ಕಡ್ಡಿಪುಡಿ ಚಂದ್ರು-ಶಿವರಾಜ್ ಕುಮಾರ್-ನಾಗತಿಹಳ್ಳಿ ಚಂದ್ರಶೇಖರ್
ಬೆಂಗಳೂರು: ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಟ ಶಿವರಾಜ್ ಕುಮಾರ್ ಅವರ ಚಿತ್ರವನ್ನು ನಿರ್ದೇಶಿಸುವ ಸುಳಿವನ್ನು ಈ ಹಿಂದೆ ಒಂದು ಸಂದರ್ಶನದಲ್ಲಿ ಬಿಟ್ಟುಕೊಟ್ಟಿದ್ದರು. ಈಗ ಆ ಯೋಜನೆಗೆ ಹಸಿರುನಿಶಾನೆ ಸಿಕ್ಕಿದ್ದು, ಕಡ್ಡಿಪುಡಿ ಚಂದ್ರು ಇದನ್ನು ನಿರ್ಮಿಸಲಿದ್ದಾರೆ. ಈ ನಿಟ್ಟಿನಲ್ಲಿ ಇವರಿಬ್ಬರು ನಟನ ಗೃಹಕ್ಕೆ ಭೇಟಿ ನೀಡಿ ಚರ್ಚಿಸಿದ್ದಾರೆ.
ನನ್ನ ಕೆಲಸವೇ ಮಾತನಾಡಬೇಕು ಎಂದು ನಂಬಿರುವ ನಾಗತಿಹಳ್ಳಿ ಈ ಯೋಜನೆಯ ಬಗ್ಗೆ ಯಾವುದೇ ವಿವರಗಳನ್ನು ನೀಡಲು ನಿರಾಕರಿಸುತ್ತಾರೆ. ಆದರೆ ಮೂಲಗಳ ಪ್ರಕಾರ ನಿರ್ದೇಶಕರೇ ಬರೆದಿರುವ ಸ್ಕ್ರಿಪ್ಟ್ ಓದಿ ಅತೀವ ಸಂತಸಗೊಂಡಿರುವ ಶಿವಣ್ಣ, ಇತ್ತೀಚಿನ ದಿನಗಳಲ್ಲಿ ಕೇಳಿದ ಅತ್ಯುತ್ತಮ ಕಥೆ ಎಂದು ತಿಳಿಸಿದ್ದಾರಂತೆ. ಈ ಸಿನೆಮಾ ಅಕ್ಟೊಬರ್ ನಲ್ಲಿ ಚಿತ್ರೀಕರಣ ಪ್ರಾರಂಭಿಸುವ ಸಾಧ್ಯತೆಯಿದೆ.
ನಾಗತಿಹಳ್ಳಿಯವರ ಈ ಮಹತ್ವಾಕಾಂಕ್ಷೆಯ ಸಿನೆಮಾದಲ್ಲಿ ಶಿವಣ್ಣ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಮತ್ತೊಂದು ಆಸಕ್ತಿದಾಯಕ ಸುದ್ದಿಯಲ್ಲಿ ಪ್ರಮುಖ ಪಾತ್ರವೊಂದಕ್ಕೆ ನಿರ್ದೇಶಕ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರನ್ನು ಕೇಳಿಕೊಂಡಿದ್ದಾರೆ. ಈ ಹಿಂದೆ ನಾಗತಿಹಳ್ಳಿಯವರ 'ಅಮೃತಧಾರೆ' ಸಿನೆಮಾದಲ್ಲಿ ಅಮಿತಾಬ್ ನಟಿಸಿದ್ದರು. ಬಹುತಾರಾಗಣವುಳ್ಳ ಈ ಸಿನೆಮಾ "ಇಂದಿನ ದಿನಕ್ಕೆ ಅನ್ವಯವಾಗುವ ಕಾರ್ಪೊರೇಟ್ ಜೀವನ, ನೋಟು ಹಿಂಪಡೆತ ನಿರ್ಧಾರ, ಜಿ ಎಸ್ ಟಿ ಎಲ್ಲವನ್ನು ಚರ್ಚಿಸುತ್ತದೆ" ಎನ್ನುತ್ತವೆ ಮೂಲಗಳು.
ಈಮಧ್ಯೆ ಶಿವಣ್ಣ 'ಲೀಡರ್' ಸಿನೆಮಾದ ಚಿತ್ರೀಕರಣ ಮುಗಿಸಿದ್ದು ಸಮಾನಾಂತರವಾಗಿ ಸೂರಿ ಅವರ 'ಟಗರು' ಮತ್ತು ಪ್ರೇಮ್ ನಿರ್ದೇಶನ 'ದ ವಿಲನ್' ಸಿನೆಮಾಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos