'ಮುತ್ತಿನ ಹಾರ' ಸಿನೆಮಾದಲ್ಲಿ ನಟ ಪೃಥ್ವಿ
ಬೆಂಗಳೂರು: ಪ್ರೀತಮ್ ಗುಬ್ಬಿ ಅವರ 'ನಾನು ಮತ್ತು ವರಲಕ್ಷ್ಮಿ' ಸಿನೆಮಾದ ಮೂಲಕ ನಟನೆಯ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದ ನಟ ಪೃಥ್ವಿ ಕುಮಾರ್ ಈಗ ಅವರ ಎರಡನೇ ಸಿನೆಮಾ 'ಮುತ್ತಿನ ಹಾರ'ದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ನೋಟವನ್ನು ಪಾತ್ರದ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಂಡಿರುವುದು ವಿಶೇಷ.
ರಿಷಿ ರಾಮಯ್ಯ ಅವರ ಚೊಚ್ಚಲ ಚಿತ್ರವಾದ 'ಮುತ್ತಿನ ಹಾರ' ಸುಮಾರು ೪೦% ಚಿತ್ರೀಕರಣ ಮುಗಿಸಿದೆ.
ನಟ ಪೃಥ್ವಿ ಒಂದೂವರೆ ತಿಂಗಳ ವಿರಾಮ ತೆಗೆದುಕೊಂಡು ಅಮೆರಿಕಾಗೆ ವ್ಯಾವಹಾರಿಕ ಪ್ರವಾಸಕ್ಕಾಗಿ ತೆರಳಿದ್ದರು. ಈ ಸಮಯವನ್ನು ಅವರು ಗಡ್ಡ ಬೆಳೆಸುವುದಕ್ಕೆ ಮತ್ತು ೧೦ ಕೆಜಿ ತೂಕ ಕಳೆದುಕೊಳ್ಳುವುದಕ್ಕೆ ವಿನಿಯೋಗಿಸಿದರಂತೆ.
ಈ ಪಾತ್ರವನ್ನು ಅಭಿನಯಿಸಲು ಪೃಥ್ವಿಯವರಿಗೆ ಈ ನೋಟದ ಅವಶ್ಯಕತೆ ಇತ್ತು ಎನ್ನುವ ನಿರ್ದೇಶಕ "ಪೃಥ್ವಿ ಅವರ ಪಾತ್ರದಲ್ಲಿ ಎರಡು ಬದಲಾವಣೆಗಳು ಇರಲಿವೆ. ಈಗ ಅವರ ಹೊಸ ನೋಟ ನಮ್ಮ ಪಾತ್ರಕ್ಕೆ ಸರಿಯಾಗಿ ಹೊಂದುತ್ತಿದ್ದು, ಮುಂದಿನ ಹಂತದ ಚಿತ್ರೀಕರಣ ಜುಲೈ ೧೦ ರಿಂದ ಪ್ರಾರಂಭವಾಗಲಿದೆ" ಎನ್ನುತ್ತಾರೆ.
ಇದು ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ೧೯೯೦ರ ಪ್ರಖ್ಯಾತ ಸಿನೆಮಾ ಮುತ್ತಿನ ಹಾರ ಶೀರ್ಷಿಕೆಯನ್ನೇ ಹೊತ್ತಿರುವುದು ವಿಶೇಷ. ಆ ಸಿನೆಮಾದಲ್ಲಿ ವಿಷ್ಣುವರ್ಧನ್ ಮತ್ತು ಸುಹಾಸಿನಿ ನಟಿಸಿದ್ದರು. ಈ ಸಿನೆಮಾದಲ್ಲಿ ವಿಷ್ಣು, ಪೃಥ್ವಿ ಪಾತ್ರದ ತಂದೆಯಾಗಿ ಮೂಡಲಿದ್ದಾರಂತೆ ಮತ್ತು ಪೃಥ್ವಿ ಅವರ ಪಾತ್ರದ ಹೆಸರು ವಿರಾಜ್ ಎಂತಿದ್ದು, ಹಳೆಯ ಮುತ್ತಿನ ಹಾರ ಸಿನೆಮಾದಲ್ಲಿ ವಿಷ್ಣು-ಸುಹಾಸಿನಿ ಜೋಡಿಯ ಪುತ್ರನ ಹೆಸರೂ ಕೂಡ ವಿರಾಜ್ ಆಗಿತ್ತು. ಇಲ್ಲಿಯೂ ಪೃಥ್ವಿ ತಾಯಿಯ ಪಾತ್ರಕ್ಕೆ ಸುಹಾಸಿನಿ ಅವರನ್ನು ಕೇಳಿಕೊಳ್ಳಲಾಗಿತ್ತಾದರೂ, ದಿನಾಂಕಗಳ ಹೊಂದಾಣಿಕೆಯಾಗಲಿಲ್ಲ ಎನ್ನುತ್ತಾರೆ ನಿರ್ದೇಶಕ. ಹಳೆಯ ಮುತ್ತಿನ ಹಾರ ಕಥೆಗೂ ನಮ್ಮ ಸಿನೆಮಾಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ರಿಷಿ "ಇದು ಥ್ರಿಲ್ಲರ್ ಸಿನೆಮಾ" ಎನ್ನುತ್ತಾರೆ.
ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದು, ಆಕಾಂಕ್ಷ ಪೂಜಾರಿ ನಾಯಕನಟಿ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos