ಬೆಂಗಳೂರು: ಇಂದು ಸ್ಯಾಂದಲ್ ಉಡ್ ಅಭಿನವ ಚಕ್ರವರ್ತಿ, ನಟ ಕಿಚ್ಚ ಸುದೀಪ್ ಜನುಮ ದಿನ ಈ ಸಂದರ್ಭದಲ್ಲಿ 'ದಿ ವಿಲನ್' ಟೀಂಮಿನೊಂದಿಗೆ ಫೇಸ್ಬುಕ್ ಲೈವ್ಗೆ ಬಂದ ಸುದೀಪ್ ಹುಟ್ಟುಹಬ್ಬಕ್ಕಾಗಿ ಶುಭ ಕೋರಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.
ಫೇಸ್ ಬುಕ್ ಲೈವ್ನಲ್ಲಿ ಇದೇ ಮೊದಲ ಬಾರಿಗೆ ಬಂದ ಸುದೀಪ್, 'ಹೇಗೆ ರಿಯಾಕ್ಟ್ ಮಾಡಬೇಕೆಂಬುದೇ ಗೊತ್ತಾಗ್ತ ಇಲ್ಲ' ಹೇಳಿದ್ದಲ್ಲದೆ ಕನ್ನಡದ ಇನ್ನೊಬ್ಬ ಖ್ಯಾತ ನಟ ಶಿವರಾಜ್ಕುಮಾರ್ ಅವರೊಂದಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸಿದ ನಿರ್ದೇಶಕ ಪ್ರೇಮ್ಗೆ ಧನ್ಯವಾದ ಅರ್ಪಿಸಿದರು.
ಕಿಚ್ಚ ಸುದೀಪ್ ಹುಟ್ಟುಹಬ್ಬದ ಸಂದರ್ಭದಲ್ಲಿ 'ರಾಜು ಕನ್ನಡ ಮೀಡಿಯಂ' ಟೀಸರ್ ಹಾಗೂ 'ದಿ ವಿಲನ್' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ನಾನೀಗ ದೂರದಲ್ಲಿದ್ದೇನೆ, ಹುಟ್ಟಿದ ದಿನ ಅಭಿಮಾನಿಗಳೊಂದಿಗೆ ಇರದಿರುವುದಕ್ಕೆ ಬೇಸರವಾಗುತ್ತಿದೆ ಎಂದರು. ಆದರೆ ಇದಕ್ಕೆ ಬಲವಾದ ಕಾರಣವಿದ್ದು, ಸದ್ಯದಲ್ಲಿಯೇ ತಿಳಿಸುವುದಾಗಿಯೂ ಹೇಳಿದ್ದಾರೆ.
ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬ ಆಚರಿಸಲು ಜೆ.ಪಿ.ನಗರದ ಸುದೀಪ್ ಮನೆ ಮುಂದೆ ಸಾವಿರಾರು ಅಭಿಮಾನಿಗಳು ಸೇರಿದ್ದರು. ಆದರೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲವೆಂದು ಸುದೀಪ್ ಈ ಮೊದಲೇ ಹೇಳಿದ್ದರು.
ಕಿಚ್ಚನ ಜನುಮದಿನಕ್ಕೆ ನವರಸ ನಾಯಕ ಜಗ್ಗೇಶ್, ಸಂತೋಷ್ ಆನಂದ್ ರಾಮ್, ನೀನಾಸಂ ಸತೀಶ್ ಸೇರಿ ಹಲವಾರು ಅಭಿಮಾನಿಗಳು, ಫ್ಯಾನ್ ಕ್ಲಬ್ ಸದಸ್ಯರು ಟ್ವಿಟರ್ ನಲ್ಲಿ ಶುಭ ಹಾರೈಸಿದ್ದಾರೆ.
ಹುಟ್ಟುಹಬ್ಬದ ಅಂಗವಾಗಿ ಅನೇಕ ಸಾಮಾಜಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.