ಬೆಂಗಳೂರು: ಯಾವುದೇ ಕಾರಣಕ್ಕೂ ವಿವಾದಿತ ಪದ್ಮಾವತಿ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗಲು ಬಿಡುವುದಿಲ್ಲ ಎಂದು ಕರ್ನಾಟಕದ ರಜಪೂತ ಸಮುದಾಯ ಹೇಳಿದೆ.
ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರಾಷ್ಟ್ರೀಯ ರಜಪೂತ ಕರ್ಣಿ ಸೇನಾ ಕರ್ನಾಟಕ ವಿಭಾಗದ ಮುಖ್ಯಸ್ಥ ಭನ್ವಾರ್ ಸಿಂಗ್ ಅವರು, ಪದ್ಮಾವತಿ ಚಿತ್ರದಲ್ಲಿ ಇತಿಹಾಸವನ್ನು ಮರೆಮಾಚಿ ರಾಜವಂಶಸ್ಥರನ್ನು ಮತ್ತು ರಜಪೂತ ಸಮುದಾಯವನ್ನು ಕೀಳಾಗಿ ಬಿಂಬಿಸಲಾಗಿದೆ. ಚಿತ್ರದಲ್ಲಿ ಐತಿಹಾಸಿಕ ಸತ್ಯಗಳನ್ನೇ ಮರೆ ಮಾಚಿದ್ದು, ಚಿತ್ರದ ವಿರುದ್ಧ ರಜಪೂತ ಸಮುದಾಯದ ಪ್ರತಿಭಟನೆ ಮುಂದುವರೆಯಲಿದೆ ಎಂದು ಹೇಳಿದರು.
ಅಂತೆಯೇ ಇದೇ ನವೆಂಬರ್ 15ರಿಂದ ಚಿತ್ರ ತಂಡದ ವಿರುದ್ಧ ಸ್ವಾಭಿಮಾನ ಪಾದಯಾತ್ರೆ ಕೈಗೊಳ್ಳುವುದಾಗಿ ಹೇಳಿದ ಅವರು, ಬೆಂಗಳೂರಿನ ಟೌನ್ ಹಾಲ್ ನಿಂದ ರ್ಯಾಲಿ ಆರಂಭವಾಗಲಿದೆ ಎಂದು ತಿಳಿಸಿದರು. ಅಂತೆಯೇ ಫ್ರೀಡಂ ಪಾರ್ಕ್ ನಲ್ಲಿ ರ್ಯಾಲಿ ಅಂತ್ಯಗೊಳಿಸಿ, ರಜಪೂತ ಸಮುದಾಯದ ಸಮಾವೇಶ ನಡೆಸಲಾಗುತ್ತದೆ. ಸಭೆಯಲ್ಲಿ ಪದ್ಮಾವತಿ ಚಿತ್ರದ ವಿರುದ್ಧದ ರಜಪೂತ ಸಮುದಾಯ ವಿರೋಧ ಅನಾವರಣವಾಗಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಮತ್ತೋರ್ವ ಸದಸ್ಯ ಉದಯ್ ಸಿಂಗ್ ಅವರು, ಚಿತ್ರದಲ್ಲಿರುವ ವಿವಾದಿತ ಅಂಶಗಳನ್ನು ಚಿತ್ರ ತಂಡ ತೆಗೆದು ಹಾಕಬೇಕು. ಹೀಗಾಗಿ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯಾವುದೇ ಕಾರಣಕ್ಕೂ ಪ್ರಮಾಣ ಪತ್ರ ನೀಡಬಾರದು. ಚಿತ್ರದಲ್ಲಿ ರಜಪೂತ ಸಮುದಾಯ ಮತ್ತು ರಾಜವಂಶಸ್ಥರ ಮನೋಭಾವನೆಗಳಿಗೆ ಧಕ್ಕೆ ತರಲಾಗಿದೆ. ಚಿತ್ರದ ಟ್ರೈಲರ್ ಬಿಡುಗಡೆಗೂ ನಮ್ಮ ವಿರೋಧವಿದೆ ಎಂದು ಅವರು ಸ್ಪಷ್ಟಪಡಿಸಿದರು.
ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರೂ ಕೂಡ ಆಗಿರುವ ಸಂಜಯ್ ಲೀಲಾ ಬನ್ಸಾಲಿ ಅವರು ಕೇವಲ ದುಡ್ಡು ಮಾಡುವ ಉದ್ದೇಶದಿಂದ ಚಿತ್ರವನ್ನು ನಿರ್ಮಿಸಿದ್ದು, ತಮ್ಮ ಹಣದ ಆಸೆಗಾಗಿ ಸಮುದಾಯವೊಂದರ ಮನೋಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಹಣಕ್ಕಾಗಿ ಇತಿಹಾಸವನ್ನೇ ತಿರುಚುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos