ಬೆಂಗಳೂರು: ದುನಿಯಾ ವಿಜಯ್ ನಟನೆಯ 'ಮಾಸ್ತಿ ಗುಡಿ' ಚಿತ್ರೀಕರಣದ ವೇಳೆಯಲ್ಲಿ ನಡೆದ ದುರಂತಕ್ಕೆ ಬಂಧನಕ್ಕೆ ಒಳಗಾಗಿ ಈಗ ಜಾಮೀನಿನ ಮೇಲೆ ಹೊರಗೆ ಬಂದಿರುವ ಸಾಹಸ ನಿರ್ದೇಶಕ ರವಿವರ್ಮ ತಮ್ಮ ಸಾಹಸ ನಿರ್ದೇಶನದ ಇತ್ತೀಚಿನ ಬಾಲಿವುಡ್ ಚಿತ್ರ ಶಾರುಖ್ ಖಾನ್ ನಟನೆಯ 'ರಯೀಸ್' ಚಿತ್ರಕ್ಕೆ ಪ್ರಶಂಸೆ ಪಡೆಯುತ್ತಿದ್ದಾರೆ.
ಈಗ ಮತ್ತೆ ಕೆಲಸಕ್ಕೆ ಹಿಂದಿರುಗಿರುವ ಸಾಹಸ ನಿರ್ದೇಶಕ, ಸದ್ಯಕ್ಕೆ ರಾಣಾ ದಗ್ಗುಬಾಟಿ ಮತ್ತು ಕಾಜಲ್ ಅಗರವಾಲ್ ತೆಲುಗು ಚಿತ್ರ 'ನೇನೆ ರಾಜು ನೇನೆ ಮಂತ್ರಿ' ಸಿನೆಮಾ ಸೆಟ್ ನಲ್ಲಿ ಕಾರ್ಯನಿರತರಾಗಿದ್ದಾರೆ. ಅಲ್ಲದೆ ಹೊಸಬರು ನಟಿಸುತ್ತಿರುವ ಮತ್ತೊಂದು ತೆಲುಗು ಸಿನೆಮಾಗೂ ಸ್ಟಂಟ್ ಗಳನ್ನೂ ನಿರ್ದೇಶಿಸಲಿದ್ದಾರೆ.
ಈಮಧ್ಯೆ ಎ ಹರ್ಷ ನಿರ್ದೇಶಿಸಲಿರುವ ಪುನೀತ್ ರಾಜಕುಮಾರ್ ಸಿನೆಮಾಗೂ ಸಾಹಸ ನಿರ್ದೇಶನ ಮಾಡಲು ಸಹಿ ಮಾಡಿದ್ದಾರೆ. ಫೆಬ್ರವರಿ ೬ ರಿಂದ ಈ ಸಿನೆಮಾದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಹರ್ಷ ಶೀಘ್ರದಲ್ಲೇ ಸೆಟ್ ಸೇರಲಿದ್ದಾರೆ ಎನ್ನಲಾಗಿದೆ.
ಜೊತೆಗೆ ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಕೆಜಿಎಫ್' ಸಿನೆಮಾಗೆ ಕೂಡ ರವಿವರ್ಮ ಸಾಹಸ ನಿರ್ದೇಶನ ಮಾಡಲಿದ್ದಾರಂತೆ. ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಈ ಸಿನೆಮಾ ೭೦ ರ ದಶಕದ ಕಥೆ ಹೇಳಲಿದ್ದು, ಬಾದಾಮಿಯಲ್ಲಿ ಬಹುತೇಕ ಚಿತ್ರೀಕರಣಗೊಳ್ಳಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos