ಬೆಂಗಳೂರು: ಜನಪ್ರಿಯ ನಟ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ಅವರ ಚೊಚ್ಚಲ ಚಿತ್ರ 'ಸಾಹೇಬ' ಇನ್ನೇನು ಬಿಡುಗಡೆಯಾಗಬೇಕಿದ್ದು, ನಟನ ದ್ವಿತೀಯ ಪುತ್ರ ವಿಕ್ರಂ ರವಿಚಂದ್ರನ್ ಕೂಡ ಈಗ ಪಾದಾರ್ಪಣೆ ಮಾಡಲು ಸಿದ್ಧರಾಗುತ್ತಿದ್ದಾರೆ.
ಈ ನಟನ ಲಾಂಚ್ ಬಗ್ಗೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು, ಹಲವು ನಿರ್ದೇಶಕರನ್ನು ಪರಿಗಣಿಸಲಾಗಿತ್ತಂತೆ. ಈಗ ಮೂಲಗಳು ತಿಳಿಸಿರುವ ಪ್ರಕಾರ ನಾಗಶೇಖರ್, ವಿಕ್ರಂ ಅವರ ಚೊಚ್ಚಲ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇದನ್ನು ಆರ್ ಎಸ್ ಪ್ರೊಡಕ್ಷನ್ಸ್ ಅಡಿಯಲ್ಲಿ ಕನಕಪುರ ಶ್ರೀನಿವಾಸ್ ನಿರ್ಮಿಸಲಿದ್ದಾರೆ ಎನ್ನಲಾಗಿದೆ.
ವಿಕ್ರಂ ತಮ್ಮ ತಂದೆಯವರ ಸಿನೆಮಾಗಳಿಗೆ ಸಹಾಯಕನಾಗಿ ದುಡಿದಿರುವುದಲ್ಲದೆ ಸಣ್ಣ ಪುಟ್ಟ ಪಾತ್ರಗಳನ್ನೂ ಕೂಡ ನಿರ್ವಹಿಸಿದ್ದಾರೆ. ಮನೋರಂಜನ್ ಅವರ 'ಸಾಹೇಬ' ಸೆಟ್ ನಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದ ವಿಕ್ರಂ, ಸಹೋದರನ ಸಿನೆಮಾ ಸ್ಕ್ರಿಪ್ಟ್ ಗಳನ್ನು ಕೂಡ ಓದಿ, ಹಲವು ಬದಲಾವಣೆಗಳನ್ನು ಸೂಚಿಸಿದ್ದರಂತೆ. ಈಗ ನಾಗಶೇಖರ್ ಅವರ ಸಿನೆಮಾದಲ್ಲಿ ಸಂಪೂರ್ಣ ಪ್ರಮಾಣದ ಹೀರೊ ಆಗಿ ಹೊರಹೊಮ್ಮಲು ಸಿದ್ಧರಾಗಿದ್ದಾರೆ.
ಮೂಲಗಳು ತಿಳಿಸುವಂತೆ "ಆರ್ ಎಸ್ ಪ್ರೊಡಕ್ಷನ್ಸ್ ಮತ್ತು ನಾಗಶೇಖರ್ ನಡುವೆ ಮುಂಚೆಯೇ ಒಂದು ಒಪ್ಪಂದವಾಗಿತ್ತು. ಚಲನಚಿತ್ರವೊಂದನ್ನು ನಿರ್ದೇಶಿಸಲು ನಿರ್ಮಾಣಸಂಸ್ಥೆ ನಾಗಶೇಖರ್ ಅವರಿಗೆ ಮುಂಗಡ ನೀಡಿತ್ತು. ಈಗ ರವಿಚಂದ್ರನ್ ಮತ್ತು ವಿಕ್ರಂ ನಾಗಶೇಖರ್ ಅವರ ಹೊಸ ಸ್ಕ್ರಿಪ್ಟ್ ಅನ್ನು ಇಷ್ಟಪಟ್ಟಿದ್ದು, ಹಲವು ಸುತ್ತಿನ ಮಾತುಕತೆಗಳ ನಂತರ ಹಸಿರು ನಿಶಾನೆ ಸಿಕ್ಕಿದೆ" ಎನ್ನುತ್ತವೆ.
ಆಸಕ್ತಿದಾಯಕ ಮಾಹಿತಿಯಲ್ಲಿ ಈ ಸಿನೆಮಾ ದ್ವಿಭಾಷಾ ಚಿತ್ರವಾಗಿರಲಿದ್ದು ಕನ್ನಡ ಮತ್ತು ತಮಿಳಿನಲ್ಲಿ ಮೂಡಿಬರಲಿದೆ. ಎಲ್ಲವು ಸುಸೂತ್ರವಾಗಿ ನಡೆದರೆ, ಆಷಾಢ ಕಳೆದ ನಂತರ ಆಗಸ್ಟ್ ಮೊದಲ ವಾರದಲ್ಲಿ ಸಿನೆಮಾಗೆ ಚಾಲನೆ ಸಿಗಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos