ಬೆಂಗಳೂರು: ಜನಪ್ರಿಯ ತಾರೆ ದರ್ಶನ್ ಅವರ ಸಿನೆಮಾವೊಂದನ್ನು ತರುಣ್ ಸುಧೀರ್ ನಿರ್ದೇಶಿಸುತ್ತಿದ್ದು, ಈಗ ಸ್ಕ್ರಿಪ್ಟ್ ಕಾರ್ಯ ಸಂಪೂರ್ಣಗೊಳಿಸಿದ್ದಾರೆ. ದರ್ಶನ್ ಅಭಿಮಾನಿಗಳಿಗೆ ಸಂತಸ ತರುವ ವಿಷಯದಲ್ಲಿ ಇದು ರಿಮೇಕ್ ಅಲ್ಲ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಯೋಜಿಸಿದ್ದಂತೆ ತರುಣ್ ಅವರು ತಮಿಳು ಹಿಟ್ ಸಿನೆಮಾ 'ವೀರಂ' ರಿಮೇಕ್ ನಿರ್ದೇಶಿಸಬೇಕಿತ್ತು. ಈಗ ಈ ಯೋಜನೆಯನ್ನು ಕೈಬಿಟ್ಟಿದ್ದು, ನಿರ್ದೇಶಕ ಸ್ವಂತ ಕಥೆಯೊಂದಿಗೆ ಹಿಂದಿರುಗಿದ್ದಾರೆ.
ಈಗ ರಿಮೇಕ್ ನಿರ್ದೇಶಿಸುತ್ತಿಲ್ಲ, ಬದಲಾಗಿ ದರ್ಶನ್ ಅವರು ತಾಜಾ ಸ್ಕ್ರಿಪ್ಟ್ ಗೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸುವ ಉತ್ಸಾಹಿ ತರುಣ್ "ಸದ್ಯಕ್ಕೆ ದರ್ಶನ್ 'ತಾರಕ್' ಸಿನೆಮಾದ ಚಿತ್ರೀಕರಣಕ್ಕೆ ಮಲೇಶಿಯಾದಲ್ಲಿದ್ದಾರೆ. ಅವರು ಹಿಂತಿರುಗಿದ ನಂತರ ಅವರಿಗೆ ಸ್ಕ್ರಿಪ್ಟ್ ಓದಲಿದ್ದೇನೆ" ಎನ್ನುತ್ತಾರೆ. ತರುಣ್ ನಿರ್ದೇಶನದ ಚೊಚ್ಚಲ ಚಿತ್ರ 'ಚೌಕ' ಇತ್ತೀಚೆಗಷ್ಟೇ ಶತದಿನ ಪೂರೈಸಿದ್ದು, ೨೦೧೭ ರಲ್ಲಿ ಶತದಿನ ಪ್ರದರ್ಶನ ಕಂಡ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನಿರ್ದೇಶಕ ತಿಳಿಸುವಂತೆ ಈ ಸಿನೆಮಾ ಜನವರಿ ೨೦೧೮ಕ್ಕೆ ಪ್ರಾರಂಭವಾಗಲಿದೆಯಂತೆ. ಇದು ದರ್ಶನ್ 'ಕುರುಕ್ಷೇತ್ರ' ಚಿತ್ರೀಕರಣ ಮುಗಿಸಿದ ನಂತರ ಸೆಟ್ಟೇರಲಿದೆ.
"'ಕುರುಕ್ಷೇತ್ರ' ದರ್ಶನ್ ಅವರ ೫೦ ನೆಯ ಚಿತ್ರವಾಗಿದ್ದು, ನನ್ನದು ೫೧ನೆಯ ಚಿತ್ರವಾಗಲಿದೆ" ಎನ್ನುತ್ತಾರೆ ತರುಣ್. "'ಚೌಕ'ದಂತೆಯೇ ಈ ಬಾರಿಯೂ ವಿಭಿನ್ನ ಕಥೆಯೊಂದನ್ನು ಹೇಳಲಿದ್ದೇನೆ" ಎನ್ನುತ್ತಾರೆ.