ಅರ್ಜುನ್ ಸರ್ಜಾ ಮತ್ತು ಪ್ರೇಮ ಬರಹ ಚಿತ್ರದ ದೃಶ್ಯ
ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಪ್ರತಿಭಾವಂತ ನಟ ಅರ್ಜುನ್ ಸರ್ಜಾ ಅವರು ನಿರ್ದೇಶಿಸಿ ನಿರ್ಮಾಣ ಮಾಡಿರುವ ದ್ವಿಭಾಷಾ ಚಿತ್ರ ಪ್ರೇಮ ಬರಹ ಬಿಡುಗಡೆಗೆ ಸಿದ್ದವಾಗಿದೆ. ತಮಿಳಿನಲ್ಲಿ ಸೊಲ್ಲಿವಿದವ ಎಂಬ ಹೆಸರಿನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ತಮ್ಮ ಪುತ್ರಿ ಐಶ್ವರ್ಯಾ ಅರ್ಜುನ್ ಗಾಗಿ ತಯಾರಿಸಿರುವ ಚಿತ್ರವಿದು. ಇದೇ ಶುಕ್ರವಾರ ಚಿತ್ರ ಬಿಡುಗಡೆಯಾಗುತ್ತಿದ್ದು ಈ ಸಂದರ್ಭಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಸಿನಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ್ದಾರೆ.
ಆಕ್ಷನ್ ಕಿಂಗ್ ಆಗಿದ್ದವರು ಚಿತ್ರ ನಿರ್ದೇಶಕ ಹೇಗೆ ಆದಿರಿ ಎಂದು ಕೇಳಿದ್ದಕ್ಕೆ, ಒಬ್ಬ ನಿರ್ದೇಶಕನಾಗಿ ಎಲ್ಲಾ ರೀತಿಯ ಕಥೆಗಳಿಗೆ ಮತ್ತು ಎಲ್ಲಾ ವರ್ಗದವರಿಗೆ ಇಷ್ಟವಾಗುವಂತಹ ಚಿತ್ರವನ್ನು ನಿರ್ದೇಶಿಸಬೇಕಾಗುತ್ತದೆ. ಆರಂಭದಲ್ಲಿ ಪ್ರೇಮ ಬರಹ ಚಿತ್ರಕ್ಕೆ ನಾನೇ ಹೀರೋ ಆಗಬೇಕೆಂದುಕೊಂಡೆ. ಆದರೆ ನನಗೆ ಆ ಪಾತ್ರ ಹೊಂದಿಕೆಯಾಗಲಿಕ್ಕಿಲ್ಲ ಎನಿಸಿತು. ಕೆಲ ಸಮಯಗಳು ಕಳೆದ ನಂತರ ನನ್ನ ಪುತ್ರಿ ಐಶ್ವರ್ಯಾಗೆ ಪ್ರೇಮ ಬರಹ ಸಿನಿಮಾ ಮಾಡಿದೆ. ಈ ಚಿತ್ರದಲ್ಲಿ ಪ್ರೀತಿ ಮಾತ್ರವಲ್ಲದೆ ತಮಾಷೆ, ಕೌಟುಂಬಿಕ ಭಾವನೆಗಳು ಮತ್ತು ದೇಶಭಕ್ತಿ ಕೂಡ ಇದೆ ಎಂದರು.
ಈ ಚಿತ್ರ ಆರಂಭಿಸುವ ಮೊದಲು ಅರ್ಜುನ್ ಸರ್ಜಾ ಅವರು ತಮ್ಮ ಮಗಳಿಗೆ ಮೂರು ಕಥೆಗಳನ್ನು ಹೇಳಿದ್ದರಂತೆ. ಅದರಲ್ಲಿ ಐಶ್ವರ್ಯಾ ಒಪ್ಪಿಕೊಂಡಿದ್ದು ಪ್ರೇಮ ಬರಹ. ಸಿನಿಮಾ ಸೆಟ್ ನಲ್ಲಿ ನಾವಿಬ್ಬರು ತಂದೆ-ಮಗಳು ಎಂಬುದನ್ನು ಪಕ್ಕಕ್ಕಿಟ್ಟು ನಿರ್ದೇಶಕ ಮತ್ತು ನಟಿಯಾಗಿದ್ದೆವು ಎನ್ನುತ್ತಾರೆ ಸರ್ಜಾ.
53ರ ವಯಸ್ಸಿನಲ್ಲಿ ಪ್ರೇಮ ಬರಹ ಸಿನಿಮಾ ನಿರ್ದೇಶಿಸುವಾಗ ಏನನ್ನಿಸಿತು ಎಂದು ಕೇಳಿದರೆ, ಯುವಜನತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಸಿನಿಮಾ ಮಾಡುವಾಗ ಇನ್ನಷ್ಟು ಹುಮ್ಮಸ್ಸು ಬರುತ್ತದೆ. ನಾನಿನ್ನೂ 25ರ ಹರೆಯದವನು ಎಂಬ ಭಾವನೆ ಉಂಟಾಗುತ್ತದೆ.
ಸಿನಿಮಾ ಉದ್ಯಮದಲ್ಲಿ ಬೇಡಿಕೆಯಲ್ಲಿ ಉಳಿಯಬೇಕೆಂದರೆ ಇಲ್ಲಿನ ಆಗುಹೋಗುಗಳಿಗೆ ಸ್ಪಂದಿಸಿ ಕಾಲಕಾಲಕ್ಕೆ ಅಪ್ ಡೇಟ್ ಆಗುತ್ತಿರಬೇಕು. ಇಂದಿನ ಯುವಜನತೆಯ ಮನೋಧರ್ಮ ನಮ್ಮ ಕಾಲದಲ್ಲಿದ್ದಂತೆ ಇಲ್ಲ. ಹಿಂದೆ ಎಷ್ಟೇ ಹಿಟ್ ಸಿನಿಮಾಗಳನ್ನು ನೀಡಿದ್ದರೂ ಕೂಡ ಇಂದಿನ ಅಗತ್ಯಕ್ಕೆ ತಕ್ಕಂತೆ ನಟ, ನಟಿಯರು ಮತ್ತು ನಿರ್ದೇಶಕರು ಬದಲಾಗಬೇಕಿರುವುದು ಮುಖ್ಯ ಎಂದು ತಮ್ಮ ಅನುಭವಗಳನ್ನು ಹೇಳಿಕೊಳ್ಳುತ್ತಾರೆ.
ಎರಡು ಭಾಷೆಗಳಲ್ಲಿ ಚಿತ್ರ ನಿರ್ಮಾಣ ಮಾಡಿ ನಿರ್ದೇಶಿಸಲು ಕಷ್ಟವಾಗಲಿಲ್ಲವೇ ಎಂದು ಕೇಳಿದಾಗ, ಕೆಲಸದ ಮೇಲೆ ಆಸಕ್ತಿಯಿದ್ದರೆ ಕಷ್ಟವೆನಿಸುವುದಿಲ್ಲ. ಹೊಸದನ್ನು ಮತ್ತು ಅಸಾಮಾನ್ಯವಾದದ್ದನ್ನು ಕೊಡಬೇಕೆನ್ನುವ ಉತ್ಸಾಹ ನನ್ನನ್ನು ಈ ಕೆಲಸ ಮಾಡಿಸಿತು ಎನ್ನುತ್ತಾರೆ.
ನನ್ನ ಮಗಳು ಐಶ್ವರ್ಯಾ ಚಿತ್ರವನ್ನು ಪ್ರೇಕ್ಷಕರ ಜೊತೆ ನೋಡಿದ ನಂತರ ಆಕೆಯ ಜೊತೆ ಮಾತನಾಡುವೆ ಎನ್ನುವ ಅರ್ಜುನ್ ಸರ್ಜಾ, ತಮ್ಮ ಜೀವನದಲ್ಲಿ ಹನುಮಂತ ದೇವರ ಪ್ರಾಧಾನ್ಯತೆ ಮತ್ತು ನಟ ದರ್ಶನ್ ಹನುಮಂತನ ಹಾಡಿಗೆ ಹೆಜ್ಜೆ ಹಾಕಿರುವ ಕುರಿತು ಮಾತನಾಡಿದ್ದಾರೆ.
ಹಾಡಿನಲ್ಲಿ ದರ್ಶನ್, ಚಿರಂಜೀವಿ ಸರ್ಜಾ ಮತ್ತು ಧೃವ ಸರ್ಜಾ ಅತಿಥಿಗಳಾಗಿ ಬಂದು ಹೋಗುತ್ತಾರೆ. ಈ ಹಾಡಿಗೆ ದರ್ಶನ್ ಅವರನ್ನು ಕೇಳಿಕೊಂಡಾಗ ಖುಷಿಯಿಂದ ಅವರು ಒಪ್ಪಿಕೊಂಡರು. ಅದು ಅವರ ಸರಳತೆ ಮತ್ತು ವಿನಯ ಗುಣವನ್ನು ತೋರಿಸುತ್ತದೆ. ನನ್ನ 37 ವರ್ಷಗಳ ಸಿನಿಮಾ ವೃತ್ತಿಯಲ್ಲಿ ತೆಲುಗಿನ ಜಗಪತಿ ಬಾಬು ನಂತರ ಮತ್ತೊಬ್ಬ ಅತ್ಯಂತ ಸರಳ ವ್ಯಕ್ತಿಯನ್ನು ಭೇಟಿ ಮಾಡಿರುವುದೆಂದರೆ ಕನ್ನಡದಲ್ಲಿ ದರ್ಶನ್ ಎಂದು ಹೊಗಳಿದರು ಅರ್ಜುನ್ ಸರ್ಜಾ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos