ಬೆಂಗಳೂರು: ವೀಕೆಂಡ್ ಹಾಗೂ ರಜೆ ದಿನಗಳು, ಸಮಯ ಹೀಗೆ ನಾನಾ ರೀತಿಯ ಕಾರಣಗಳನ್ನು ನೀಡಿ ಸಿನಿಮಾಮಗಳ ಟಿಕೆಟ್'ಗಳ ದರಗಳನ್ನು ಏಕಾಏಕಿ ದುಪ್ಪಟ್ಟು ಮಾಡಿ ಏರಿಕೆ ಮಾಡುತ್ತಿದ್ದ ಮಲ್ಟಿಪ್ಲೆಕ್ಸ್ ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ದೊಡ್ಡ ಶಾಕ್'ನ್ನೇ ನೀಡಿದೆ.
ವೀಕೆಂಟ್ ಮತ್ತು ರಜೆ ಗಳಲ್ಲಿ ಪರಭಾಷಾ ಸಿನಿಮಾಗಳ ಟಿಕೆಟ್ ದರ ಪೂ, 600ರವೆಗೂ ತಲುಪಿ ಕನ್ನಡ ಸಿನಿಮಾಗಳಿಗೂ ರೂ. 300 ವರೆಗೂ ಹಣವನ್ನು ನೀಡಬೇಕಿತ್ತು. ಮಾರ್ಚ್ 16 ರಂದು ಮಂಡಿಸಲಾದ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಡಿವಾಣ ಹಾಕಿದ್ದಾರೆ.
ದುಬಾರಿಯಾಗಿದ್ದ ಮಲ್ಟಿಪ್ಲೆಕ್ಸ್'ಗಳಲ್ಲಿ ಯಾವುದೇ ಭಾಷೆಯ ಟಿಕೆಟ್ ದರ ರೂ.200 ಮೀರದಂತೆ ತಡೆಯೊಡ್ಡಲಾಗಿದೆ. ಸಿದ್ದರಾಮಯ್ಯ ಅವರ ಈ ನಿರ್ಧಾರದಿಂದ ಇದೂವರೆಗೂ ಒಬ್ಬರು ನೋಡುತ್ತಿದ್ದ ಟಿಕೆಟ್ ದರದಲ್ಲಿ ಇದೀಗ ಇಬ್ಬರು ಸಿನಿಮಾವನ್ನು ನೋಡಬಹುದಾಗಿದೆ. ಇದರಿಂದ ಪ್ರೇಕ್ಷಕರ ಸಂಖ್ಯೆ ಕೂಡ ಹೆಚ್ಚಾಗಲಿದ್ದು, ಚಿತ್ರರಂಗಕ್ಕೆ ಹೆಚ್ಚು ಲಾಭ ಆಗಲಿದೆ ಎಂಬ ಅಭಿಪ್ರಾಯಗಳು ಚಿತ್ರರಂಗದಿಂದ ವ್ಯಕ್ತವಾಗತೊಡಗಿವೆ. ಇದಲ್ಲದೆ ಪ್ರೇಕ್ಷಕ ವರ್ಗದಿಂದಲೂ ಸರ್ಕಾರದ ನಿರ್ಧಾರಕ್ಕೆ ಮೆಚ್ಚುಗೆಗಳು ವ್ಯಕ್ತವಾಗತೊಡಗಿದೆ.
ಸರ್ಕಾರದ ನಿರ್ಧಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರು, ಸರ್ಕಾರ ಘೋಷಣೆಯಿಂದ ನಮಗೆ ಸಂತೋಷವಾಗಿದೆ. ನಮ್ಮ ಹಿತಾಸಕ್ತಿಯನ್ನು ಮುಖ್ಯಮಂತ್ರಿಗಳು ಅರ್ಥಮಾಡಿಕೊಂಡು ನಿರ್ಧಾರ ಕೈಗೊಂಡಿರುವುದು ಸಂತಸ ತಂದಿದೆ. ಸರ್ಕಾರದ ಈ ನಿರ್ಧಾರವನ್ನು ಕನ್ನಡ ಚಿತ್ರರಂಗ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ಗಳ ದರವನ್ನು ಇಳಿಕೆ ಮಾಡುವಂತೆ ರಾಜೇಂದ್ರ ಬಾಬು ಆವರು ಆಗ್ರಹಿಸಿದ್ದರು, ಮಲ್ಟಿಪ್ಲೆಕ್ಸ್ ಟಿಕೆಟ್ ಗಳ ದರವನ್ನು ರೂ. 120ಕ್ಕೆ ಇಳಿಸುವಂತೆ ಆಗ್ರಹಿಸಿದ್ದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಅವರು ಮಾತನಾಡಿ, ಪ್ರೈಮ್ ಟೈಮ್ ನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ಕಡ್ಡಾಯ ಮಾಡಿರುವುದು ಹಾಗೂ ಟಿಕೆಟ್ ಗಳ ದರ ಕಡಿತ ಮಾಡಿರುವುದು ನಿಜಕ್ಕೂ ಸಂಸತವನ್ನು ತಂದಿದೆ ಎಂದು ಹೇಳಿದ್ದಾರೆ.
ಹಿರಿಯ ನಟ ಹಾಗೂ ನಿರ್ಮಾಪಕ ದ್ವಾರಕೀಶ್ ಪ್ರತಿಕ್ರಿಯೆ ನೀಡಿದ್ದು, ದೊಡ್ಡ ಬ್ಯಾನರ್ ಗಳ ಚಿತ್ರ ಬಂದಾಗ ಪ್ರೇಕ್ಷಕರು ದೊಡ್ಡ ಮೊತ್ತ ಹಣವನ್ನು ಕೊಟ್ಟು ಸಿನಿಮಾ ನೋಡುವಂತರ ಪರಿಸ್ಥಿತಿ ಎದುರಾಗುತ್ತಿತ್ತು. ಸರ್ಕಾರ ಉತ್ತಮವಾದ ನಿರ್ಧಾರವನ್ನು ಕೈಗೊಂಡಿದೆ. ಆದರೆ, ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಸ್ಕ್ರೀನ್ ನಡುವೆ ವ್ಯತ್ಯಾಸಗಳಿದ್ದು, ಎರಡರಲ್ಲೂ ಟಿಕೆಟ್ ಕಡಿತಗೊಳಿಸಬೇಕೆಂದು ತಿಳಿಸಿದ್ದಾರೆ.
ಈಗಾಗಲೇ ಮಲ್ಟಿಪ್ಲೆಕ್ಸ್ ಟಿಕೆಟ್ ಗಳ ದರವನ್ನು ಸರ್ಕಾರ ರೂ.200ಕ್ಕೆ ಇಳಿಸಿದೆ. ಥಿಯೇಟರ್ (ಚಿತ್ರಮಂದಿರ) ಟಿಕೆಟ್ ಗಳ ದರವನ್ನು ರೂ.100ಕ್ಕೆ ಇಳಿಕೆ ಮಾಡಬೇಕಿದೆ. ಒಂದು ವೇಳೆ ಪ್ರಸ್ತುತ ಇರುವ ಟಿಕೆಟ್ ಗಳ ದರವನ್ನೇ ಮುಂದುವರೆಸಿಕೊಂಡು ಹೋಗಿದ್ದೇ ಆದರೆ, ಚಿತ್ರಮಂದಿರಕ್ಕೆ ಹರಿದು ಬರುವ ಹಣ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಮಲ್ಟಿಪ್ಲೆಕ್ಸ್ ಗಳ ಮಾಲೀಕರು ಸರ್ಕಾರದ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನಿರ್ಧಾರದಿಂದ ಮಲ್ಟಿಪ್ಲೆಕ್ಸ್ ಗಳ ಆದಾಯದ ಮೇಲೆ ಹೊಡೆತ ಬೀಳಲಿದೆ ಎಂಬ ಭಯ ಮಾಲೀಕರ ಮೇಲೆ ಉಂಟಾಗಿದ್ದು, ಸರ್ಕಾರದ ನಿರ್ಧಾರದ ಕುರಿತಂತೆ ಪ್ರತಿಕ್ರಿಯೆ ನೀಡಲು ಮಲ್ಟಿಪ್ಲೆಕ್ಸ್ ಗಳ ಮಾಲೀಕರು ನಿರಾಕರಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos