ಸಿನಿಮಾ ಸುದ್ದಿ

ನಟ ರಮೇಶ್ ಸಾರಥ್ಯದಲ್ಲಿ ಕನ್ನಡದ ಕೋಟ್ಯಾಧಿಪತಿ-3?

Raghavendra Adiga
ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಕನ್ನಡದ ಕೋಟ್ಯಾಧಿಪತಿಗೆ ಹೊಸ ಸಾರಥಿ ದೊರಕಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿದ್ದ ಕಾರ್ಯಕ್ರಮದ ಹೊಸ ಸೀಜನ್ ನಿರೂಪಣೆಗೆ ಕನ್ನಡದ ಇನ್ನೊಬ್ಬ ಪ್ರಸಿದ್ದ ನಟ ರಮೇಶ್ ಅರವಿಂದ್ ಒಪ್ಪಿದ್ದಾರೆಂದು ಹೇಳಲಾಗಿದೆ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೂಲಕ ಮೋಡಿ ಮಾಡಿದ್ದ ರಮೇಶ್ ಅರವಿಂದ್ ಸ್ಟಾರ್ ಸುವರ್ಣ ವಾಹಿನಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಮೂರನೇ ಸೀಜನ್ ನಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿದೆ.
ಹಿಂದಿಯಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೆಬಿಸಿ ಅತ್ಯಂತ ಜನಪ್ರಿಯವಾಗಿದೆ. ಕನ್ನಡದಲ್ಲಿ ಎರಡು ಸೀಜನ್ ಗಳಲ್ಲಿ ಪುನೀತ್ ರಾಜ್ ಕುಮಾರ್ ನಡೆಸಿಕೊಟ್ಟಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಈ ಬಾರಿ ಪುನೀತ್ ಬದಲಿಗೆ ನಟ ರಮೇಶ್ ಆಗಮನವಾಗಲಿದೆ. ಈ ಸಂಬಂಧ ಮಾತುಕತೆ ಅಂತಿಮ ಹಂತದಲ್ಲಿದೆ. ವಾಹಿನಿಯ ಒಪ್ಪಂದಗಳಿಗೆ ಸಹಿ ಹಾಕುವುದು ಬಾಕಿ ಇದೆ ಎನ್ನಲಾಗಿದೆ.
ಸಧ್ಯ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಪವರ್ ಸ್ಟಾರ್ ಪುನೀತ್ ಇತ್ತೀಚೆಗಷ್ಟೇ ಫ್ಯಾಮಿಲಿ ಪವರ್ ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ’ನಟಸಾರ್ವಭೌಮ’ ಸೇರಿ ನಾನಾ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಕಾರ್ಯಕ್ರಮ ನಿರೂಪಣೆಯಿಂದ ಹಿಂದೆ ಸರಿದಿದ್ದಾರೆ.
ರಮೇಶ್ ಅರವಿಂದ್ ಅವರಿಗೆ ಮುನ್ನ ವಾಹಿನಿಯು ಕಾರ್ಯಕ್ರಮ ನಡೆಸಿಕೊಡುವಂತೆ ನಟ ಯಶ್ ಅವರನ್ನು ಕೇಳಿತ್ತೆನ್ನಲಾಗಿದೆ. ಆದರೆ ಯಶ್ ಚಿತ್ರೀಕರಣಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕಾರಣ ಅವರು ಕಾರ್ಯಕ್ರಮ ನಿರೂಪಣೆಗೆ ಒಪ್ಪಿಲ್ಲ. ಅಂತಿಮವಾಗಿ ರಮೇಶ್ ಅರವಿಂದ್ ಶೋ ನಿರೂಪಕರಾಗಿ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಇಷ್ಟಾಗಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಎಂದಿನಿಂದ ಆರಂಭವಾಗಲಿದೆ ಎನ್ನುವುದರ ಕುರಿತು ವಾಹಿನಿ ಇನ್ನೂ ಸ್ಪಷ್ಟನೆ ನೀಡಿಲ್ಲ.
SCROLL FOR NEXT