ಮಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದಿಂದ ಈ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುತ್ತಿದ್ದೇನೆ. ಆದರೆ ಮತದಾರರಿಗೆ ಮತ ಹಾಕಲು ಡ್ರಿಂಕ್ಸ್ ಕೊಡಲ್ಲ, ಸೀರೆ ಹಂಚಲ್ಲ, ಮತವನ್ನು ಬೇಡಲ್ಲ, ಕೈಯಂತೂ ಮುಗಿಯಲ್ಲ, ಮನೆ ಮನೆಗೆ ಕ್ಯಾನ್ವಾಸ್ ಮಾಡಲ್ಲ. ಕ್ಷೇತ್ರಕ್ಕೆ ಏನು ಬೇಕು, ಏನು ಮಾಡಬೇಕು ತಿಳಿದುಕೊಂಡರೆ ಸಾಕು ಎಂದು ನಟ ಹುಚ್ಚ ವೆಂಕಟ್ ಹೇಳಿದ್ದಾರೆ.
ಮಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಅವರು, ನನ್ನ ಗುರಿ ಪ್ರಧಾನ ಮಂತ್ರಿ ಆಗೋದು. ಈಗಿನಿಂದಲೇ ಪ್ರಯತ್ನ ಪಟ್ಟರೆ ಒಂದು ದಿನ ಖಂಡಿತ ಪ್ರಧಾನಿ ಆಗುತ್ತೇನೆ' ಎನ್ನುವ ಮೂಲಕ ಹುಚ್ಚ ವೆಂಕಟ್ ರಾಜಕೀಯದಲ್ಲಿ ಮುಂದೆ ಸಾಗುವ ಕುರಿತು ಭರವಸೆಯ ಮಾತುಗಳನ್ನಾಡಿದರು.
ಮತದಾರರ ಹಣದಿಂದಲೇ ಸಿಎಂ, ಪಿಎಂ, ಎಂಎಲ್ಎಗಳಿಗೆ ಸಂಬಳ ಹೋಗುತ್ತದೆ. ಅವರು ಸರಿಯಾಗಿ ಕೆಲಸ ಮಾಡದೇ ಇದ್ದಾರೆ ಅವರನ್ನು ಕಿತ್ತು ಹಾಕಿ. ನಾನು ಸಿನಿಮಾ ರಂಗದಲ್ಲಿ ಒಳ್ಳೆಯ ಕೆಲಸ ಮಾಡಿದ್ದೇನೆ. ಅಲ್ಲಿ ಯಾರಿಗೂ ಕೈ ಮುಗಿದಿಲ್ಲ. ಅದೇ ರೀತಿಯಲ್ಲಿ ರಾಜಕೀಯದಲ್ಲೂ ಮಾಡುತ್ತೇನೆ. ನಾನು ಯಾರಿಗೂ ದುಡ್ಡು ಕೊಟ್ಟು ತಮಟೆ ಹೊಡೆಸೋಲ್ಲ. ಭಾಷಣಕ್ಕೆ ಹಣ ಕೊಟ್ಟು ಚಪ್ಪಾಳೆ, ವಿಶಲ್ ಹೊಡೆಸಲ್ಲ. ಸರಕಾರದ ದುಡ್ಡು, ಬೆಂಬಲ ಸಿಕ್ಕರೆ ಸಮಾಜಕ್ಕೆ ಒಳ್ಳೆಯದನ್ನು ಮಾಡಬಹುದು ಎಂದರು.
ನಾನು ಪ್ರಧಾನಿಯಾದರೇ ರಸ್ತೆಗಳಲ್ಲಿ ಹೆಣ್ಣು ಮಕ್ಕಳು ಸೀರೆ ಅಥವಾ ಸಲ್ವಾರ್ ತೊಟ್ಟು ಓಡಾಡಬೇಕು ಎಂಬ ಕಾನೂನು ತರುತ್ತೇನೆ ಎಂದು ಹುಚ್ಚ ವೆಂಕಟ್ ಆಶಯ ವ್ಯಕ್ತ ಪಡಿಸಿದ್ದಾರೆ.