ಹೈದರಾಬಾದ್: ಅಪಘಾತದಲ್ಲಿ ಸಾವನ್ನಪ್ಪಿದ ಹರಿಕೃಷ್ಣ ಅವರಿಗೆ ತೆಲುಗು ಚಿತ್ರರಂಗದ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಕಂಬನಿ ಮಿಡಿದಿದ್ದು, ಟ್ವಿಟರ್ ನಲ್ಲಿ ಭಾವುಕ ಸಂದೇಶ ರವಾನಿಸಿದ್ದಾರೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅನ್ನೇಪರ್ತಿ ಬಳಿ ನಂದಮೂರಿ ಹರಿಕೃಷ್ಣ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಅಪಘಾತದಲ್ಲಿ ಹರಿಕೃಷ್ಣ ಅವರು ಭೀಕರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾಮಿನೇನಿ ಆಸ್ಪತ್ರೆಯಲ್ಲಿ ಹರಿಕೃಷ್ಣ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಹರಿಕೃಷ್ಣ ಅವರು ಅಭಿಮಾನಿಯ ಪುತ್ರನ ಮದುವೆಗೆ ತೆರಳುತ್ತಿದ್ದರು. ಬೆಳಗ್ಗೆ 4.30ರ ಸುಮಾರಿನಲ್ಲಿ ಹೈದರಾಬಾದ್ ನಿಂದ ಆಂಧ್ರಪ್ರದೇಶದ ನಲ್ಲೂರಿಗೆ ತಾವೇ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಇನ್ನು ಹರಿಕೃಷ್ಣ ಅವರ ಸಾವಿಗೆ ತೆಲುಗು ಚಿತ್ರರಂಗ ಕಂಬಿನಿ ಮಿಡಿದಿದ್ದು, ಪ್ರಮುಖವಾಗಿ ಹರಿಕೃಷ್ಣ ಅವರನ್ನು ಸ್ವಂತ ಅಣ್ಣ ಎಂಬಂತೆ ಭಾವಿಸಿದ್ದ ನಟ ಅಕ್ಕಿನ್ನೇನಿ ನಾಗಾರ್ಜುನ ಅವರ ಸಾವಿನಿಂದ ಆಘಾತಕ್ಕೊಳಗಾಗಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಭಾವುಕರಾಗಿ ಬರೆದುಕೊಂಡಿರುವ ನಾಗಾರ್ಜುನ, ಕೆಲ ವಾರಗಳ ಹಿಂದಷ್ಟೇ ಅವರೊಂದಿಗೆ ನಾನು ಮಾತನಾಡಿದ್ದ. ನಿನ್ನನ್ನು ನೋಡಿ ತುಂಬಾ ದಿನಗಳಾಯ್ತು ತಮ್ಮ. ನಿನ್ನ ಭೇಟಿ ಮಾಡಬೇಕು ಎಂದೆನಿಸುತ್ತಿದೆ ಎಂದು ಹೇಳಿದ್ದರು. ಆದರೆ ನನ್ನ ಎಂದೂ ಭೇಟಿಲಾಗದಷ್ಟು ದೂರಕ್ಕೆ ಹೋಗಿದ್ದಾರೆ. ಐ ಮಿಸ್ ಯೂ ಅಣ್ಣಾ ಎಂದು ನಾಗಾರ್ಜುನ ಟ್ವೀಟ್ ಮಾಡಿದ್ದಾರೆ.
ನಾಗ್ ಜನ್ಮದಿನಕ್ಕೆ ಬೇಡವಾದ ಉಡುಗೊರೆ
ಇನ್ನು ವಿಪರ್ಯಾಸವೆಂದರೆ ಇಂದೇ ಅಕ್ಕಿನೇನಿ ನಾಗಾರ್ಜುನ್ ಅವರ ಜನ್ಮ ದಿನವಾಗಿದ್ದು, ಅವರು ಅಣ್ಣ ಎಂದು ಭಾವಿಸಿದ್ದ ಹರಿಕೃಷ್ಣ ಅವರ ಸಾವು ನಾಗಾರ್ಜುನ ಅವರಿಗೆ ಅತೀವ ದುಃಖಕ್ಕೆ ಕಾರಣವಾಗಿದೆ. ಹರಿಕೃಷ್ಣ ಮತ್ತು ನಾಗಾರ್ಜುನ ಎಷ್ಟು ಆಪ್ತರೆಂದರೆ ಅವರಿಬ್ಬರು ಸ್ವಂತ ಅಣ್ಣ ತಮ್ಮಂದಿರು ಎನ್ನಲಾಗುತ್ತಿತ್ತು. ಅವರ ಸ್ನೇಹ ಪ್ರೀತಿಗೆ ಸಾಕ್ಷಿಯಾಗಿ ಇವರಿಬ್ಬರೂ 1999ರಲ್ಲಿ ಸೀತಾರಾಮರಾಜು ಎಂಬ ಚಿತ್ರದಲ್ಲಿ ಅಣ್ಣ ತಮ್ಮಂದಿರಾಗಿ ನಟಿಸಿದ್ದರು. ಈ ಚಿತ್ರ ದೊಡ್ಡ ಮಟ್ಟದ ಯಶಸ್ಸು ಕೂಡ ಸಾಧಿಸಿತ್ತು. ಇದೇ ಚಿತ್ರ ನಟ ರವಿತೇಜ ಅವರಿಗೂ ದೊಡ್ಡ ಹೆಸರು ತಂದುಕೊಟ್ಟಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos