ಬೆಂಗಳೂರು: ಹರಿಪ್ರಸಾದ್ ಜಯಣ್ಣ ಅವರ ಚೊಚ್ಚಲ ನಿರ್ದೇಶನದ ಚಿತ್ರ' ಪ್ರೇಮದಲ್ಲಿ' ಚಿತ್ರೀಕರಣ ಸುಗಮವಾಗಿ ಸಾಗುತ್ತಿದೆ. ಮಾರ್ಚ್ ೨೦ ರಿಂದ ಮೂರನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಿದೆ. ಮಂಗಳೂರಿನಲ್ಲಿ ಇತ್ತೀಚೆಗಷ್ಟೇ ಕೆಲವು ದೃಶ್ಯಗಳು ಮತ್ತು ಒಂದು ಹಾಡನ್ನು ಚಿತ್ರೀಕರಿಸಿದ ನಿರ್ದೇಶಕ ಕರಾವಳಿಯ ವಿಶಿಷ್ಟ ಪ್ರದೇಶಗಳನ್ನು ಶೋಧಿಸಿ ಚಿತ್ರೀಕರಣ ನಡೆಸಿದ್ದು ವಿಶೇಷ.
ನಟರಾದ ವಿಹಾನ್ ಗೌಡ, ಅನುಷ್ಕಾ ರಂಗನಾಥ್, ಅಕ್ಷರ ಗೌಡ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಸ್ಟಿಲ್ ಗಳು ಈಗ ಲಭ್ಯವಾಗಿವೆ.
"ಹಿಂದಿನ ಹಂತದಲ್ಲಿ ಈ ಮೂವರು ಭಾಗಿಯಾಗಿರುವ ಸುಶ್ರಾವ್ಯ ರೋಮ್ಯಾಂಟಿಕ್ ಹಾಡೊಂದನ್ನು ಚಿತ್ರೀಕರಿಸಲಾಯಿತು" ಎನ್ನುವ ಹರಿಪ್ರಸಾದ್ "ನಾವು ಪಡುಬಿದರಿ ಬೀಚಿನಲ್ಲಿ ಚಿತ್ರೀಕರಣ ನಡೆಸಿದೆವು ಮತ್ತು ಇದೆ ಮೊದಲ ಬಾರಿ ಫಲ್ಗುಣಿ ತೂಗು ಸೇತುವೆ ಮೇಲೆ ಕನ್ನಡ ಚಿತ್ರವೊಂದರ ಚಿತ್ರೀಕರಣ ಆಗುತ್ತಿರುವುದು. ಈ ಹಿಂದೆ ಹೆಚ್ಚು ಕಂಡಿಲ್ಲದ ಮಂಗಳೂರು ಢಕ್ಕೆ, ಅತಿ ಜನಪ್ರಿಯ ಮೀನು ಮಾರುಕಟ್ಟೆ ಇವುಗಳಲ್ಲೆಲ್ಲಾ ನಾವು ಚಿತ್ರೀಕರಣ ನಡೆಸಿದ್ದೇವೆ. ಸಿನೆಮಾದ ಇನ್ನುಳಿದ ಭಾಗ ಬೆಂಗಳೂರಿನಲ್ಲಿ ಚಿತ್ರೀಕರಣಗೊಳ್ಳಲಿದೆ" ಎನ್ನುತ್ತಾರೆ.
ನಿರ್ದೇಶಕ ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿ, ಎಂಜಿನಿಯರಿಂಗ್ ವೃತ್ತಿ ತೊರೆದು ನ್ಯೂಯಾರ್ಕ್ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಅಧ್ಯಯನ ಮುಗಿಸಿ ಬಂದಿರುವ ಹರಿಪ್ರಸಾದ್ ಅವರಿಗೆ 'ಪ್ರೇಮದಲ್ಲಿ' ಮೊದಲ ಸ್ವತಂತ್ರ ಚಿತ್ರವಾಗಿದೆ.
ಚೇತನ್ ಸಂಗೀತ ನೀಡಿದ್ದು, ಸಂತೋಷ್ ರಾಯ್ ಪಾತಾಜೆ ಅವರ ಸಿನೆಮ್ಯಾಟೋಗ್ರಫಿ ಇದೆ.