ಬೆಂಗಳೂರು: ನಿರ್ದೇಶಕ ಸೂರಿ ಅವರ 'ದುನಿಯಾ' ಸಿನೆಮಾದ ಮೂಲಕ ನಾಯಕನಟನಾಗಿ ಪಾದಾರ್ಪಣೆ ಮಾಡಿ ಜನಪ್ರಿಯತೆಯ ಉತುಂಗಕ್ಕೆ ಏರಿದ ವಿಜಯ್ ಅವರಿಗೆ ದಶಕದ ಸಂಭ್ರಮ. ಈ ಸಂದರ್ಭದಲ್ಲಿ ಹಲವು ಪಾತ್ರಗಳನ್ನು ಅವರು ನಿರ್ವಹಿಸಿದ್ದರೂ, ಈಗ ಬಹುತೇಕ ೧೦ ವರ್ಷಗಳ ನಂತರ ನಟಿಸಿರುವ 'ಮಾಸ್ತಿ ಗುಡಿ' ತಮ್ಮ ಜೀವನದಲ್ಲಿ ಅಂತಹುದೇ ಮಾಂತ್ರಿಕತೆ ಸೃಷ್ಟಿಸಲಿದೆ ಎಂಬ ಭರವಸೆಯಲ್ಲಿದ್ದಾರೆ. ಹುಲಿಗಳ ಬಗ್ಗೆ ಬಹಳ ಆಸಕ್ತಿ ಹೊಂದಿದ್ದ ವಿಜಯ್ ಸಿನಿಮಾದಲ್ಲಿಯೂ ಅದೇ ವಿಷಯವನ್ನು ಪ್ರಧಾನವಾಗಿಸಿಕೊಂಡಿರುವುದಕ್ಕೆ ಸಂತಸರಾಗಿದ್ದಾರೆ.
ಮೇ ೧೨ ರಂದು 'ಮಾಸ್ತಿ ಗುಡಿ' ಬಿಡುಗಡೆಯಾಗಲಿದೆ. 'ಮಾಸ್ತಿ ಗುಡಿ' ತಮ್ಮ ವೃತ್ತಿಜೀವನಕ್ಕೆ ತಿರುವು ನೀಡಲಿರುವ ಪಾತ್ರ ಎಂದಿರುವ ವಿಜಯ್, ಈ ಸಿನೆಮಾಗೆ ಸ್ಕ್ರಿಪ್ಟ್ ಕೂಡ ರಚಿಸಿದ್ದಾರೆ. "ಸಿನೆಮಾ ಇರುವದು ಮನರಂಜನೆಗಾಗಿ ಆದರೆ ಅದರ ಮೂಲಕ ಸಂದೇಶ ನೀಡಲು ಸಾಧ್ಯವಾದರೆ ಆಗ ಹೆಚ್ಚು ಅರ್ಥಪೂರ್ಣವಾಗುತ್ತದೆ. 'ಮಾಸ್ತಿ ಗುಡಿ' ಸಿನೆಮಾದಲ್ಲಿ ಹುಲಿಗಳನ್ನು ಉಳಿಸಿ ಎಂಬ ಸಂದೇಶವನ್ನು ಸಾರುತ್ತಿದ್ದೇವೆ. ಬೇಟೆಗಾರರು ಈ ಪ್ರಾಣಿಯನ್ನು ಕೊಂದು ಈಗ ಅದು ಅಳಿವಿನಿಂಚಿಗೆ ತೆರಳುತ್ತಿದೆ. ಹುಲಿಗಳು ಎದುರಿಸುತ್ತಿರುವ ಹಲವು ತೊಂದರೆಗಳನ್ನು ಈ ಕಮರ್ಷಿಯಲ್ ಸಿನೆಮಾ ಚರ್ಚಿಸಲಿದೆ" ಎನ್ನುವ ವಿಜಯ್ "ನಲ್ಲಿಯಲ್ಲಿ ಬರುವು ನೀರಿಗೂ ಮತ್ತು ಹುಲಿಗೂ ಸಂಬಂಧವಿದೆ ಎಂಬ ವೈಜ್ಞಾನಿಕ ಅಂಶವನ್ನು ನಮ್ಮ ಸಿನೆಮಾದಲ್ಲಿ ಚರ್ಚಿಸಿದ್ದೇವೆ" ಎನ್ನುತ್ತಾರೆ.
"ಮಾಸ್ತಿ ಗುಡಿ ಸಿನೆಮಾದಲ್ಲಿ ಜನ ನಾನು ೩೦ ವರ್ಷದವನಿಂದ ೮೧ ವರ್ಷದವನಾಗಿ ಬದಲಾಗುವುದನ್ನು ಕಾಣಲಿದ್ದಾರೆ. ತೆರೆಯ ಮೇಲೆ ಮುದುಕನಾಗಿ ಕಾಣಿಸಿಕೊಂಡಿರುವುದು ಅಲ್ಲಿಯವರೆಗೂ ಬದುಕಿದ್ದರೆ ನನಗೆ ೮೧ ಆದಮೇಲೆ ಹೇಗಿರಬಹುದು ಎಂಬುದರ ಕಲ್ಪನೆಗೆ ಸಹಕರಿಸಿತು" ಎನ್ನುವ ವಿಜಯ್ ಇದಕ್ಕಾಗಿ ವಿಗ್ ಧರಿಸಲಿಲ್ಲ ಎನ್ನುತ್ತಾರೆ. "ಈ ವಯಸ್ಸಿಗೆ ನನಗೆ ಬಿಳಿ ಗಡ್ಡ ಮತ್ತು ತಲೆಗೂದಲು ಬಂದಿದೆ, ಇದು ಸಿನೆಮಾಗೆ ಸಹಕರಿಸಿತು" ಎಂದು ನಗುತ್ತಾರೆ ವಿಜಯ್.
ಈ ಸಿನೆಮಾ ಚಿತ್ರೀಕರಣದ ವೇಳೆಯಲ್ಲಿ ದುರಂತ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ತಮ್ಮ ಗೆಳೆಯರಾದ ಅನಿಲ್ ಮತ್ತು ಉದಯ್ ಅವರನ್ನು ನೆನಪಿಸಿಕೊಳ್ಳುವ ವಿಜಯ್, ಅವರ ನೆನಪಿಗಾಗಿ ಈ ಸಿನೆಮಾವನ್ನು ಎಲ್ಲರೂ ನೋಡಬೇಕು ಎನ್ನುತ್ತಾರೆ.
ಸಾಧು ಕೋಕಿಲಾ ಸಿನೆಮಾಗೆ ಸಂಗೀತ ನೀಡಿದ್ದು, ಸತ್ಯ ಹೆಗಡೆ ಸಿನೆಮ್ಯಾಟೋಗ್ರಾಫರ್.