ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಶೈಲಿಯ ಅಭಿನಯ ಮತ್ತು ನಿರ್ದೇಶನದಿಂದ ಜನಪ್ರಿಯರಾದ ನಟ-ನಿರ್ದೇಶಕ ಉಪೇಂದ್ರ ತಮ್ಮ ೫೦ನೆಯ ಸಿನಿಮಾಗಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಸದ್ಯಕ್ಕೆ 'ಉಪ್ಪಿರುಪೀ' ಚಿತ್ರೀಕರಣದಲ್ಲಿ ಭಾಗಿಯಾಗಿರುವ ನಟ, ಮೇ ಮಧ್ಯ ಭಾಗದಲ್ಲಿ ಚಿತ್ರೀಕರಣಗೊಳ್ಳಲಿರುವ 'ನಾಗಾರ್ಜುನ' ಸಿನೆಮಾದಲ್ಲಿಯೂ ನಟಿಸಲಿದ್ದಾರೆ. ಆದರೆ ತಮ್ಮ ೫೦ ನೆಯ ಸಿನೆಮಾವನ್ನು ತಾವೇ ನಿರ್ದೇಶಿಸಲು ಮುಂದಾಗಿರುವ ಉಪ್ಪಿ ಈ ಬೇಸಿಗೆಯನ್ನು ಅದರ ಸ್ಕ್ರಿಪ್ಟ್ ರಚನೆಗಾಗಿ ತೊಡಗಿಸಿಕೊಂಡಿದ್ದಾರೆ.
ಉಪೇಂದ್ರ ಹುಟ್ಟುಹಬ್ಬದ ದಿನ ಚಾಲನೆ ಸಿಗಲಿರುವ ಈ ಸಿನೆಮಾದ ಕಥೆ ರಚಿಸಲು ನಟ ಏಕಾಂತದ ಮೊರೆ ಹೋಗಿದ್ದಾರಂತೆ. ಸದ್ಯಕ್ಕೆ ನಿರ್ಮಾಪಕ ಶ್ರೀರಾಮ್ ಜೊತೆಗೆ ಜನನಿಬಿಡ ಬೆಂಗಳೂರಿನಿಂದ ದೂರ ತೆರಳಿ, ಚಿಕ್ಕಮಗಳೂರಿನಲ್ಲಿ ತಾತ್ಕಾಲಿಕವಾಗಿ ನೆಲೆಯೂರಿ ಕೆಲಸ ಪ್ರಾರಂಭಿಸಿದ್ದಾರಂತೆ.
"ಉಪ್ಪಿ ಕೆಲವು ದಿನಗಳಿಂದ ಸ್ಕ್ರಿಪ್ಟ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಸದ್ಯಕ್ಕೆ ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಮತ್ತು ಸ್ವಲ್ಪ ಕಾಲದವರೆಗೆ ಬ್ಯುಸಿ ನಗರಿ ಬೆಂಗಳೂರಿನಿಂದ ದೂರ ಇರಲಿದ್ದೇವೆ.
"ಇಲ್ಲಿ ಇನ್ನೊಂದು ವಾರ ತಂಗುವ ಸಾಧ್ಯತೆ ಇದೆ. ನಂತರ ಬೆಂಗಳೂರಿಗೆ ಹಿಂದಿರುಗಿ ಉಪ್ಪಿ ನಾಗರ್ಜುನ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ" ಎನ್ನುತ್ತಾರೆ ನಿರ್ದೇಶಕ ಶ್ರೀರಾಮ್.
ಇನ್ನು ಒಂದು ವರೆ ತಿಂಗಳಲ್ಲಿ ಸ್ಕ್ರಿಪ್ಟ್ ಕಾರ್ಯ ಮುಗಿಯಲಿದೆ ಎನ್ನಲಾಗಿದೆ. ಈಮಧ್ಯೆ 'ಉಪ್ಪಿ ಮತ್ತೆ ಹುಟ್ಟಿ ಬಾ- ಇಂತಿ ಪ್ರೇಮ' ಸಿನೆಮಾದ ಆಡಿಯೋ ಬಿಡುಗಡೆ ಮೇ ಅಂತ್ಯಕ್ಕೆ ನೆರವೇರಲಿದೆ. ಈ ಸಿನೆಮಾದ ಚಿತ್ರೀಕರಣದ ನಂತರದ ಕೆಲಸಗಳು ಭರದಿಂದ ಸಾಗಿದ್ದು ಜೂನ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos