ಬೆಂಗಳೂರು: ರಾಜ್ ಬಿ ಶೆಟ್ಟಿ ಬರೆದು ನಿರ್ದೇಶಿಸಿ, ಪ್ರಧಾನ ಪಾತ್ರದಲ್ಲಿ ನಟಿಸಿರುವ 'ಒಂದು ಮೊಟ್ಟೆಯ ಕಥೆ' ಸಿನೆಮಾ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದ್ದು, ಈ ಶುಕ್ರವಾರ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನೆಮಾ ಮೂಲಕ ತಮ್ಮ ಜೀವನವನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು ಎನ್ನುವ ರಾಜ್, ಈ ಸಿನೆಮಾ ಮಾಡಲು ಸಿಕ್ಕ ಸ್ಫೂರ್ತಿ ಮತ್ತು ಈ ಸಿನೆಮಾವನ್ನು ಜಾಗತಿಕ ಪರ್ಯಟನ ಮಾಡಿಸುತ್ತಿರುವ ನಿರ್ದೇಶಕ ಪವನ್ ಕುಮಾರ್ ಬಗ್ಗೆ ಮಾತನಾಡಿದ್ದಾರೆ.
ಸಿನೆಮಾಗಳು ಜೀವನವನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಕರಿಸುತ್ತವೆ ಎನ್ನುವ ರಾಜ್ ಈ ಹಿಂದೆ ರೇಡಿಯೋ ಜಾಕಿ ಆಗಿದ್ದವರು. "ಜೀವನ ನಮ್ಮ ಹಿಡಿತಕ್ಕೆ ಸಿಗಲು ನಮ್ಮ ದೌರ್ಬಲ್ಯವನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಅದನ್ನು ಹಾಗೆಯೇ ಒಪ್ಪಿಕೊಳ್ಳಬೇಕು" ಎನ್ನುವ ಅವರು "ಆದುದರಿಂದಲೇ ನನ್ನ ಬೋಳು ತಲೆಯ ಬಗ್ಗೆ ನನಗೆ ನಾಚಿಕೆಯಿಲ್ಲ. ಅದರ ಬಗ್ಗೆ ಹಾಸ್ಯ ಮಾಡಿಕೊಂಡು ನಗಬಲ್ಲೆ" ಎನ್ನುತ್ತಾರೆ.
ಈ ಸಿನೆಮಾ ಮೂಲಕ ಯಾವುದಾದರೂ ಸಂದೇಶ ನೀಡುತ್ತಿದ್ದೀರಾ ಎಂಬ ಪ್ರಶ್ನೆಗೆ "ನಾನು ಬೋಧಕನಲ್ಲ. ನನಗೆ ಮನರಂಜನೆ ನೀಡುವುದಕ್ಕೆ ಇಷ್ಟ" ಎನ್ನುತ್ತಾರೆ.
"ಬೋಳು ತಲೆಗಿಂತಲೂ, ಸೌಂದರ್ಯ ಮತ್ತು ಜೀವನದ ಬಗ್ಗೆ ಹೆಚ್ಚು ಮಾತನಾಡಿದ್ದೇನೆ. ಈ ಸಿನೆಮಾ ಪ್ರಾರಂಭಿಸಿದಾಗ ಇದರ ಪ್ರಮುಖ ಪಾತ್ರ ಜನಾರ್ಧನನಿಗಿದ್ದ ಸಂದೇಹಗಳು ನನಗು ಇದ್ದವು. ಅವರ ಗ್ರಹಿಕೆಯಿಂದ ನಾನು ಜೀವನ ನೋಡಲು ಪ್ರಾರಂಭಿಸಿದೆ. ಆಗ ನನ್ನ ಜೀವನ ಅರ್ಥ ಮಾಡಿಕೊಳ್ಳುವುದು ಸುಲಭವಾಯಿತು" ಎನ್ನುತ್ತಾರೆ.
ಈ ಸಿನೆಮಾ ಮಾಡುವುದಕ್ಕೂ ಮುಂಚಿತವಾಗಿ ಹಲವು ಕಿರುಚಿತ್ರಗಳನ್ನು ಮಾಡಿದ್ದಾಗಿ ನೆನಪಿಸಿಕೊಳ್ಳುವ ರಾಜ್ "'ಒಂದು ಮೊಟ್ಟೆಯ ಕಥೆ' ನನ್ನ ಮೊದಲ ಸಿನೆಮಾ ಆಗಲಿದೆ ಎಂದು ನಾನೆಂದಿಗೂ ಎಣಿಸಿರಲಿಲ್ಲ. ಇದಕ್ಕೂ ಮುಂಚೆ ಮೂರು ಸ್ಕ್ರಿಪ್ಟ್ ಗಳನ್ನು ಬರೆದಿದ್ದೆ. ಆದರೆ ಅವುಗಳು ಸಿನೆಮಾ ಆಗಲಿಲ್ಲ" ಎನ್ನುತ್ತಾರೆ.
ಸಿನೆಮಾವನ್ನು ಈಗ ಅರ್ಪಿಸುತ್ತಿರುವ ಮತ್ತು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿರುವ ನಿರ್ದೇಶಕ ಪವನ್ ಕುಮಾರ್ ಅವರಿಗೆ ಧನ್ಯವಾದ ತಿಳಿಸುವ ರಾಜ್ "ಇದನ್ನು ಪವನ್ ಅವರಿಗೆ ತೋರಿಸಿದಾಗ ಅವರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದರು" ಎಂದು ನೆನಪಿಸಿಕೊಳ್ಳುತ್ತಾರೆ.