ಸಿನಿಮಾ ಸುದ್ದಿ

ರೊಮ್-ಕಾಮ್ ಬದಲಿಗೆ ಮಾಸ್ ಸಿನೆಮಾ ಆಯ್ಕೆ ಮಾಡಿಕೊಂಡ ರಕ್ಷಿತ್

Guruprasad Narayana
ಬೆಂಗಳೂರು: 'ಕಿರಿಕ್ ಪಾರ್ಟಿ'ಯ ಅಭೂತಪೂರ್ವ ವಾಣಿಜ್ಯ ಯಶಸ್ಸಿನ ನಂತರ ಮುಂದಿನ ಸೂಪರ್ ಸ್ಟಾರ್ ಎಂದೇ ಬಣ್ಣಿಸಲಾಗುತ್ತಿರುವ ನಟ ರಕ್ಷಿತ್ ಶೆಟ್ಟಿ ಅವರ ಕಲ್ಪನೆಗೆ ರೆಕ್ಕೆ ಸಿಕ್ಕಂತಾಗಿದೆ. ಅವರ ಮುಂದಿನ ಯೋಜನೆಯ ಬಗ್ಗೆ ನಿರೀಕ್ಷೆಗಳು ಹೆಚ್ಚಿವೆ. 
ಇದೆ ಕಾರಣಕ್ಕಾಗಿ ರಕ್ಷಿತ್ ಅವರು ರೊಮ್-ಕಾಮ್ ಸಿನೆಮಾವನ್ನು ಕೈಬಿಟ್ಟು ತಮ್ಮ ಮುಂದಿನ ಸಿನೆಮಾವಾಗಿ ಸಚಿನ್ ನಿರ್ದೇಶನದ ಮಾಸ್ ಸಿನೆಮಾ 'ಅವನೇ ಶ್ರೀಮನ್ನಾರಾಯಣ' ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. 
ರಕ್ಷಿತ್ ಶೆಟ್ಟಿ ಅವರೇ ಕಥೆ ಬರೆದಿರುವ ಈ ಸಿನೆಮಾ ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ. ಇದರ ಬಜೆಟ್ ಬರೋಬರಿ ೧೫ ಕೋಟಿ ಎನ್ನಲಾಗಿದ್ದು ಇದಕ್ಕಾಗಿ ಮೂವರು ನಿರ್ಮಾಪಕರು ಒಟ್ಟಾಗಲಿದ್ದಾರೆ ಎನ್ನುತ್ತಾರೆ ಪುಷ್ಕರ್ ಫಿಲಂಸ್ ನ ಒಡೆಯ ಪುಷ್ಕರ್ ಮಲ್ಲಿಕಾರ್ಜುನಯ್ಯ.
"ಸಚಿನ್ ಅವರ ಈ ಚೊಚ್ಚಲ ಚಿತ್ರದ ೫೦% ಶೇರುಗಳನ್ನು ನಿರ್ಮಾಪಕ ಎಚ್ ಕೆ ಪ್ರಕಾಶ್ ಮತ್ತು ಇನ್ನುಳಿದದ್ದನ್ನು ರಕ್ಷಿತ್ ಅವರ ಪರಂವಾಹ್ ಸ್ಟುಡಿಯೋ ಮತ್ತು ನನ್ನ ನಿರ್ಮಾಣ ಸಂಸ್ಥೆ ಹೊಂದಿರಲಿದೆ" ಎಂದು ಅವರು ವಿವರಿಸುತ್ತಾರೆ. 
ಮೇ ಮಧ್ಯಭಾಗದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಡಿಸೆಂಬರ್ ಅಂತ್ಯಕ್ಕೆ ಸಿನೆಮಾ ಬಿಡುಗಡೆ ಮಾಡುವ ಇರಾದೆ ಹೊಂದಿದೆ ಚಿತ್ರತಂಡ. ಶಾನ್ವಿ ಚಿತ್ರದ ನಾಯಕನಟಿಯಾಗಿದ್ದು ಅಚ್ಯುತ್ ಕುಮಾರ್ ಕೂಡ ಆಸಕ್ತಿದಾಯಕ ಪಾತ್ರದಲ್ಲಿ ನಟಿಸುತ್ತಿರುವ ವಿಷಯ ತಿಳಿಸುತ್ತಾರೆ ಪುಷ್ಕರ್. ಚರಣ್ ರಾಜ್ ಸಂಗೀತ ನೀಡುತ್ತಿದ್ದು, ಮನೋಹರ್ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ. 
SCROLL FOR NEXT