ಸಿನಿಮಾ ಸುದ್ದಿ

ಸ್ವಲ್ಪ ವಿಳಂಬವಾದರೂ 'ರಾಮ ಕಾಡಿಗೆ' ಹೋಗುವುದು ಪಕ್ಕಾ: ನೀನಾಸಂ ಸತೀಶ್‌

Lingaraj Badiger
ಚಿತ್ರ ತಂಡದಲ್ಲಿನ ಭಿನ್ನಾಭಿಪ್ರಾಯಗಳಿಂದಾಗಿ ನೀನಾಸಂ ಸತೀಶ್‌ ಅಭಿನಯದ ‘ರಾಮನು ಕಾಡಿಗೆ ಹೋದನು’ಚಿತ್ರ ನಿಂತುಹೋಗಿದೆ ಎಂಬ ವರದಿಗಳಿಗೆ ಈಗ ಸ್ವತಃ ಸತೀಶ್‌ ಅವರೇ ಸ್ಪಷ್ಟನೆ ನೀಡಿದ್ದು, ಚಿತ್ರ ನಿಂತು ಹೋಗಿಲ್ಲ. ಆರು ತಿಂಗಳು ಮುಂದೂಡಿಕೆಯಾಗಿದೆ ಅಷ್ಟೆ ಎಂದು ಹೇಳುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
‘ರಾಮನು ಕಾಡಿಗೆ ಹೋದನು’ಚಿತ್ರ ನಿಂತು ಹೋಗಿಲ್ಲ. ಆರು ತಿಂಗಳ ಮುಂದೂಡಲಾಗಿದೆ ಎಂದು ನೀನಾಸಂ ಸತೀಶ್ ಅವರು ಟ್ವೀಟ್ ಮಾಡಿದ್ದು, ಇದಕ್ಕೆ ಕಾರಣ ತಮ್ಮ ಗಡ್ಡ ಎಂದು ಹೇಳಿದ್ದಾರೆ.
‘ಸದ್ಯಕ್ಕೆ ನಾನು ‘ಗೋದ್ರಾ’, ‘ಅಯೋಗ್ಯ’ ಮತ್ತು ಒಂದು ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಆ ಮೂರು ಚಿತ್ರಗಳ ಪಾತ್ರಗಳಿಗೂ ಗಡ್ಡ ಬೇಕು. ಆದರೆ ‘ರಾಮನು ಕಾಡಿಗೆ ಹೋದನು’ ಸಿನಿಮಾದ ನಾಯಕನಿಗೆ ಗಡ್ಡ ಇರುವುದಿಲ್ಲ. ಗಡ್ಡ ತೆಗೆಯದೇ ಚಿತ್ರೀಕರಣ ಮಾಡಲು ಸಾಧ್ಯವಾಗುವುದಿಲ್ಲ. ಗಡ್ಡ ತೆಗೆದರೆ ಉಳಿದ ಮೂರು ಚಿತ್ರಗಳಿಗೆ ತೊಂದರೆಯಾಗುತ್ತದೆ. ಅಲ್ಲದೇ ಈ ಚಿತ್ರ ನಮ್ಮದೇ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿದೆ. ಆದ್ದರಿಂದ ಉಳಿದ ಮೂರು ಚಿತ್ರಗಳ ಚಿತ್ರೀಕರಣ ಮುಗಿಸಿಕೊಂಡು ಈ ಚಿತ್ರವನ್ನು ಕೈಗೆತ್ತಿಕೊಂಡರಾಯ್ತು ಎಂದುಕೊಂಡಿದ್ದೇವೆ’ಎಂದು ಸತೀಶ್ ವಿವರಿಸಿದ್ದಾರೆ.
ಆ ಮೂರು ಚಿತ್ರಗಳ ಕೆಲಸ ಮುಗಿಯಲು ಇನ್ನು ಆರು ತಿಂಗಳ ಸಮಯ ಬೇಕು. ಆದ್ದರಿಂದ ಆರು ತಿಂಗಳ ನಂತರವೇ ಕಾಡಿಗೆ ಹೋಗಲು ಅವರು ನಿರ್ಧರಿಸಿದ್ದಾರೆ.
ವಿಕಾಸ್ ಪಂಪಾಪತಿ ಹಾಗೂ ವಿನಯ್ ಪಂಪಾಪತಿ ಸಹೋದರರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಐಶಾನಿ ಶೆಟ್ಟಿ ನಾಯಕಿಯಾಗಿದ್ದಾರೆ.
SCROLL FOR NEXT