ಬೆಂಗಳೂರು: ರಿಂಕು ರಾಜಗುರು ತಮ್ಮ ಸಣ್ಣ ವಯಸ್ಸಿನಲ್ಲೆಯೇ ಮಾಡಿದ ಮೊದಲ ಚಲನಚಿತ್ರದಲ್ಲೇ ಪ್ರಖ್ಯಾತರಾದವರು. ನಾಗರಾಜ್ ಮಂಜುಳೆ ನಿರ್ದೇಶನದ ಮರಾಠಿ ಚಿತ್ರ 'ಸೈರಾಟ್' ಕಳೆದ ವರ್ಷ ಮರಾಠಿಯ ಬ್ಲಾಕ್ ಬಸ್ಟರ್ ಚಿತ್ರ ಎಂದೇ ಪರಿಗಣಿಸಲಾಗಿತ್ತು.
'ಸೈರಾಟ್'ನಲ್ಲಿ ರಿಂಕು ಅವರ ನಟನೆಗೆ ಮನಸೋಲದವರಿಲ್ಲ. ಇದರಿಂದ ಕನ್ನಡದ ರಿಮೇಕ್ ಗೆ ಕೂಡ ಇಲ್ಲಿನ ಚಿತ್ರತಂಡ ಅವರನ್ನೇ ಆಯ್ಕೆ ಮಾಡಿತ್ತು. ಈಗಷ್ಟೇ ೧೦ ನೇ ತರಗತಿ ಪರೀಕ್ಷೆ ಬರೆದಿರುವ ರಿಂಕಿ ಮಾರ್ಚ್ ೨೭ ರಂದು ಪರೀಕ್ಷೆಗಳನ್ನು ಮುಗಿಸಿ ಬೆಂಗಳೂರಿನಲ್ಲಿ ಕನ್ನಡ ಅವತರಿಣಿಕೆ 'ಮನಸು ಮಲ್ಲಿಗೆ' ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಇದರ ಬಗ್ಗೆ ಮಾತಿಗಿಳಿದ ರಿಂಕು "ನನಗೆ ಸಿನೆಮಾಗಳಲ್ಲಿ ನಟಿಸುವ ಯಾವುದೇ ಶೋಕಿ ಇರಲಿಲ್ಲ. ನಾನು ಶೋಲಾಪುರದ ಅಕ್ಲುಗ್ ಗ್ರಾಮದಲ್ಲಿ ವಾಸಿಸುತ್ತೇನೆ. ಮಂಜು ಅವರ ಸಿನೆಮಾಗೆ ಆಡಿಷನ್ ನಡೆಸುತ್ತಿದ್ದ ಪ್ರದೇಶಕ್ಕ ಆಕಸ್ಮಿಕವಾಗಿ ಭೇಟಿ ನೀಡಿದ್ದೆ. ಆಗ ಅವರು ನನ್ನನ್ನು ನೋಡಿ ಆಡಿಷನ್ ಕೊಡುತ್ತೀರಾ ಅಂತ ಕೇಳಿದರು. ನಾನು ಆಡಿಷನ್ ನೀಡಿದಾಗ, ನನಗೆ ೧೨ ವರ್ಷ ತುಂಬಿ ೧೩ ಕ್ಕೆ ಬೀಳುವುದರಲ್ಲಿತ್ತು. ನಾನು ತಮಾಷೆಗೆ ಹೋಗಿದ್ದೆ ಏಕೆಂದರೆ ಅವರು ೨೧ ವರ್ಷದ ಹುಡುಗಿಗೆ ಹುಡುಕಾಡುತ್ತಿದ್ದಾರೆ ಎಂದು ತಿಳಿದಿತ್ತು. ನಾನು ಆಡಿಷನ್ ನೀಡಿದ ನಂತರವೂ ಅವರು ಒಂದು ವರ್ಶ ಆಡಿಷನ್ ನಡೆಸಿದ್ದರು ಆದರೆ ಕೊನೆಗೆ ಅವರು ನನ್ನಲ್ಲಿಗೆ ಹಿಂದಿರುಗಿ ಆಯ್ಕೆ ಮಾಡಿರುವುದಾಗಿ ತಿಳಿಸಿದರು" ಎಂದು ಸಿನೆಮಾಗೆ ಆಯ್ಕೆಯಾದ ಬಗ್ಗೆ ನೆನಪಿಸಿಕೊಳ್ಳುತ್ತಾರೆ.
ಇದನ್ನು ನಿರೀಕ್ಷಿಸದ ರಿಂಕು ಅಚ್ಚರಿಗೊಂಡಿದ್ದಾಗಿ ತಿಳಿಸುತ್ತಾರೆ. ನಂತರ ತಮ್ಮ ಪೋಷಕರಿಂದ ಅನುಮತಿ ಪಡೆದು ಸಿನೆಮಾದಲ್ಲಿ ತೊಡಗಿಸಿಕೊಂಡಿದ್ದಾಗಿ ತಿಳಿಸುವ ಅವರು "ಯಾವ ನಟ ನಟಿಯರಿಂದಲೂ ನನ್ನ ನಟನೆ ಸ್ಫೂರ್ತಿ ಪಡೆದಿಲ್ಲ" ಎನ್ನುತ್ತಾರೆ. ಆದರೆ ಅಮಿತಾಬ್ ಬಚ್ಚನ್, ನಾನಾ ಪಾಟೇಕರ್, ರೇಖಾ, ಹೇಮಮಾಲಿನಿ, ಶ್ರೀದೇವಿ, ಮಾಧುರಿ ಮತ್ತು ಸ್ಮಿತಾ ಪಾಟೀಲ್ ಸಿನೆಮಾಗಳನ್ನು ನೋಡಿ ಸಂತಸ ಪಟ್ಟಿದ್ದೇನೆ ಎನ್ನುತ್ತಾರೆ.
ಈಗ ಎಸ ನಾರಾಯಣ್ ಅವರ ರಿಮೇಕ್ ಚಿತ್ರ 'ಮನಸು ಮಲ್ಲಿಗೆ'ಯಲ್ಲಿ ನಟಿಸಿರುವ ರಿಂಕು, ನನಗೆ ಹೊರಗಿನವಳು ಎಂಬ ಭಾವನೆ ಮೂಡಲೇ ಇಲ್ಲ ಎನ್ನುತ್ತಾರೆ. "'ಸೈರಾಟ್' ನಲ್ಲಿ ಮಾಡಿದ ಪಾತ್ರವನ್ನೇ ಇಲ್ಲಿ ಕೂಡ ಮಾಡಬೇಕಾಯಿತು. ಇಲ್ಲಿ ಏನು ಬದಲಾಗಿಲ್ಲ ಆದರೆ ಸುತ್ತ ಇದ್ದ ಜನರಿಂದ ರಿಮೇಕ್ ನಲ್ಲಿ ನಟಿಸುವುದು ಸುಲಭ ಎಂದೆನಿಸಿತು" ಎನ್ನುವ ಅವರು ತಮಿಳು ಮತ್ತು ತೆಲುಗು ರಿಮೇಕ್ ಗಳಲ್ಲಿ ನಟನೆಗೆ ಅವಕಾಶ ಇದೆಯೋ ಇಲ್ಲವೋ ತಿಳಿದಿಲ್ಲ ಎನ್ನುತ್ತಾರೆ. "ಆ ರಿಮೇಕ್ ಚಿತ್ರಗಳಲ್ಲಿ ನಟಿಸುವ ಅವಕಾಶ ಬಂದರೆ ಆಗ ಚಿಂತಿಸಿ ನಿಶ್ಚಯಿಸುತ್ತೇನೆ" ಎನ್ನುತ್ತಾರೆ.
ಬಾಲಿವುಡ್ ನಲ್ಲಿ ನಟಿಸುವ ಅವಕಾಶ ಬಂದಿರುವುದಾಗಿ ತಿಳಿಸುವ ರಿಂಕು, ನನ್ನ ವೃತ್ತಿಜೀವನ ಹೇಗೆ ಮುಂದುವರೆಯಬೇಕು ಎಂದು ನಿಶ್ಚಯಿಸಿದ ಮೇಲಷ್ಟೇ ಅದರ ಬಗ್ಗೆ ಚಿಂತಿಸುತ್ತೇನೆ ಎನ್ನುವ ಅವರು "ನಾನಿನ್ನು ಬಾಲಕಿ. ಈಗ ನಟನೆಯ ರುಚಿ ಹತ್ತಿರುವುದರಿಂದ ಅದನ್ನು ವೃತ್ತಿ ಜೀವನವನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದೆನಿಸಿದೆ. ಆದರೆ ವಿದ್ಯಾಭ್ಯಾಸ ನನ್ನ ಆದ್ಯತೆ, ನನಗೆ ಕೆಲವು ಮರಾಠಿ ಸಿನೆಮಾಗಳಲ್ಲಿ ನಟಿಸುವ ಅವಕಾಶ ಕೂಡ ಬಂದಿದ್ದವು. ಆದರೆ ನನ್ನ ಪರೀಕ್ಷೆಗಳಲಿಂದ ಅವುಗಳನ್ನು ಒಪ್ಪಿಕೊಳ್ಳಲಿಲ್ಲ" ಎನ್ನುತ್ತಾರೆ.
ಕನ್ನಡದಲ್ಲಿ ಹಲವು ಮಾತುಗಳನ್ನು ಕಲಿತಿರುವ ರಿಂಕು "ಚೆನ್ನಾಗಿದ್ದೀರಾ? ಊಟ ಆಯ್ತಾ? ಕನ್ನಡದಲ್ಲಿ ಹೇಳಿದ್ರೆ ನಿಮಗೆ ಅರ್ಥ ಆಗಲ್ವಾ ಇಂಗ್ಲಿಷ್ ನಲ್ಲಿ ಹೇಳಬೇಕಾ" ಮುಂತಾದ ಪದಪುಂಜಗಳನ್ನು ಲೀಲಾಜಾಲವಾಗಿ ಉಲಿಯುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos