ಸಿನಿಮಾ ಸುದ್ದಿ

ನಟ ದಿಲೀಪ್ ಬಂಧನ ಆಶ್ಚರ್ಯ ತಂದಿದೆ: ಸಂತ್ರಸ್ತ ನಟಿ

Manjula VN
ತಿರುವನಂತಪುರ: ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ಕೇರಳದ ನಟ ದಿಲೀಪ್ ಬಂಧನ ವಿಚಾರವಾಗಿ ಇದೇ ಮೊದಲ ಬಾರಿಗೆ ಸಂತ್ರಸ್ತ ನಟಿ ಮೌನ ಮುರಿದಿದ್ದಾರೆ. 
ನಾನು ಯಾರ ವಿರುದ್ಧವೂ ವೈಯಕ್ತಿಕವಾಗಿ ದೂರು ನೀಡಿರಲಿಲ್ಲ. ಆದರೆ, ದಿಲೀಪ್ ಅವರ ಬಂಧನ ನನ್ನಲ್ಲಿ ಆಶ್ಚರ್ಯವನ್ನು ಮೂಡಿಸಿದೆ ಎಂದು ಹೇಳಿದ್ದಾರೆ. 
ಸುಖಾಸುಮ್ಮನೆ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ದಿಲೀಪ್ ಹೇಳುತ್ತಿದ್ದಾರೆ. ಸತ್ಯಾಂಶ ಬಹಿರಂಗಗೊಳ್ಳಬೇಕಿದೆ. ಒಂದು ವೇಳೆ ದಿಲೀಪ್ ಮುಗ್ದರೇ ಆಗಿದ್ದರೆ, ಪ್ರಕರಣದಿಂದ ಹೊರಬರುತ್ತಾರೆ. ಇಲ್ಲದೇ ಹೋದರೂ ಕಾನೂನಿಗೆ ಎಲ್ಲರೂ ಸಮಾನರಾಗಿದ್ದು ತಲೆಬಾಗಲೇಬೇಕಿದೆ. ನಾನು ಮತ್ತು ದಿಲೀಪ್ ಹಲವು ಚಿತ್ರಗಳಲ್ಲಿ ನಟಿಸಿದ್ದೆವು. ವೈಯಕ್ತಿಕ ವೈಮಸ್ಯಗಳಿಂದ ನಾವಿಬ್ಬರೂ ದೂರವಾಗಿದ್ದೇವೆ. ಆದರೆ, ನಾನು ಯಾರನ್ನೂ ಉಲ್ಲೇಖಿಸಿ ದೂರಿರಲಿಲ್ಲ. ಹಾಗಿದ್ದರೂ ಸತ್ಯ ಹೊರ ಬರಲೇಬೇಕಿದೆ.
ಮಾಧ್ಯಮಗಳಲ್ಲಿ ಬಂದ ಕೆಲ ವರದಿಗಳನ್ನು ನೋಡಿದ್ದೆ, ನನ್ನ ಹಾಗೂ ದಿಲೀಪ್ ನಡುವೆ ರಿಯಲ್ ಎಸ್ಟೇಟ್ ಒಪ್ಪಂದಗಳಿದ್ದವು ಎಂದು ಹೇಳಲಾಗುತ್ತಿದೆ. ಆದರೆ, ನನ್ನ ಹಾಗೂ ದಿಲೀಪ್ ನಡುವೆ ಅಂತಹ ಯಾವುದೇ ಒಪ್ಪಂದಗಳಿರಲಿಲ್ಲ. ಇಷ್ಟೆಲ್ಲಾ ಆದರೂ ನಾನು ಯಾರೊಬ್ಬರ ಮೇಲೂ ಏನನ್ನೂ ಹೇಳಿರಲಿಲ್ಲ. ಆದರೆ, ಕೆಲ ವರದಿಗಳಿಂದಾಗಿ ನಾನು ಸ್ಫಷ್ಟಪಡಿಸುತ್ತಿದ್ದೇನೆ. ನಾನು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ಟ್ವಿಟರ್ ಗಳನ್ನು ಬಳಕೆ ಮಾಡುತ್ತಿಲ್ಲ. ನನ್ನ ಹೆಸರಿನಲ್ಲಿ ಖಾತೆಗಳಾವುದಾದರೂ ಇದ್ದರೆ, ಅದು ನನ್ನದಲ್ಲ ಎಂದು ನಟಿ ಸ್ಪಷ್ಟಪಡಿಸಿದ್ದಾರೆ. 
ಪ್ರಕರಣ ಸಂಬಂಧ ಮುಗ್ಧರಿಗೆ ಶಿಕ್ಷೆಯಾಗದರಲಿ, ತಪ್ಪಿತಸ್ಥರಿಗೆ ಮಾತ್ರ ಶಿಕ್ಷೆಯಾಗಲಿ ಎಂದು ನಾನು ಕೇಳಿಕೊಳ್ಳುತ್ತೇನೆಂದು ತಿಳಿಸಿದ್ದಾರೆ. 
SCROLL FOR NEXT