ ರಿಮೇಕ್ ಆಗುತ್ತಿದೆ ಎಂದು ತಿಳಿದುಬಂದಿದೆ. ಮೂಲ ಮರಾಠಿ ಸಿನೆಮಾವನ್ನು ನಾಗರಾಜ್ ಮಂಜುಳೆ ನಿರ್ದೇಶಿಸಿದ್ದರು.